ಹಿಂಡನ್ಬರ್ಗ್ ಆರೋಪಗಳ ನಂತರ ಅದಾನಿ ಸಮೂಹದ ಷೇರುಗಳು ಕುಸಿತ ಕಂಡ ಬಗ್ಗೆ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು ಮೇಲ್ನೋಟಕ್ಕೆ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಅದಾನಿ ಸಮೂಹಕ್ಕೆ ಕ್ಲೀನ್ ಚಿಟ್ ನೀಡಿದೆ. ಅಲ್ಲದೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಕಡೆಯಿಂದಲೂ ಯಾವುದೇ ನಿಯಂತ್ರಣ ವೈಫಲ್ಯವೂ ಕಂಡುಬಂದಿಲ್ಲ ಎಂದು ಸಮಿತಿ ತಿಳಿಸಿದೆ.
ಅದಾನಿ ಸಮೂಹವು ಯಾವುದೇ ರೀತಿಯಲ್ಲೂ ಷೇರುಗಳ ಬೆಲೆಗಳನ್ನು ತಿರುಚಿಲ್ಲ. ಹಾಗೂ ಚಿಲ್ಲರೆ ಹೂಡಿಕೆದಾರರ ಹಿತ ಕಾಪಾಡಲು ಸಂಘಟಿತ ಸಂಸ್ಥೆಯು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ವಿವಿಧ ವಲಯಗಳ ತಜ್ಞರ ಸುಪ್ರೀಂ ಕೋರ್ಟ್ ಸಮಿತಿ ಹೇಳಿದೆ.
ಷೇರುಗಳು ಈಗ ಸ್ಥಿರವಾಗಿದ್ದು, ಕಂಪನಿಯು ತೆಗೆದುಕೊಂಡ ಕ್ರಮಗಳು ಷೇರಿನ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದೂ ತಿಳಿಸಿದೆ.
ಕನಿಷ್ಠ ಸಾರ್ವಜನಿಕ ಷೇರು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಕ ವೈಫಲ್ಯ ಕಂಡುಬಂದಿಲ್ಲ ಹಾಗೂ ಅನುಸರಣೆಗಳ ಉಲ್ಲಂಘನೆಯೂ ಆಗಿಲ್ಲ. ತನ್ನ ಅನುಮಾನವನ್ನು, ಕಾನೂನು ಉಲ್ಲಂಘನೆಯ ಆರೋಪವಾಗಿ ವಿಚಾರಣೆಗೆ ಒಳಪಡಿಸುವ ದೃಢವಾದ ಪ್ರಕರಣವಾಗಿ ಬದಲಾಯಿಸಬಹುದು ಎಂಬುದನ್ನು ಸಾಬೀತುಪಡಿಸಲು ನಿಯಂತ್ರಕರಿಗೆ ಸಾಧ್ಯವಾಗಲಿಲ್ಲ. ಅದಾನಿ ಸಮೂಹದ ಷೇರುಗಳಲ್ಲಿನ ವಿದೇಶಿ ಬಂಡವಾಳ ಹೂಡಿಕೆದಾರರು ಸೆಬಿಯ ನಿಯಮಗಳಿಗೆ ಬದ್ಧರಾಗಿದ್ದಾರೆ ಎಂಬುದಾಗಿಯೂ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಈ ಸುದ್ದಿ ಓದಿದ್ದೀರಾ? ಜ್ಞಾನವಾಪಿ ಮಸೀದಿ ಪ್ರಕರಣ; ಶಿವಲಿಂಗದ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ವರದಿಯ ಹಿನ್ನೆಲೆ ಅದಾನಿ ಷೇರುಗಳಲ್ಲಿನ ಬೆಲೆ ತಿರುಚುವಿಕೆಯ ಬಗ್ಗೆ ಪರಿಶೀಲಿಸಲು ಸೆಬಿಗೆ ಸೂಚಿಸಲಾಗಿತ್ತು. ಇದರ ಬಗ್ಗೆ ಸೆಬಿ ತನಿಖೆ ನಡೆಸುತ್ತಿದ್ದು, ಸಮಿತಿಯು ಈ ಬಗ್ಗೆ ಪ್ರತಿಕ್ರಿಯಿಸದಿರಲು ನಿರ್ಧರಿಸಿದೆ.
ಅಲ್ಲದೆ, ಸಮಿತಿಯ ವರದಿಯು ಶಾಸಕಾಂಗದ ಭಾಗದ ನಿಯಂತ್ರಕ ವೈಫಲ್ಯದ ಪತ್ತೆಗೆ ಬರುವುದು ಕಷ್ಟ. ಆದರೆ ಪರಿಣಾಮಕಾರಿ ಜಾರಿ ನೀತಿಯ ಅವಶ್ಯಕತೆ ಇದೆ. ಆದ್ದರಿಂದ, ಜಾರಿ ನೀತಿಯು ಸೆಬಿ ಅಳವಡಿಸಿಕೊಂಡ ಶಾಸಕಾಂಗ ನೀತಿಗೆ ಅನುಗುಣವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸಮಿತಿಯ ವರದಿ ಸಲಹೆ ನೀಡಿದೆ.
ಕೆಲವು ದಿನಗಳ ಹಿಂದೆ, ಅದಾನಿ ಸಮೂಹದ ವಿರುದ್ಧ ಅಮೆರಿಕದ ಶಾರ್ಟ್ ಸೆಲ್ಲರ್ಸ್ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಮಾಡಿದ ಕಂಪನಿಗಳು ಷೇರು ಬೆಲೆಗಳನ್ನು ತಿರುಚುತ್ತಿದೆ ಎಂಬ ಕುರಿತ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್, ಮಾರುಕಟ್ಟೆ ನಿಯಂತ್ರಕ ಸೆಬಿಗೆ ಆಗಸ್ಟ್ 14, 2023 ರವರೆಗೆ ಮೂರು ತಿಂಗಳ ಸಮಯ ನೀಡಿತ್ತು.