ಗ್ಯಾರಂಟಿಗಳನ್ನು ಟೀಕಿಸುತ್ತಿರುವ ಈ ಸಂದರ್ಭದಲ್ಲಿ …..!

Date:

ನೆಹರೂವಿಯನ್ ಸಮಾಜವಾದದ ನಂತರ, ಇಂದಿರಾಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿಯ ನಂತರ ದೀರ್ಘಕಾಲೀನ ಯೋಜನೆಗಳು ಕ್ರಮೇಣ ಕುಂಠಿತಗೊಂಡಿರುವುದು ನಮ್ಮ ಕಣ್ಣ ಮುಂದಿದೆ. ಯೋಜನಾ ಆಯೋಗವು ಆಸ್ತಿತ್ವದಲ್ಲಿದ್ದಾಗ ಭವಿಷ್ಯದ ಯೋಜನೆಗಳ ಕುರಿತು ಚರ್ಚೆ, ಪ್ರಕಟಣೆಗಳಾದರೂ ಜಾರಿಯಲ್ಲಿತ್ತು. ಆದರೆ ಅದು ರದ್ದಾದ ನಂತರ ಧೀರ್ಘಕಾಲೀನ ಯೋಜನೆಗಳು ಕೇವಲ ಹೆದ್ದಾರಿ ನಿರ್ಮಾಣಕ್ಕೆ ಮಾತ್ರ ಸೀಮಿತಗೊಂಡಿದೆ

ಓಲೈಕೆಯ ಭರವಸೆಗಳು ಎನ್ನುವುದನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಅದರ ಬೆಂಬಲಿತ ಮಾಧ್ಯಮಗಳು ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ಮನರೇಗ, ಆಹಾರ ಭದ್ರತೆ ಕಾಯ್ದೆಯಂತಹ ಜನಪರ ಕಲ್ಯಾಣ ಯೋಜನೆಗಳನ್ನು ಓಲೈಕೆ ಎಂದು ಟೀಕಿಸುತ್ತಿದ್ದಾರೆ. ಆ ಮೂಲಕ ‘ಓಲೈಕೆ ಭರವಸೆಗಳು’ ಮತ್ತು ‘ಜನ ಕಲ್ಯಾಣ ಯೋಜನೆ’ಗಳ ನಡುವಿನ ಸ್ಪಷ್ಟವಾದ ಗೆರೆಯನ್ನು ಅಳಿಸಿ ಹಾಕುತ್ತಿದ್ದಾರೆ. ಜನಪ್ರಿಯ ಎಂದು ಕರೆಯಲ್ಪಡುವ ಯೋಜನೆಗಳು ಅನೇಕ ಸಂದರ್ಭಗಳಲ್ಲಿ ಚುನಾವಣಾ ರಾಜಕೀಯದಿಂದ ಪ್ರೇರಿತವಾಗಿದ್ದರೂ ಸಹ ಅಂಚಿನಲ್ಲಿರುವ ಬಡಜನರನ್ನು ಮುಖ್ಯವಾಹಿನಿಗೆ ತರಲು ಅಗತ್ಯವಾದ ಆರಂಭದ ನಡೆ ಎನ್ನುವುದು ಸತ್ಯ. ಸಾಮಾಜಿಕ ಶ್ರೇಣೀಕರಣದ ಕಾರಣಕ್ಕೆ ಅಗಾಧವಾಗಿರುವ ಇಲ್ಲಿನ ಜಾತಿ, ವರ್ಗ ಅಸಮಾನತೆಗೆ ಈ ಜನಕಲ್ಯಾಣ ಯೋಜನೆಗಳು ಪರಿಹಾರವಲ್ಲ. ಆದರೆ ಸರಕಾರಗಳ ‘ಜವಬ್ದಾರಿಯುತ ಪ್ರತಿಕ್ರಿಯೆ’ಯಾಗಿದೆ. ಇದರ ಜಾರಿಯಲ್ಲಿ ನ್ಯೂನ್ಯತೆಗಳಿವೆ, ಭ್ರಷ್ಟಾಚಾರವಿದೆ. ಅದರಾಚೆಗೂ ಬಡವರ ಬದುಕನ್ನು ಕನಿಷ್ಠ ಮಟ್ಟದಲ್ಲಾದರೂ ಸಹನೀಯಗೊಳಿಸುತ್ತವೆ ಎನ್ನುವುದು ಸಹ ಸತ್ಯ. ರೈತರಿಗೆ ಸಬ್ಸಿಡಿ ರೂಪದಲ್ಲಿ ಗೊಬ್ಬರ ಒದಗಿಸುವುದು, ಮಕ್ಕಳಿಗೆ ಉಚಿತ ಸಮವಸ್ತ್ರ ಕೊಡುವುದು, ಹೆಣ್ಣು ಮಕ್ಕಳಿಗೆ ಸೈಕಲ್ ಕೊಡುವುದನ್ನು ಒಲೈಕೆ ಭರವಸೆಗಳು ಎನ್ನಲು ಸಾಧ್ಯವಿಲ್ಲ. ಆದರೆ ರಾಜಕೀಯ ಪಕ್ಷಗಳು ಈ ರಿಯಾಯಿತಿಗಳನ್ನು ವೋಟ್ ಬ್ಯಾಂಕ್‌ಗಾಗಿ ರಾಜಕೀಕರಣಗೊಳಿಸುವುದರಿಂದ ಓಲೈಕೆ ಎಂದು ಆರೋಪಿಸಲಾಗುತ್ತದೆ. ಇಲ್ಲಿ ತಪ್ಪಿತಸ್ಥರು ಯಾರು?

