- ಬಿಎಸ್ವೈ ಮನೆ ಮೇಲೆ ದಾಳಿ ಭದ್ರತಾ ವೈಫಲ್ಯವೋ, ಷಡ್ಯಂತ್ರವೋ
- ಮೀಸಲಾತಿಗೆ ಹೊಣೆಗಾರರಲ್ಲದ ಪಾತ್ರವಿಲ್ಲದ ಯಡಿಯೂರಪ್ಪ ಮನೆ ದಾಳಿ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನೆ ಮೇಲೆ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ದಾಳಿಯ ಹಿಂದೆ ‘ಸಂತೋಷ ಕೂಟ’ದ ಕೈವಾಡವಿದೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಈ ಹಿಂದೆಯೂ ಸಹ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ‘ಸಂತೋಷ ಕೂಟ’ ಕಸರತ್ತು ನಡೆಸಿದೆ ಎನ್ನುವ ಆರೋಪಗಳನ್ನು ಮಾಡಿತ್ತು.
ಸೋಮವಾರ ನಡೆದ ಯಡಿಯೂರಪ್ಪ ಮನೆ ಮೇಲಿನ ಕಲ್ಲು ತೂರಾಟ ಘಟನೆಯಲ್ಲೂ ‘ಸಂತೋಷ ಕೂಟ’ದ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೆ ಎಸ್ ಈಶ್ವರಪ್ಪ, ಬಿ ಎಲ್ ಸಂತೋಷ್ ಮತ್ತು ಸಿ ಟಿ ರವಿ ಅವರು ‘ಸಂತೋಷ ಕೂಟ’ದ ನಾಯಕರು ಎಂದು ಈ ಹಿಂದೆ ಕಾಂಗ್ರೆಸ್ ಹೇಳಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಯಡಿಯೂರಪ್ಪ ಅವರು ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ದಾರಗಳಲ್ಲಿ ಅವರ ಪಾತ್ರವಿಲ್ಲ, ಆದರೂ ಸರ್ಕಾರದ ಅವಾಂತರಕ್ಕೆ ಬಿಎಸ್ವೈ ಮನೆ ಮೇಲೆ ದಾಳಿ ಆಗಿದ್ದೇಕೆ? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ದಾಳಿಯ ಹಿಂದೆ ಬಿಜೆಪಿಯ ‘ಸಂತೋಷ ಕೂಟ’ದ ಕೈವಾಡ ಇರುವುದು ನಿಶ್ಚಿತ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿರುವುದರ ಹಿಂದೆ ಬಿಜೆಪಿ ಕೈವಾಡ: ಸಿದ್ದರಾಮಯ್ಯ
“ಗೃಹಸಚಿವರ ತವರು ಜಿಲ್ಲೆಯಲ್ಲಿ ಮಾಜಿ ಸಿಎಂ ಮನೆಗೆ ರಕ್ಷಣೆ ಇಲ್ಲವೆಂದರೆ ಏನರ್ಥ. ಗುಪ್ತಚರ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು? ಜ್ಞಾನೇಂದ್ರ ಅವರೇ ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಅಥವಾ ಷಡ್ಯಂತ್ರವೇ?” ಎಂದು ಕೇಳಿದೆ.
“ಮೀಸಲಾತಿ ಅವಾಂತರಕ್ಕೆ ಹೊಣೆಗಾರರಲ್ಲದ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಮಾಡಿದ್ದು ಯಾರ ‘ಸಂತೋಷ’ದ ಕಾರಣಕ್ಕೆ?” ಎಂದು ಮಾರ್ಮಿಕವಾಗಿ ಬಿಜೆಪಿಯ ಕಾಲೆಳೆದಿದೆ.
“ಬಿಜೆಪಿಯ ನಕಲಿ ಚುನಾವಣಾ ತಂತ್ರಗಳು ತಿರುಗುಬಾಣವಾಗಿ ಬಿಜೆಪಿಯನ್ನೇ ಅಟ್ಟಾಡಿಸುತ್ತಿವೆ! ಬಂಜಾರ ಸೇರಿದಂತೆ ಹಲವು ಸಮುದಾಯಗಳು ಸರ್ಕಾರದ ವಿರುದ್ಧ ಸಿಡಿದು ನಿಲ್ಲುವ ಮೂಲಕ ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯುವುದು ನಿಶ್ಚಿತ. ಬೊಮ್ಮಾಯಿ ಅವರೇ ಸಾಧನೆ, ಯೋಜನೆ ತೋರಿಸದೆ, ಮೂಗಿಗೆ ತುಪ್ಪ ಸವರುವ ರಾಜಕಾರಣವನ್ನು ಜನತೆ ತಿರಸ್ಕರಿಸಿದ್ದಾರೆ” ಎಂದು ಟ್ವೀಟ್ ವ್ಯಂಗ್ಯವಾಡಿದೆ.