“ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕೇವಲ ಟಿಕೆಟ್ ಗಿಟ್ಟಿಸುವುದಕ್ಕಾಗಿ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಲ್ಲ. ಬದಲಿಗೆ ಅಂಬೇಡ್ಕರ್ ಮತ್ತು ಗಾಂಧಿ ಬಗೆಗಿನ ದ್ವೇಷ ಆರ್ಎಸ್ಎಸ್ ವ್ಯಕ್ತಿಗಳ ರಕ್ತದಲ್ಲಿಯೇ ಅಂತರ್ಗತವಾಗಿದೆ” ಎಂದು ಹಿರಿಯ ವಕೀಲ, ಆರ್ಎಸ್ಎಸ್ ಮಾಜಿ ಮುಖಂಡರೂ ಆದ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ‘ಕರ್ನಾಟಕ ಪಣ – ನಾಡ ಅರಿವು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಆರಂಭದಲ್ಲಿ ನಾವೆಲ್ಲರೂ ಆರ್ಎಸ್ಎಸ್ನ ಕಾಲಾಳುಗಳಾಗಿದ್ದೆವು. ಮೆದುಳಿನ ಭಾಗವಾಗಿ ಎಂ.ಜಿ ಹೆಗಡೆಯವರು, ಲಕ್ಷ್ಮೀಶ ಗಬ್ಬಲಡ್ಕ ಕೆಲಸ ಮಾಡಿದರು. ಆದರೆ ಆರ್ಎಸ್ಎಸ್ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ. ನಮ್ಮ ಧರ್ಮದ ವಕ್ತಾರರು, ಧರ್ಮ ರಕ್ಷಕರು ಅವರಲ್ಲ ಎಂಬುದು ತಿಳಿದು ಅದರಿಂದ ಹೊರಬಂದೆವು” ಎಂದು ತಿಳಿಸಿದರು.
“ನಾವು ಭಾರತೀಯರು ಪ್ರಪಂಚದ ಎಲ್ಲರನ್ನೂ ಸ್ವೀಕರಿಸಿದ್ದೇವೆ. ಇಲ್ಲಿನ ಶ್ರಮಿಕರು, ಮಹಿಳೆಯರು, ರೈತರು ನಮ್ಮ ಪಾಲಿನ ಭಾರತಾಂಭೆ ಆಗಿದ್ದಾರೆ. ಇವರು ಯಾರೂ ಆರ್ಎಸ್ಎಸ್ನವರಿಗೆ ಬೇಕಿಲ್ಲ. ಕೇವಲ ಭಾರತಾಂಬೆಯ ಫೋಟೊ ತೋರಿಸುವುದು ಮಾತ್ರ ಆರ್ಎಸ್ಎಸ್ನ ದೇಶಭಕ್ತಿ” ಎಂದು ಟೀಕಿಸಿದರು.
“ಏನಾದರೂ ಅನ್ಯಾಯ ನಡೆದರೆ ನಾವು ಅಯ್ಯೋ ರಾಮನೇ, ಅಯ್ಯೋ ಶಿವನೆ ಎಂದು ಹೇಳುತ್ತೇವೆ. ಇದು ನಮ್ಮ ಧರ್ಮ. ಆದರೆ ಇನ್ನೊಬ್ಬರ ವಿರುದ್ಧ ದ್ವೇಷ ಸಾಧಿಸಲು ಘೋಷಣೆ ಕೂಗಿಸಲು ಮಾತ್ರ ಆರ್ಎಸ್ಎಸ್ ರಾಮನ ಹೆಸರು ಬಳಸಿಕೊಳ್ಳುತ್ತಿದೆ” ಎಂದು ಕಿಡಿಕಾರಿದರು.
ಆರ್ಎಸ್ಎಸ್ ಹುಟ್ಟಿ ಕೇವಲ 99 ವರ್ಷ ಆಗಿದೆ. ಆದರೆ ನಮ್ಮ ಕರ್ನಾಟಕಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಈ ಆರ್ಎಸ್ಎಸ್ನ ಇಡೀ ವಿಚಾರಧಾರೆಗೆ ನಮ್ಮ ಕರ್ನಾಟಕ ಹಿಂದಿನಿಂದಲೂ ಮುಖಾಮುಖಿಯಾಗಿದೆ. ಸಾವಿರಾರು ವರ್ಷಗಳಿಂದ ಮನುಷ್ಯತ್ವವೇ ಮುಖ್ಯ ಎಂದು ಕನ್ನಡ ಪರಂಪರೆ ಹೇಳಿದೆ. ಕನ್ನಡದ ಪಂಪ ಮನುಷ್ಯ ಜಾತಿ ತಾನೋಂದೆ ವಲಂ ಎಂದರು. ಕಲಬೇಡ, ಕೊಲಬೇಡ ಎಂದು ಬಸವಣ್ಣ ಹೇಳಿದರು. ಅಂಬೇಡ್ಕರ್ ಅವರ ಸಂವಿಧಾನ, ಕನಕದಾಸರ ತತ್ವಗಳು ಈ ಆರ್ಎಸ್ಎಸ್ ಸಿದ್ದಾಂತಕ್ಕೆ ಸಂಪೂರ್ಣ ತದ್ವಿರುದ್ದವಾಗಿರುವುದನ್ನು ಗಮನಿಸಬೇಕು ಎಂದರು.