1991ರ ನಂತರದ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಗಳು ಇಲ್ಲಿನ ಅಸಮಾನತೆಯನ್ನು ಶಾಶ್ವತಗೊಳಿಸಿದೆಯೇ ಹೊರತು ಕಡಿಮೆ ಮಾಡಿಲ್ಲ. ಇಂತಹ ದುಸ್ಥಿತಿಗೆ ಕಾರಣವಾಗಿರುವ ಪ್ರಭುತ್ವವು ಒಳಗೊಳ್ಳುವಿಕೆಯಿಂದ ವಂಚಿತರಾಗಿರುವ ತಳ ಸಮುದಾಯಗಳಿಗಾಗಿ ಯಾವುದೇ ಸಂದರ್ಭದಲ್ಲಿಯೂ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳ ನೀಲನಕ್ಷೆಯನ್ನು ರೂಪಿಸುವುದಿಲ್ಲ. ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಿಲ್ಲ. ಮುಖ್ಯವಾಗಿ ಈ ಕುರಿತು ಸರಕಾರಕ್ಕೆ ಯಾವುದೇ ಕ್ರಿಯಾಶೀಲ ದೃಷ್ಟಿಕೋನಗಳಿರುವುದಿಲ್ಲ. ಪರಿಕಲ್ಪನೆಗಳಿರುವುದಿಲ್ಲ. ರಾಜಕೀಯ ಇಚ್ಚಾಶಕ್ತಿಯ ಕೊರತೆಯಿರುತ್ತದೆ. ನೆಹರೂವಿಯನ್ ಸಮಾಜವಾದದ ನಂತರ, ಇಂದಿರಾಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿಯ ನಂತರ ಕಳೆದ ನಲವತ್ತು ವರ್ಷಗಳಿಂದಲೂ ದೀರ್ಘಕಾಲೀನ ಯೋಜನೆಗಳು ಕ್ರಮೇಣ ಕುಂಠಿತಗೊಂಡಿರುವುದು ನಮ್ಮ ಕಣ್ಣ ಮುಂದಿದೆ. ಯೋಜನಾ ಆಯೋಗವು ಆಸ್ತಿತ್ವದಲ್ಲಿರುವವರೆಗೂ ಭವಿಷ್ಯದ ಯೋಜನೆಗಳ ಕುರಿತು ಚರ್ಚೆ, ಪ್ರಕಟಣೆಗಳಾದರೂ ಜಾರಿಯಲ್ಲಿತ್ತು. ಆದರೆ ಅದನ್ನು ರದ್ದುಗೊಳಿಸಿದ ನಂತರ ಈಗ ಧೀರ್ಘಕಾಲೀನ ಯೋಜನೆಗಳು ಎನ್ನುವುದು ಕೇವಲ ಹೆದ್ದಾರಿ ನಿರ್ಮಾಣಕ್ಕೆ ಮಾತ್ರ ಸೀಮಿತಗೊಂಡಿದೆ. ಅದರಾಚೆಗೆ ಎಲ್ಲವೂ ಶೂನ್ಯ.

