ದೇವನೂರು ಮಹದೇವರಂತಹ ಅಪರೂಪದ ವ್ಯಕ್ತಿಗಳು ಸರ್ಕಾರಗಳನ್ನು, ರಾಜಕಾರಣಿಗಳನ್ನು ಟೀಕಿಸುವ ನೈತಿಕತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇವರನ್ನು ಬಿಟ್ಟು ಉಳಿದವರಿಗೆ ಕಾಂಗ್ರೆಸ್ ಸರ್ಕಾರವನ್ನಾಗಲಿ ಅಥವಾ ಕಾಂಗ್ರೆಸ್ ಪಕ್ಷವನ್ನಾಗಲಿ ಅಥವಾ ಡಿ ಕೆ ಶಿವಕುಮಾರ್ ಅವರನ್ನಾಗಲಿ ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಮತ್ತು ಮಾಜಿ ಎಂಎಲ್ಸಿ ರಮೇಶ್ ಬಾಬು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಜ್ಯದ ಅಕಾಡೆಮಿ ಮತ್ತು ಪ್ರಾಧಿಕಾರಿಗಳ ಅಧ್ಯಕ್ಷರ ಜೊತೆ ನಡೆಸಿದ ಸಭೆಯನ್ನು ಕೆಲವು ಸಾಹಿತಿಗಳು ಹಾಗೂ ಚಿಂತಕರು ಟೀಕಿಸುತ್ತಿರುವುದು ಅವರ ಅವಕಾಶವಾದದ ಪ್ರತೀಕ” ಎಂದು ಟೀಕಿಸಿದ್ದಾರೆ.
“ಸಾಹಿತಿಗಳು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ಸ್ವತಂತ್ರರಾಗಿದ್ದಾರೆ. ಆದರೆ ಅಂತಹ ಅನಿಸಿಕೆ ಅಥವಾ ಟೀಕೆಗಳು ಆರೋಗ್ಯಕರ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಕೆಲವು ಹಿರಿಯ ಸಾಹಿತಿಗಳು ಸಿದ್ಧಾಂತ ಮತ್ತು ಅಧಿಕಾರದೊಂದಿಗೆ ರಾಜಿಯಾಗದೆ ಅಧಿಕಾರ ಬಯಸದೆ ರಾಜಕಾರಣದೊಂದಿಗೆ ಅಂತರ ಕಾಯ್ದುಕೊಂಡು ಬಂದಿರುತ್ತಾರೆ. ಆದರೆ ಕೆಲವರು ಅವಕಾಶವಿರುವ ಎಲ್ಲ ಲಾಬಿಗಳನ್ನು ಮಾಡಿ ಅಧಿಕಾರ ಸಿಗದಾಗ ರಾಜಕಾರಣವನ್ನು ಜರಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರನ್ನು ನೋಡಿದರೆ ದ್ರಾಕ್ಷಿ ಸಿಗದ ನರಿಯು ದ್ರಾಕ್ಷಿಯನ್ನು ಹುಳಿ ಎಂದು ಜರಿಯುವ ಕಥೆ ನೆನಪಾಗುತ್ತದೆ” ಎಂದು ಕುಟುಕಿದ್ದಾರೆ.
“ಕಾಂಗ್ರೆಸ್ ಸಿದ್ಧಾಂತ ಯಾವಾತ್ತೂ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಸಮರ್ಥಿಸಿಕೊಂಡು ಬಂದಿರುತ್ತದೆ. ಅದೇ ಕಾರಣಕ್ಕಾಗಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸ್ವಾಯತ್ತ ಸಂಸ್ಥೆಗಳ ರಚನೆಗೆ ಒತ್ತು ನೀಡಿರುತ್ತದೆ. ರಚನಾತ್ಮಕ ಭಿನ್ನಾಭಿಪ್ರಾಯಗಳ ನಡುವೆಯೂ ಹಸ್ತಕ್ಷೇಪವಿಲ್ಲದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೊದಲಿನಿಂದಲೂ ಆದ್ಯತೆ ನೀಡಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಾಹಿತಿಗಳು ಮತ್ತು ಚಿಂತಕರು ತಮ್ಮ ಸಿದ್ದಾಂತಗಳಿಗೆ ಅನುಗುಣವಾಗಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ” ಎಂದಿದ್ದಾರೆ.
“ಸಾಹಿತಿಗಳು ಮತ್ತು ಚಿಂತಕರು ರಾಜಕೀಯ ಪಕ್ಷದ ಅಧ್ಯಕ್ಷರೊಂದಿಗೆ ಒಂದು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ಕಾರಣಕ್ಕಾಗಿ ತಮ್ಮ ವ್ಯಕ್ತಿತ್ವವನ್ನಾಗಲಿ ಅಥವಾ ಸಿದ್ಧಾಂತವನ್ನಾಗಲಿ ಕಳೆದುಕೊಳ್ಳಲು ಸಾಧ್ಯವಿಲ್ಲ. ಡಿ ಕೆ ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆಸಿದ ಅಕಾಡೆಮಿ ಮತ್ತು ಪ್ರಾಧಿಕಾರಿಗಳ ಅಧ್ಯಕ್ಷರ ಸಭೆಯನ್ನು ಖಂಡಿಸಿ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಬಹುತೇಕ ಸಾಹಿತಿಗಳು ಮತ್ತು ಲೇಖಕರು ವಿವಿಧ ಹುದ್ದೆಗಳನ್ನು ಬಯಸಿ ಮುಖ್ಯಮಂತ್ರಿಗಳನ್ನು ಮತ್ತು ಉಪ ಮುಖ್ಯಮಂತ್ರಿಗಳನ್ನು ಎಡತಾಕಿರುತ್ತಾರೆ” ಎಂದು ಹೇಳಿದ್ದಾರೆ.
“ಡಿ ಕೆ ಶಿವಕುಮಾರ್ ರವರು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದು, ಅವರು ನಡೆಸಿದ ಸಭೆಯು ರಾಜ್ಯದ ಸಾಂಸ್ಕೃತಿಕ ವಲಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕೂಡಿದ್ದು, ಲೇಖಕರು ಮತ್ತು ಸಾಹಿತಿಗಳು ಇದನ್ನು ಟೀಕಿಸುವುದರ ಮೂಲಕ ಅವರ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿರುತ್ತಾರೆ. ಸಾಹಿತಿಗಳು ಹಿತ್ತಲ ಬಾಗಿಲಿನ ಸಂಸ್ಕೃತಿಯನ್ನು ಕೈಬಿಟ್ಟು ಮನೆಯ ಮುಂಬಾಗಿಲಿನ ಮುಖಾಂತರ ಪ್ರವೇಶ ಮಾಡುವ ಸಂಸ್ಕೃತಿಯನ್ನು ಪಾಲಿಸಲಿ” ಎಂದು ಹೇಳಿದ್ದಾರೆ.