ಭಾರತದ ಮಣ್ಣಿನ ಮಗ ಅಂಬೇಡ್ಕರ್ ಕೊಟ್ಟ ಸಂವಿಧಾನ ನಮಗೆ ದಾರಿದೀಪವಾಗಿದೆ. ಕನ್ನಡದ ನೆಲ ಅಂಬೇಡ್ಕರ್ ಮತ್ತು ಗಾಂಧಿಯನ್ನು ಸ್ವೀಕಾರ ಮಾಡಿಕೊಂಡಿದೆ. ಆದರೆ ಆರ್ಎಸ್ಎಸ್ನವರಿಗೆ ಅಂಬೇಡ್ಕರ್, ಗಾಂಧಿ ಮೇಲೆ ದ್ವೇಷ ಇದೆ. ಅವರು ಪಠ್ಯದಲ್ಲಿ ಕುವೆಂಪು ಅವರನ್ನು ತಿರುಚಿ ಅಪಮಾನ ಮಾಡಿದವರು. ಏಕೆಂದರೆ ಕನ್ನಡದ ಮಣ್ಣಿನ ಮಗ ಕುವೆಂಪು ಅವರು ಆರ್ಎಸ್ಎಸ್ಗೆ ಬೇಡವಾಗಿದ್ದಾರೆ ಎಂದು ತಿಳಿಸಿದರು.
ಭಾರತ ಅನೇಕವಾದುದು. ಅನೇಕವಾದುದ್ದನ್ನು ವಿರೋಧ ಮಾಡುವುದೇ ಆರ್ಎಸ್ಎಸ್ ತಂತ್ರ. ಆದರೆ ವಿವಿಧತೆಯಲ್ಲಿ ಏಕತೆ ಈ ನೆಲದಲ್ಲಿದೆ. ಭಾರತದ ರಾಷ್ಟ್ರಧ್ವಜ- ಕನ್ನಡ ಧ್ವಜ ನಮ್ಮ ಅಸ್ಮಿತೆಯಾಗಿವೆ ಎಂದು ಹೇಳಿದರು.
“ವಿಶಾಲ ಹಿಂದೂ ಧರ್ಮವನ್ನು ಕಟ್ಟುತ್ತೇವೆ. ವಿಶ್ವವ್ಯಾಪಕವಾದುದ್ದನ್ನು ಕಟ್ಟುತ್ತೇವೆ ಎನ್ನುವ ನೀವು ಹೆಡಗೇವಾರ್, ಗೋಳ್ವಾಲ್ಕರ್, ಸಾವರ್ಕರ್ರನ್ನು ಆರಾಧಿಸುತ್ತೀರಿ. ನಿಜವಾದ ಆಧ್ಯಾತ್ಮ ನಾಯಕರಾದ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಕುವೆಂಪು ಅವರನ್ನು ವಿರೋಧಿಸುತ್ತೀರಿ” ಎಂದು ವಾಗ್ದಾಳಿ ನಡೆಸಿದರು.
ಕೋಮು ದ್ವೇಷವನ್ನೇ ಉಸಿರಾಡುವ ಆರ್ಎಸ್ಎಸ್ ಕೂಟವನ್ನು ತೊರೆದ ಎಂ.ಜಿ.ಹೆಗಡೆ, ಲಕ್ಷ್ಮೀಶ ಗಬಲಡ್ಕ, ಹನುಮೇಗೌಡ, ನಿಕೇತ್ ರಾಜ್ ಮೌರ್ಯ, ಎಲ್.ಎನ್.ಮುಕುಂದರಾಜ್, ಎಎಪಿ ನಾಯಕ ರಮೇಶ್ ಬೆಲ್ಲಂಕೊಂಡ, ಜಾಗೃತ ಕರ್ನಾಟಕ ಸಂಘಟನೆಯ ಸಂಚಾಲಕರಾದ ಬಿ.ಸಿ.ಬಸವರಾಜು, ಸಂಘಟನೆಯ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಜಶೇಖರ್ ಅಕ್ಕಿ, ಡಾ.ಎಚ್.ವಿ.ವಾಸು, ಹಿರಿಯ ಪತ್ರಕರ್ತೆ ಹೇಮಾ ವೆಂಕಟ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