ಸರಕಾರವು ‘ಒಳಗೊಳ್ಳುವಿಕೆಯ ಆರ್ಥಿಕ ನೀತಿ’ ರೂಪಿಸಲು ವಿಫಲವಾದ ಕಾರಣಕ್ಕೆ ಜಾತಿ, ಧರ್ಮ, ಲಿಂಗ, ವರ್ಗ ತಾರತಮ್ಯಕ್ಕೆ ಒಳಗಾದ ವಂಚಿತ ಸಮುದಾಯಗಳು ದೇಶದ ಆರ್ಥಿಕತೆಯ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಇಂತಹ ಬಿಕ್ಕಟ್ಟಿನಲ್ಲಿ ಜನಪರ ಕಲ್ಯಾಣ ಯೋಜನೆಗಳು ಬಡತನ ನಿರ್ಮೂಲನೆಯ ಆರಂಭದ ಮೆಟ್ಟಿಲುಗಳಾಗಿ ಒದಗಿಬರುತ್ತವೆ. ಇದನ್ನು ತಳಹದಿಯಾಗಿಸಿಕೊಂಡು ದೀರ್ಘಕಾಲೀನ, ಒಳಗೊಳ್ಳುವಿಕೆಯ ಅಭಿವೃದ್ಧಿ ಯೋಜನೆಯನ್ನು ಕಟ್ಟುವುದು ಪ್ರಭುತ್ವದ ಹೊಣೆಗಾರಿಯಾಗುತ್ತದೆ. ಆದರೆ ಈ ವಿಚಾರದಲ್ಲಿ ಎಲ್ಲಾ ಸರಕಾರಗಳು ವಿಫಲವಾಗುತ್ತಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಲೇಖನ ಓದಿದ್ದೀರಾ?: ಕರ್ನಾಟಕದಲ್ಲಿ ದ್ವೇಷದ ಸೋಲಾಗಿದೆ, ಆದರೆ ಪ್ರೀತಿಯ ಗೆಲುವು ಆಗಿಲ್ಲ

ಸರಕಾರವು ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಕಾರಣಕ್ಕೋಸ್ಕರ ಮಧ್ಯಂತರ ಕಾರ್ಯಕ್ರಮವಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಇದು ನವ ಉದಾರೀಕರಣದಲ್ಲಿ ‘ಮುಕ್ತ ಮಾರುಕಟ್ಟೆಯ ವಿರೋಧಿ’ ಎನಿಸಿಕೊಳ್ಳುತ್ತದೆ. ಅಂಚಿನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಅಗತ್ಯವಾದ ‘ಪುನರ್ ಹಂಚಿಕೆ’ಯನ್ನು ಪೂರೈಸುವ ಈ ಜನ ಕಲ್ಯಾಣ ಯೋಜನೆಗಳಿಗಿಂತ ಭಿನ್ನವಾಗಿರುವ ಉಚಿತ ವಿದ್ಯುತ್, ಉಚಿತ ಪಾಸ್, ಸಾಲ ಮನ್ನಾ ಮುಂತಾದವುಗಳು ಜನಪ್ರಿಯ, ಫ್ರೀಬಿ ಎಂದು ಜೀವ ವಿರೋಧಿಗಳಿಂದ ಟೀಕೆಗೆ ಒಳಗಾಗುತ್ತದೆ. ಕ್ರಮೇಣ ಎರಡೂ ಸಾಮಾನ್ಯೀಕರಣಗೊಂಡು ಮಧ್ಯಮವರ್ಗ ಮತ್ತು ಮಾಧ್ಯಮಗಳಿಂದ ‘ಆರ್ಥಿಕ ಹೊರೆ’ ಎನ್ನುವ ಟೀಕೆಗೆ ಒಳಗಾಗುತ್ತವೆ.

