“ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲ ಇಲಾಖೆಗಳು ಸರ್ವ ಸನ್ನದ್ದರಾಗಿ ಕೆಲಸ ಮಾಡಬೇಕು. ಯಾವುದೇ ಜೀವ, ಆಸ್ತಿ ಹಾನಿಯಾಗದಂತೆ ನೋಡಿಕೊಳ್ಳಬೇಕು. ಇದು ಅಧಿಕಾರಿಗಳ ಜವಾಬ್ದಾರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.
ಮಳೆ ಹಾನಿ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “1533 ಗೆ ಸಾರ್ವಜನಿಕರು ಕರೆ ಮಾಡಿ ಮಳೆ ಹಾನಿ ಸಂಬಂಧಿಸಿದಂತೆ ತಕ್ಷಣ ದೂರು ನೀಡಬಹುದು. ಅಪಾಯಕಾರಿ ಮರ ತೆರವಿಗೆ ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಜಂಟಿಯಾಗಿ ಸಮೀಕ್ಷೆ ನಡೆಸಿ ಕಾರ್ಯ ನಿರ್ವಹಿಸಬೇಕು. ತಗ್ಗು ವಸತಿ ಪ್ರದೇಶಗಳಿಗೆ ನೀರು ನುಗ್ಗದಂತೆ ಉತ್ತಮ ಸಾಮರ್ಥ್ಯದ ಪಂಪ್ ಸೆಟ್, ಜನರೇಟರ್ಗಳು ಹಾಗೂ ಹೆಚ್ಚು ನೀರು ಹರಿಯುವ ರಾಜಕಾಲುವೆ ಬಳಿ ಜೆಸಿಬಿ, ಟಿಪ್ಪರ್ಗಳನ್ನು ಮುನ್ನೆಚರಿಕಾ ಕ್ರಮವಾಗಿ ಸಿದ್ದ ಮಾಡಿಕೊಂಡಿರಬೇಕು. ಎನ್ಡಿಆರ್ ಎಫ್ ತಂಡದೊಟ್ಟಿಗೂ ಸಂಪರ್ಕದಲ್ಲಿ ಇರಬೇಕೆಂದು ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
ಬೆಂಗಳೂರಿನಾದ್ಯಂತ ದಾಖಲೆ ಮಳೆಯಾಗಿದ್ದು ಕೆಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ಥಗೊಂಡಿರುವ ಕಾರಣ ಇಂದು ಬಿಬಿಎಂಪಿ, ಬೆಸ್ಕಾಂ, ವಿಪತ್ತು ನಿರ್ವಹಣೆ, ಪೊಲೀಸ್ ಹಾಗೂ ಅಗ್ನಿಶಾಮಕದಳ ಸೇರಿದಂತೆ 15 ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹಾಗೂ ತುರ್ತು ಸನ್ನಿವೇಶಕ್ಕೆ… pic.twitter.com/fLMJwOWMpv
— DK Shivakumar (@DKShivakumar) June 3, 2024
“ಬೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ, ಬಿಡ್ಬ್ಯೂಎಸ್ಎಸ್ ಬಿ, ಅರಣ್ಯ ಇಲಾಖೆ ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಯಾವ ಇಲಾಖೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದೇನೆ. ರಾಜಕಾಲುವೆಗೆ ಸಂಬಂಧಿಸಿದಂತೆ ಒಂದಷ್ಟು ಜನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಇದನ್ನು ಮುಂದಿಟ್ಟುಕೊಂಡು ಮೈಗೆ ಎಣ್ಣೆ ಹಚ್ಚಿಕೊಂಡು ಅಧಿಕಾರಿಗಳು ಕೆಲಸದಿಂದ ನುಣುಚಿಕೊಳ್ಳುವಂತಿಲ್ಲ. ಒತ್ತುವರಿಯಾಗಿರುವ ಜಾಗಗಳು ಸರ್ಕಾರದ ಆಸ್ತಿಗಳು. ನೀರು ಹರಿಯಲು ತೊಂದರೆಯಾಗುವುದಾದರೆ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಬೇಕು” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
