“ಗಣಪತಿಯ ಕತೆ ಅವೈಜ್ಞಾನಿಕ ಮತ್ತು ಅಸಹ್ಯಕರ” ಎಂದು ಹಿರಿಯ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರು ಹೇಳಿರುವ ವಿಡಿಯೊ ಕ್ಲಿಪ್ ಈಗ ವೈರಲ್ ಆಗುತ್ತಿದೆ.
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, “ಗಣಪತಿ ನಮ್ಮ ಸಂಸ್ಕೃತಿಯಲ್ಲ” ಎಂದು ಲಿಂಗಾಯತ ಧರ್ಮಾನುಯಾಯಿಗಳಿಗೆ ತಿಳಿಸಿದ ಬಳಿಕ ಹಿಂದುತ್ವವಾದಿ ವಿಚಾರಗಳ ಪ್ರತಿಪಾದಕರು ಸ್ವಾಮೀಜಿಯವರ ಮೇಲೆ ಮುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಬನ್ನಂಜೆ ಮತ್ತು ಅದಮಾರು ಪೀಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರ ವಿಡಿಯೊ ತುಣುಕುಗಳು ವೈರಲ್ ಆಗುತ್ತಿವೆ.
“ಲಿಂಗಾಯತ ಸ್ವಾಮೀಜಿಯವರನ್ನು ಪ್ರಶ್ನಿಸುವ ಹಿಂದುತ್ವವಾದಿಗಳು, ಬನ್ನಂಜೆ ಮತ್ತು ಮಾಧ್ವ ಮಠದ ಸ್ವಾಮೀಜಿಯ ವಿಡಿಯೊ ಕುರಿತು ಏನಂತಾರೆ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಬನ್ನಂಜೆಯವರು ಮಾತನಾಡುತ್ತಾ, “ಗಣಪತಿಯ ಕಥೆಗಳನ್ನು ಕೇಳಿರಬಹುದು. ಪಾರ್ವತಿ ಸ್ನಾನಕ್ಕೆ ಹೋಗುವಾಗ, ತಾನು ಸ್ನಾನ ಮುಗಿಸಿ ಬರುವವರೆಗೂ ಯಾರೂ ಬರಬಾರದೆಂದು ಯೋಚಿಸಿ ಅವಳ ಮೈಯ ಮಣ್ಣಿನಿಂದ ಬೊಂಬೆ ಮಾಡಿ ಅದಕ್ಕೆ ಜೀವ ತುಂಬಿದಳು. ಅವನನ್ನು ಹೊರಗೆ ಕೂರಿಸಿದಳು. ಬಾತ್ ರೂಮ್ಗೆ ಹೋಗಿ ಬರುವವರೆಗೂ ಯಾರನ್ನೂ ಒಳಗೆ ಬರಲು ಬಿಡಬೇಡ ಎಂದು ಹೇಳಿದ್ದಳು. ದೇವಲೋಕದ ಬಾತ್ ರೂಮ್ಗೆ ಬೋಲ್ಟ್ ಇಲ್ಲ ಅಂತಾಯ್ತು. ಸ್ನಾನ ಮಾಡ್ತಾ ಇದ್ದಾರೆಂದು ತಿಳಿಯದೆ ಸೀದಾ ಒಳಗೆ ಹೋಗಿಬಿಡಬಹುದು. ಇದು ತೀರಾ ಅವೈಜ್ಞಾನಿಕ ಮತ್ತು ಅಸಹ್ಯಕರವಾದ ಕತೆ” ಎಂದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಮಾಧ್ವ ಮಠದ ಸ್ವಾಮೀಜಿ ವಿಶ್ವಪ್ರಿಯ ತೀರ್ಥರು ಮಾತನಾಡುತ್ತಾ, “ಗಣಪತಿಗೆ ಪ್ರಿಯವಾಗಲಿ ಎಂದು ನಮ್ಮಲ್ಲಿ ಗಣ ಹೋಮ ಮಾಡುತ್ತಾರೆ. ಗಣಪತಿ ಅಂತ ಒಬ್ಬ ರಾಕ್ಷಸ ಇದ್ದಾನೆ. ಗಣ ಹೋಮದಿಂದ ಆತನಿಗೆಯೇ ಪ್ರೀತಿಯಾಯ್ತು. ಗಣಪತಿಗೆ ತಲುಪಲಿಲ್ಲ ಎಂದು ಶಾಸ್ತ್ರಕಾರರು ಹೇಳುತ್ತಾರೆ. ಆದರೆ ಆ ವಿಚಾರವನ್ನು ಹೇಳಿದರೂ ನಮ್ಮ ಜನಕ್ಕೆ ತಲುಪಲ್ಲ” ಎಂದಿದ್ದಾರೆ.
ಮುಂದುವರಿದು, “ಗಣಪತಿ ಹೆಸರಿನ ರಾಕ್ಷಸ ಇದ್ದಾನೆಂದು ಶಾಸ್ತ್ರಕಾರರು ಹೇಳುತ್ತಾರೆ. ಏನೋ ಪರಿಹಾರ ಆಗಬೇಕು ಅಂತ ಗಣಪತಿ ಹೋಮ ಮಾಡಿಸುತ್ತಾರೆ. ಸಮಸ್ಯೆ ಪರಿಹಾರವಾಗಲಿಲ್ಲ. ಸಮಸ್ಯೆ ಉಲ್ಭಣವಾಯಿತು. ಗಣಪತಿಗೆ (ರಾಕ್ಷಸನಿಗೆ) ಕೊಟ್ಟಿದ್ದರಿಂದ ಆತ ಇನ್ನೂ ಬಲಿಷ್ಠನಾದ. ಮತ್ತಷ್ಟು ಉಪದ್ರ ಮಾಡಲು ಶುರು ಮಾಡಿದ” ಎಂದಿರುವುದನ್ನು ಇಲ್ಲಿ ಕಾಣಬಹುದು.
ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂದಿರುವ ಸಾಣೇಹಳ್ಳಿ ಸ್ವಾಮೀಜಿಯವರಿಗೆ “ದೇವರ ತಂಟೆ” ಬೇಡ ಎಂದಿರುವ ವಿಶ್ವವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ಟ ಅವರು ತಮ್ಮ ಜಾತಿಯ ವಿದ್ವಾಂಸರ ವಿರುದ್ಧ ಮಾತನಾಡುತ್ತಾರಾ ಎಂದು ಪ್ರಶ್ನಿಸಲಾಗುತ್ತಿದೆ.