ಇದು ಬುಲೆಟ್ ಟ್ರೈನ್ ಕಥೆ. ಬರೀ ಬುಲೆಟ್ ಟ್ರೈನ್ ಕಥೆಯಷ್ಟೇ ಅಲ್ಲ. ಬುಡಕಟ್ಟು ಜನರ ಭೂಮಿಯ ಮೇಲೆ ಹಳಿ ಎಳೆದು, ಬದುಕನ್ನು ಬೀದಿ ಪಾಲು ಮಾಡುತ್ತಿರುವ ಬಂಡವಾಳಶಾಹಿಗಳ ಪೋಷಕ ಪ್ರಭುತ್ವದ ಕಥೆ.
ಬಲವಂತರನ್ನು ತುಷ್ಟೀಕರಿಸಲು ಸರ್ಕಾರ ತರುವ ಯೋಜನೆಗಳು ಬಲಹೀನರ ಬದುಕಿನ ಮೇಲೆ ಬರೆ ಎಳೆದುಬಿಡುತ್ತವೆ. ಮಹಾರಾಷ್ಟ್ರದಲ್ಲಿನ ನಾಲ್ಕು ಪರಿಶಿಷ್ಟ ಪಂಗಡದ ಮೀಸಲು ಲೋಕಸಭಾ ಕ್ಷೇತ್ರದ ಜನರು ಮೋದಿ ಮತ್ತು ಬಿಜೆಪಿ ಸರ್ಕಾರದ ಮೇಲೆ ಸಿಟ್ಟಾಗಲು ಇದುವೇ ಪ್ರಮುಖ ಕಾರಣವಾಗಿ ಹೊಮ್ಮಿದೆ.
ಬಿಜೆಪಿ ಕೊಟ್ಟ ಖಾಲಿ ಚೀಲಗಳನ್ನು ವಾಪಸ್ ಕೊಟ್ಟು, “ನಮಗೆ ನಿಮ್ಮಅಕ್ಕಿ ಬೇಕಿಲ್ಲ ಸ್ವಾಮಿ, ಅದು ಕೂಡ ನೀವು ಕೊಟ್ಟಿದ್ದು ಖಾಲಿ ಚೀಲ. ನಿಮ್ಮ ಭರವಸೆಗಳೆಲ್ಲವೂ ಖಾಲಿ ಖಾಲಿ. ನಮಗೆ ಬದುಕು ಬೇಕು, ನಿಮ್ಮ ಬುಲೆಟ್ ಟ್ರೈನ್ ನಿಂದ ಹೊಟ್ಟೆ ತುಂಬುತ್ತಾ? ಭೂಮಿಯ ಆಸರೆ ಸಿಗುತ್ತಾ? ಉದ್ಯೋಗ ಸಿಗುತ್ತಾ?” ಎಂದು ಪ್ರಶ್ನಿಸುತ್ತಿದ್ದಾರೆ. ಮೋದಿ ಭಾವಚಿತ್ರಗಳಿದ್ದ ಖಾಲಿ ಅಕ್ಕಿ ಜೀಲ ಮತ್ತು ಬಿಜೆಪಿ ಕೊಟ್ಟ ಸೀರೆಗಳನ್ನು ತಹಸೀಲ್ದಾರ್ ಕಚೇರಿಗೆ ವಾಪಸ್ ಕೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲ್ಗಾರ್, ದಿಂಡೋರಿ, ಗಡ್ಚಿರೋಲಿ-ಚಿಮೂರ್ ಮತ್ತು ನಂದೂರ್ಬಾರ್- ಈ ನಾಲ್ಕು ಲೋಕಸಭಾ ಕ್ಷೇತ್ರಗಳು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಪಾಲ್ಗಾರ್ ಕ್ಷೇತ್ರದಲ್ಲಂತೂ ಶೇ. 40ರಷ್ಟು ಬುಡಕಟ್ಟು ಮತದಾರರಿದ್ದಾರೆ. 2014 ಮತ್ತು 2019ರಲ್ಲಿ ಪಾಲ್ಗಾರ್, ಗಡ್ಚಿರೋಲಿ-ಚಿಮೂರ್ ಮತ್ತು ನಂದೂರ್ಬಾದ್ ಕ್ಷೇತ್ರಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿತ್ತು. ದಿಂಡೋರಿಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ.
