ಆಹಾರ ಸರಿಯಿಲ್ಲವೆಂದು ಮುಂಬೈನಲ್ಲಿ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದ ಏಕನಾಥ್ ಶಿಂಧೆ ಬಣದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಕರ್ನಾಟಕದ (ಶೆಟ್ಟಿ)ಬಂಟರ ಸಮುದಾಯದ ವಿರುದ್ಧ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದ ಹುಟ್ಟು ಹಾಕಿದ್ದಾರೆ.
ಹಲ್ಲೆ ನಡೆಸಿದ ವಿಚಾರವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಸಂಜಯ್ ಗಾಯಕ್ವಾಡ್, “ಈ ಶೆಟ್ಟಿಗಳು ಬಹಳ ಸಮಯದಿಂದ ನಮ್ಮ ಜೀವನದ ಜೊತೆ ಆಟವಾಡುತ್ತಿದ್ದಾರೆ. ಇಂದು ಅವರು ನನ್ನ ಜೀವದ ಜೊತೆ ಆಟವಾಡಲು ಪ್ರಯತ್ನಿಸಿದರು. ನನ್ನ ಆರೋಗ್ಯ ಸರಿಯಿಲ್ಲ, ಕಳೆದ 20 ವರ್ಷಗಳಿಂದ ನಾನು ಅದರ ಬಗ್ಗೆ ಚಿಂತೆ ಮಾಡುತ್ತಿದ್ದೇನೆ. ಸಣ್ಣದೊಂದು ತಪ್ಪು ಕೂಡ ನನಗೆ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ” ಎಂದು ಹೇಳಿದ್ದಾರೆ.
“ವಿರೋಧ ಪಕ್ಷಗಳು ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ದಕ್ಷಿಣದ ಈ ಶೆಟ್ಟಿಗಳು ಮಹಾರಾಷ್ಟ್ರದ ಸಂಸ್ಕೃತಿಯನ್ನು ಅಪಖ್ಯಾತಿಗೊಳಿಸಿದ್ದಾರೆಂದು ಅವರಿಗೆ ತಿಳಿದಿಲ್ಲವೇ, ಅದು ಡ್ಯಾನ್ಸ್ ಬಾರ್ಗಳಾಗಲಿ ಅಥವಾ ಲೇಡೀಸ್ ಬಾರ್ಗಳಾಗಲಿ. ಈ ವಿಷಯಗಳು ಮಹಾರಾಷ್ಟ್ರದಲ್ಲಿ ಬಹಳ ಹಿಂದಿನಿಂದಲೂ ನಡೆಯುತ್ತಿವೆ. ಇವೆಲ್ಲವನ್ನು ಶೆಟ್ಟಿ ಸಮುದಾಯ ನಿರ್ವಹಿಸುತ್ತಿದೆ. ಶೆಟ್ಟಿ ಎಂದು ಹಣೆಯಲ್ಲಿ ಬರೆಯದಿದ್ದರೂ ಹೋಟೆಲ್ಗಳನ್ನೆಲ್ಲ ಅವರು ನೆಡೆಸುತ್ತಿದ್ದಾರೆ ” ಎಂದು ಕರ್ನಾಟಕ ಬಂಟರ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡಿದರು.
