- ಆರ್ಎಸ್ಎಸ್ನ ಮೆರವಣಿಗೆ ಪ್ರಶ್ನಿಸಿ ಮಾರ್ಚ್ 3ರಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ತಮಿಳುನಾಡು
- ರಾಜ್ಯದಲ್ಲಿ ಮೆರವಣಿಗೆ ನಡೆಸಲು ಆರ್ಎಸ್ಎಸ್ಗೆ ಈ ಹಿಂದೆ ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್
ತಮಿಳುನಾಡು ರಾಜ್ಯದಲ್ಲಿ ಆರ್ಎಸ್ಎಸ್ ಮೆರವಣಿಗೆ ಸಂಬಂಧ ಅವಕಾಶ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಏಪ್ರಿಲ್ 11) ವಜಾಗೊಳಿಸಿದೆ.
ಈ ಹಿಂದೆ ತಮಿಳುನಾಡಿನಲ್ಲಿ ಮೆರವಣಿಗೆ ನಡೆಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್ಎಸ್ಎಸ್) ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು. ಇದನ್ನು ತಮಿಳುನಾಡು ಸರ್ಕಾರ ಪ್ರಶ್ನಿಸಿತ್ತು.
ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಮತ್ತು ‘ಗಾಂಧಿ ಜಯಂತಿ’ ಅಂಗವಾಗಿ ರಾಜ್ಯದಲ್ಲಿ ಮೆರವಣಿಗೆ ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಬೇಕು ಎಂದು ಆರ್ಎಸ್ಎಸ್ ಕಳೆದ ಅಕ್ಟೋಬರ್ನಲ್ಲಿ ಕೋರಿತ್ತು.
ಆದರೆ ರಾಜ್ಯ ಸರ್ಕಾರ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರ್ಎಸ್ಎಸ್ ಮದ್ರಾಸ್ ಹೈಕೋರ್ಟ್ ಮೊರೆ ಹೋಯಿತು.
ಆರ್ಎಸ್ಎಸ್ ಪ್ರಾತಿನಿಧ್ಯವನ್ನು ಪರಿಗಣಿಸಿ, ಕಾರ್ಯಕ್ರಮಗಳನ್ನು ಆಯೋಜಿಸಲು ಯಾವುದೇ ಷರತ್ತುಗಳಿಲ್ಲದೆ ಅವಕಾಶ ಕಲ್ಪಿಸುವಂತೆ 2022ರ ಸೆಪ್ಟೆಂಬರ್ 22ರಂದು ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿತ್ತು.
ಈ ಸುದ್ದಿ ಓದಿದ್ದೀರಾ? ಒಟಿಟಿಗೆ ಬರಲು ಸಜ್ಜಾದ ʼದಸರಾʼ
ಆದರೆ, ಕಳೆದ ನವೆಂಬರ್ನಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆರ್ಎಸ್ಎಸ್ಗೆ ಪಥಸಂಚಲನ ನಡೆಸಲು ಅನುಮತಿಸಿತ್ತು. ಆದರೆ ಫೆಬ್ರವರಿ 10ರಂದು ಯಾವುದೇ ಷರತ್ತಿಲ್ಲದೆ ಅವಕಾಶ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ಪುನರುಚ್ಛರಿಸಿತ್ತು.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮಾರ್ಚ್ 3ರಂದು ಅರ್ಜಿ ಸಲ್ಲಿಸಿದ್ದ ತಮಿಳುನಾಡು, ಆರ್ಎಸ್ಎಸ್ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಆದರೆ, ಗುಪ್ತಚರ ಮಾಹಿತಿ ಪ್ರಕಾರ ಎಲ್ಲ ಬೀದಿಗಳಲ್ಲಿಯೂ ಮೆರವಣಿಗೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ರಾಜ್ಯದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆಸುವುದರಿಂದ ಇಲ್ಲಿನ ಹಿಂದಿ ಬಾಷೆಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಎಂದು ತಮಿಳುನಾಡು ಸಲ್ಲಿಸಿದ ಅರ್ಜಿಯಲ್ಲಿ ಹೇಳಿತ್ತು.