ಗಡ್ಚಿರೋಲಿ ಚಿಮೂರ್ನಲ್ಲಿ ಕಳೆದ ಐದಾರು ವರ್ಷಗಳಿಂದ ಬುಡಕಟ್ಟು ಜನರು ಸರ್ಕಾರದ ವಿರುದ್ಧ ಸೆಣಸಾಡುತ್ತಿದ್ದಾರೆ. ಇಲ್ಲಿನ ಅರಣ್ಯ ಭೂಮಿಯನ್ನು ಕಸಿದು ಸೂರಜ್ಗಡ್ ಬೆಟ್ಟದಲ್ಲಿ ಕಬ್ಬಿಣ ಅದಿರು ಗಣಿಗೆ ಅಸ್ತು ಎಂದಿದ್ದು ಜನರನ್ನು ರೊಚ್ಚಿಗೆಬ್ಬಿಸಿದೆ. ಇದು ಮಾವೊವಾದಿ ತೀವ್ರ ಚಟುವಟಿಕೆಗಳಿಗೂ ಕಾರಣವಾಗಿರುವುದು ದುರಂತವೇ ಸರಿ. ನಂದೂರ್ಬಾರ್ ಮತ್ತು ದಿಂಡೋರಿ ಕ್ಷೇತ್ರಗಳಲ್ಲಿ ಆರೋಗ್ಯ ಸೇವೆಯ ನಿರ್ಲಕ್ಷ್ಯ ಮತ್ತು ನಿರುದ್ಯೋಗವೇ ಚುನಾವಣೆಯ ವಿಚಾರವಾಗಿ ಹೊಮ್ಮಿವೆ.
ಆಕ್ರೋಶ ಭರಿತರಾಗಿರುವ ಪಾಲ್ಗಾರ್ ಕ್ಷೇತ್ರದ ಜನರ ಬವಣೆಗಳನ್ನು ‘ಸ್ಕ್ರಾಲ್.ಇನ್’ ವಿಸ್ತೃತವಾಗಿ ವರದಿ ಮಾಡಿದೆ.
ಮುಂಬೈ- ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ ಯೋಜನೆ ರೂಪುಗೊಳ್ಳುತ್ತಿದ್ದು, ಹಳಿ ನಿರ್ಮಿಸಲು ಭೂಮಿ ಒತ್ತುವರಿ ನಡೆದಿದೆ. ಮರಗಿಡಗಳ ಮಾರಣಹೋಮ ಆಗಿದೆ.
ಕ್ಷೇತ್ರದ ಅಂಬರಸದಾ ಎಂಬವರು ಸ್ಕ್ರಾಲ್ ಜೊತೆಯಲ್ಲಿ ಮಾತನಾಡುತ್ತಾ, “ಈ ಬುಲೆಟ್ ಟ್ರೈನ್ ನಿಂದ ನಮಗೇನು ಉಪಯೋಗ? ನಾವೇನೂ ಅದನ್ನು ಬಳಸುವುದಿಲ್ಲ. ನಮ್ಮ ಭೂಮಿಯನ್ನು ಮಾರಲು ಬಯಸುವುದಿಲ್ಲ” ಎಂದಿದ್ದಾರೆ.
ಅವರ ಮಾವ ಚಂದು ಭೀಮ ಪ್ರತಿಕ್ರಿಯಿಸುತ್ತಾ, “ ಈ ಯೋಜನೆಯಿಂದ ನಿಮಗೆ ಕೆಲಸ ಸಿಗುತ್ತದೆ ಎಂದು ಹೇಳಿದರು. ಆದರೆ ಗುತ್ತಿಗೆದಾರರು ಹೊರಗಡೆಯಿಂದ ಜನರನ್ನು ಕರೆಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒತ್ತುವರಿ ಮಾಡಿಕೊಂಡ ಭೂಮಿಗೆ ಸರ್ಕಾರದ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಸಿಕ್ಕಿದೆಯಾದರೂ ಬಹುತೇಕರು ಪರದಾಡುವಂತಾಗಿದೆ. ಕೌಟುಂಬಿಕ ಕಲಹಗಳು ಭುಗಿಲೇಳಲು ಬುಲೆಟ್ ಟ್ರೈನ್ ಕಾರಣವಾಗುತ್ತಿದೆ.