ಕ್ಯಾಂಟೀನ್ ಉದ್ಯೋಗಿ ಮರಾಠಿಯಾಗಿದ್ದರೆ ನೀವು ಅವರ ಮೇಲೆ ಹಲ್ಲೆ ನಡೆಸುತ್ತಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಗಾಯಕ್ವಾಡ್, “ಇದು ಮರಾಠಿಗಳ ಬಗ್ಗೆ ಪ್ರಶ್ನೆಯಲ್ಲ. ಮೊದಲನೆಯದಾಗಿ, ಮರಾಠಿಗಳು ಅಂತಹ ತಪ್ಪನ್ನು ಮಾಡುತ್ತಿರಲಿಲ್ಲ. ಮಹಾರಾಷ್ಟ್ರದ ಜನರು ಎಂದಿಗೂ ಡ್ಯಾನ್ಸ್ ಬಾರ್ ಅಥವಾ ಲೇಡೀಸ್ ಬಾರ್ ಅನ್ನು ನಡೆಸುತ್ತಿರಲಿಲ್ಲ, ಅವರು ಎಂದಿಗೂ ಅಂತಹ ಕೃತ್ಯಗಳನ್ನು ಮಾಡಿಲ್ಲ. ಹೊರಗಿನವರು ಮಾತ್ರ ಅಂತಹ ಕೃತ್ಯಗಳನ್ನು ಮಾಡುತ್ತಾರೆ. ಈ ಹಿಂದೆ ಬಾಳಾಸಾಹೇಬ್ ಕೂಡ ಇವುಗಳ ವಿರುದ್ಧ ಪ್ರತಿಭಟಿದ್ದರು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದಾಖಲೆ ಬರೆದ ಶಕ್ತಿ ಯೋಜನೆ: ಆಡಿದ್ದನ್ನು ಮಾಡಿ ತೋರಿಸಿದ ಸರ್ಕಾರ
ಚರ್ಚ್ಗೇಟ್ನಲ್ಲಿರುವ ಆಕಾಶವಾಣಿ ಶಾಸಕರ ಕ್ಯಾಂಟೀನ್ ಉದ್ಯೋಗಿ ಯೋಗೇಶ್ ಕುತ್ರನ್ ಅವರಿಗೆ ಬುಲ್ದಾನ ಕ್ಷೇತ್ರದ ಏಕ್ನಾಥ್ ಶಿಂಧೆ ಬಣದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಭಾರಿ ವಿವಾದಕ್ಕೆ ಕಾರಣವಾಯಿತು. ಗಾಯಕ್ವಾಡ್ ಮಂಗಳವಾರ ರಾತ್ರಿ ಕ್ಯಾಂಟೀನ್ನಿಂದ ಭೋಜನಕ್ಕೆ ಆರ್ಡರ್ ಮಾಡಿದ್ದರು. ಆದರೆ ಅವರ ಕೋಣೆಯಲ್ಲಿ ವಿತರಿಸಲಾದ ಬೇಳೆ ಮತ್ತು ಅಕ್ಕಿ ಹಳಸಿ ದುರ್ವಾಸನೆ ಬೀರುತ್ತಿರುವುದು ಕಂಡುಬಂದಿದೆ. ಇದರಿಂದ ಕೋಪಗೊಂಡ ಶಾಸಕರು ಕ್ಯಾಂಟೀನ್ಗೆ ನುಗ್ಗಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವಿಡಿಯೋ ರಾಜಕೀಯ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಾಸಕರೊಬ್ಬರ ಇಂತಹ ವರ್ತನೆ ಸದನದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಹೇಳಿದ್ದರು.
“ನಾವು ಜನರ ಪ್ರತಿನಿಧಿಗಳು ಮತ್ತು ನಮಗೆ ಕೆಲವು ಜವಾಬ್ದಾರಿಗಳಿವೆ. ಗಾಯಕ್ವಾಡ್ ಅವರ ಕ್ರಮವನ್ನು ನಾನು ಖಂಡಿಸುತ್ತೇನೆ. ಯಾರನ್ನಾದರೂ ಕಪಾಳಮೋಕ್ಷ ಮಾಡುವುದು ತಪ್ಪು ಎಂದು ನಾನು ಅವರಿಗೆ ಹೇಳಿದ್ದೇನೆ” ಎಂದು ಡಿಸಿಎಂ ಏಕನಾಥ್ ಶಿಂಧೆ ಹೇಳಿದ್ದರು. ಆದಾಗ್ಯೂ, ಗಾಯಕ್ವಾಡ್ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ.
ಸಂಜಯ್ ಗಾಯಕ್ವಾಡ್ ಅವರಿಗೆ ವಿವಾದಗಳಿಗೆ ಹೊಸದೇನಲ್ಲ . ಕಳೆದ ವರ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಾಲಿಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿ ವಿವಾದವನ್ನು ಹುಟ್ಟುಹಾಕಿದ್ದರು.
ಪೊಲೀಸ್ ಸಿಬ್ಬಂದಿ ಕೈಯಲ್ಲಿ ತಮ್ಮ ವಾಹನವನ್ನು ಸ್ವಚ್ಛಗೊಳಿಸಿ ಸುದ್ದಿಯಾಗಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ, ಶಾಸಕರು 1987 ರಲ್ಲಿ ಹುಲಿಯನ್ನು ಬೇಟೆಯಾಡಿದ್ದಾಗಿ ಹೇಳಿಕೊಂಡು ಅದರ ಹಲ್ಲನ್ನು ಕುತ್ತಿಗೆಗೆ ಕಟ್ಟಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ನಂತರ ಶಾಸಕರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.