ಇದಕ್ಕೂ ಮುನ್ನ ಬಹುಪಕ್ಷೀಯ ಪ್ರಜಾಪ್ರಭುತ್ವದ ಚುನಾವಣೆಯ ಸಂದರ್ಭದಲ್ಲಿ ‘ಪ್ರಣಾಳಿಕೆ’ ಬಿಡುಗಡೆ ಎನ್ನುವ ಪ್ರಹಸನ ಜರಗುತ್ತದೆ. ಪಕ್ಷಗಳು ಆಧಿಕಾರಕ್ಕೆ ಬಂದರೆ ತಾವು ಜಾರಿಗೊಳಿಸಬಹುದಾದ ಕಾರ್ಯಕ್ರಮಗಳನ್ನು ತಿಳಿಸಲು ‘ಪ್ರಣಾಳಿಕೆ’ಯನ್ನು ಬಿಡುಗಡೆ ಮಾಡುತ್ತಾರೆ. ಅಧಿಕಾರಕ್ಕೆ ಬಂದರೆ ಈ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಜಾರಿಗೊಳಿಸುತ್ತೇವೆ ಎಂದು ಕಾರ್ಯಕ್ರಮಗಳ ಆಶ್ವಾಸನೆ ಕೊಡುತ್ತಾರೆ. ಆದರೆ ಇಲ್ಲಿ ‘ಪ್ರಣಾಳಿಕೆ’ಗೂ ಜನ ಕಲ್ಯಾಣ ಯೋಜನೆಗಳಿಗಾಗಿ ಅಗತ್ಯವಾಗಿರುವ ನೀತಿ ನಿರೂಪಣೆ ರೂಪಿಸುವುದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಸ್ವತಃ ರಾಜಕೀಯ ಪಕ್ಷಗಳಿಗೆ ತಮ್ಮ ಪ್ರಣಾಳಿಕೆ ಕುರಿತು ಗಂಭೀರತೆ ಇರುವುದಿಲ್ಲ ಎನ್ನುವ ಕಾರಣದಿಂದ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಇದು ಕೇವಲ ರದ್ದಿ ಉತ್ಪಾದನೆಯ ಹಂತಕ್ಕೆ ತಲುಪಿದೆ.

ಎಲ್ಲಿಯವರೆಗೆ ‘ಚುನಾವಣೆ’ಗಾಗಿ ಪ್ರಣಾಳಿಕೆ, ಅಧಿಕಾರ ದಕ್ಕಿದ ನಂತರ ಎಲ್ಲಾ ‘ಕಬಳಿಕೆ’ ಎನ್ನುವುದು ಪ್ರತಿ ರಾಜಕೀಯ ಪಕ್ಷಗಳ ಕಾರ್ಯಸೂಚಿಯಾಗಿರುತ್ತದೆಯೊ ಅಲ್ಲಿಯವರೆಗೆ ಓಲೈಕೆ ಭರವಸೆಗಳು ವೋಟು ಬ್ಯಾಂಕ್ ರಾಜಕಾರಣಕ್ಕೆ ಬಳಕೆಯಾಗುತ್ತವೆ. ಶಿಸ್ತುಬದ್ಧವಾಗಿ ಜಾರಿಗೊಳ್ಳಬೇಕಿರುವ ಜನಪರ ಕಲ್ಯಾಣ ಯೋಜನೆಗಳು ಅಪವ್ಯಾಖ್ಯಾನಕ್ಕೊಳಪಡುತ್ತವೆ. ಸ್ಥಗಿತಗೊಳ್ಳುತ್ತವೆ. ಟೀಕೆಗೊಳಗಾಗುತ್ತವೆ. ಕಡೆಗೆ ಧೀರ್ಘಕಾಲೀನ ಯೋಜನೆಗಳೂ ಇಲ್ಲ, ಜನಪರ ಕಲ್ಯಾಣ ಯೋಜನೆಗಳೂ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ….

ಪೋಸ್ಟ್ ಹಂಚಿಕೊಳ್ಳಿ:

ಬಿ ಶ್ರೀಪಾದ್ ಭಟ್
ಬಿ ಶ್ರೀಪಾದ್ ಭಟ್
ಲೇಖಕರು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...

‘ಬರ ಪರಿಹಾರ ಸಾಕು’ ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಡಿಸಿಎಂ ಡಿಕೆಶಿ ವಾಗ್ದಾಳಿ

"ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು...

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...