ಮುಂಬೈ ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್ ಯೋಜನೆಯ ಮೊತ್ತವೇ 1.08 ಲಕ್ಷ ಕೋಟಿ. ಇದರಲ್ಲಿ 10,000 ಕೋಟಿಯನ್ನು ಕೇಂದ್ರ ಸರ್ಕಾರ, ಗುಜರಾತ್ ಮತ್ತು ಮಹಾರಾಷ್ಟ್ರ ಸರ್ಕಾರಗಳು ತಲಾ 5,000 ಕೋಟಿಗಳನ್ನು ನೀಡುತ್ತಿವೆ. ಉಳಿದ ಹಣವನ್ನು ಕೇಂದ್ರ ಸರ್ಕಾರ ಸಾಲದ ಮೂಲಕ ನೀಡುತ್ತದೆ. ಇಷ್ಟು ದೊಡ್ಡ ಮಟ್ಟದ ಯೋಜನೆ ನಡೆಯುತ್ತಿರುವಾಗ ಬುಡಕಟ್ಟು ಜನರಿಗೆ ಪರಿಹಾರ ನೀಡುವುದು ದೊಡ್ಡ ವಿಷಯವೇ ಅಲ್ಲ ಎಂಬ ಅಭಿಪ್ರಾಯ ಇಲ್ಲಿನ ಜನರಲ್ಲಿ ಬಲವಾಗುತ್ತಿದೆ. ಬುಲೆಟ್ ಟ್ರೈನ್ ಗಾಗಿ ಇಷ್ಟು ಹಣ ನೀಡುತ್ತಿದ್ದರೂ ಕಳೆದ ಡಿಸೆಂಬರ್ ನಿಂದ ಉದ್ಯೋಗ ಖಾತ್ರಿ ಯೋಜನೆಯ ಹಣ ಪಾವತಿ ಮಾಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರವು ಕಳೆದ ಜನವರಿ 1ರಂದು ಉದ್ಯೋಗ ಖಾತ್ರಿಗೆ ಆಧಾರ್ ಕಡ್ಡಾಯಗೊಳಿಸಿತು. ಗ್ರಾಮದ ಜನರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದರೂ ಹಣ ಬರಲಿಲ್ಲ. ಕಷ್ಟಕಾರಿ ಎಂಬ ಎನ್ ಜಿ ಒ ಬುಡಕಟ್ಟು ಜನರ ಹಕ್ಕುಗಳಿಗಾಗಿ ಈ ಭಾಗದಲ್ಲಿ ಹೋರಾಡುತ್ತಿದೆ. ಸಂಘಟನೆಯ ಬ್ರಿಯಾನ್ ಲೋಬೋ, “ನರೇಗಾ ಯೋಜನೆಯಡಿ ಮೀಸಲಿಡುವ ಅನುದಾನ ಕಡಿಮೆ ಆಗಿದೆ. ಡಿಸೆಂಬರ್ನಿಂದ ಕೂಲಿ ಬಾಕಿ ಉಳಿದಿದೆ” ಎನ್ನುತ್ತಾರೆ. ಹೀಗಾಗಿ ಇಲ್ಲಿನ ಜನರು ಗುಳೇ ಹೊರಡುತ್ತಿದ್ದಾರೆ.
ಬುಲೆಟ್ ಟ್ರೈನ್ ಯೋಜನೆಯ ಹೆಸರಲ್ಲಿ ಬಡ ಜನರ ಬದುಕು ಬೀದಿಪಾಲು ಮಾಡುತ್ತಿರುವ ಮೋದಿಯವರು, ಕೋಮು ದ್ವೇಷ ಭಾಷಣ ಮಾಡುತ್ತಾ, “ಹಿಂದೂಗಳ ರಕ್ಷಣೆ”ಯ ಸೋಗು ಹಾಕಿದ್ದಾರೆ. ಆದರೆ ಹಸಿವು, ಬಡತನದಿಂದ ನರಳುತ್ತಿರುವ ಬಡಪಾಯಿಗಳ ಆಗ್ರಹಗಳಿಗೆ ಕಿವುಡರಾಗಿ ವರ್ತಿಸುತ್ತಿದ್ದಾರೆ. ಎನ್ಸಿಪಿ ಶಿವಸೇನೆ, ಕಾಂಗ್ರೆಸ್ ಮೈತ್ರಿಯ ಸರ್ಕಾರವನ್ನು ಉರುಳಿಸಿ, ಶಿವಸೇನೆ ಹಾಗೂ ಎನ್ಸಿಪಿಯನ್ನು ಒಡೆದು ಅಧಿಕಾರ ಹಿಡಿದ ಬಿಜೆಪಿಗೆ ಮಹಾರಾಷ್ಟ್ರದ ಬುಡಕಟ್ಟು ಜನರು ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎಂಬ ಕುತೂಹಲ ಉಳಿದಿದೆ.
ಮಾಹಿತಿ ಕೃಪೆ: ಸ್ಕ್ರಾಲ್.ಇನ್