“ಭಾನುವಾರ ರಾತ್ರಿ ಸುರಿದ ಮಳೆ ಸಾಕಷ್ಟು ಹಾನಿ ಉಂಟಾಗಿತ್ತು. ಉತ್ತಮ ರೀತಿಯಲಿ ಪರಿಸ್ಥಿತಿ ನಿಭಾಯಿಸಿರುವ ಅಧಿಕಾರಿಗಳಿಗೆ ಅಭಿನಂದನೆಗಳು. ಮರಗಳ ತೆರವು ಸೇರಿದಂತೆ ಜನರಿಗೆ ಆಗುತ್ತಿದ್ದ ತೊಂದರೆಗಳನ್ನು ತಕ್ಷಣ ತಪ್ಪಿಸಿದ್ದಾರೆ. ಟ್ರಾಫಿಕ್ ಆಗದಂತೆ ನೋಡಿಕೊಂಡಿದ್ದಾರೆ. ಮೆಟ್ರೋ ಹಳಿ ಮೇಲೂ ಮರ ಬಿದ್ದಿತ್ತು. ಇದನ್ನು ಆದಷ್ಟು ಬೇಗ ಇದನ್ನು ತೆರವುಗೊಳಿಸಿದ್ದಾರೆ. ಜೂನ್ನಲ್ಲಿ ಉತ್ತಮ ಮಳೆ ಬಿದ್ದಿರುವುದು ನನಗೆ ಸಾಕಷ್ಟು ಸಂತೋಷವಾಗಿದೆ. ಮೂರು ಜನರಿಗೆ ಗಾಯಗಳಾಗಿವೆ. ವಾಹನಗಳು ಜಖಂಗೊಂಡಿವೆ. 265 ಮರಗಳು ಬಿದ್ದಿವೆ. 96 ಮರಗಳನ್ನು ತೆರವುಗೊಳಿಸಲಾಗಿದೆ. 365 ಕೊಂಬೆಗಳು ಬಿದ್ದಿದ್ದವು. ಎಲ್ಲವನ್ನು ತೆರವುಗೊಳಿಸಲಾಗಿದೆ. 261 ವಿದ್ಯುತ್ ಕಂಬಗಳು ಬಿದ್ದಿದ್ದವು. ಇದನ್ನು ಸರಿಪಡಿಸಲಾಗುತ್ತಿದೆ” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದರು.
“694 ದೂರುಗಳನ್ನು ಬಿಬಿಎಂಪಿ ಕಂಟ್ರೋಲ್ ರೂಮ್ಗೆ ಬಂದಿದೆ. ಇದರಲ್ಲಿ 525 ದೂರುಗಳನ್ನು ಪರಿಶೀಲಿಸಲಾಗಿದೆ. 69 ದೂರುಗಳು ಉಳಿದುಕೊಂಡಿವೆ. ಇವನ್ನು ಶೀಘ್ರ ಪರಿಹರಿಸಲಾಗುವುದು. ಜನರ ಪ್ರಾಣ ಮುಖ್ಯ. ಆದ ಕಾರಣ ಮುಂಬೈ ರೀತಿ ಹಳೆ ಕಟ್ಟಡಗಳು ಕುಸಿಯುವ ಹಂತದಲ್ಲಿ ಇದ್ದರೆ ಕೂಡಲೇ ಅವುಗಳನ್ನು ಗುರುತಿಸಿ, ಅಲ್ಲಿದ್ದವರನ್ನು ಸ್ಥಳಾಂತರ ಮಾಡಬೇಕು. ಮಳೆ ಬಿದ್ದಾಗ ರಸ್ತೆಗುಂಡಿಗಳನ್ನು ಮುಚ್ಚಿದರೆ ಮತ್ತೆ ಕಿತ್ತು ಹೋಗುವ ಸಾಧ್ಯತೆ ಇರುವ ಕಾರಣ ಈ ಕೆಲಸ ತಡವಾಗಬಹುದು. ಇದೊಂದು ವಿಚಾರ ಹೊರತಾಗಿ ಮಿಕ್ಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು” ಎಂದು ಡಿಕೆಶಿ ತಿಳಿಸಿದರು.
ಮರಗಳು ಬಿದ್ದು ವಿದ್ಯುತ್ ಕಡಿತ ಉಂಟಾಗುತ್ತಿದೆ ಎಂದು ಕೇಳಿದಾಗ “ಮರ ಬಿದ್ದು ತಂತಿ ತುಂಡದಾಗ ಮತ್ತೆ ಜೋಡಿಸುವುದು ಅತ್ಯಂತ ಕಷ್ಟದ ಹಾಗೂ ಸೂಕ್ಷ್ಮ ಕೆಲಸ. ಇದರ ನಡುವೆಯೂ ಬೆಸ್ಕಾಂ ಅವರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂಧನ ಸಚಿವರು ಕಾರ್ಯಪ್ರವೃತ್ತರಾಗಿದ್ದಾರೆ. ಭಾನುವಾರ ರಾತ್ರಿ ಬಸವೇಶ್ವರ ವೃತ್ತದಲ್ಲಿ ತೆರವುಗೊಳಿಸುತ್ತಾ ಇದ್ದಿದ್ದನ್ನು ನಾನೇ ನೋಡಿದ್ದೇನೆ. ಮರಗಳ ಮದ್ಯೆ ಕಾರು ಸಿಲುಕಿಕೊಂಡಿತ್ತು. ಯಾರಿಗಾದರೂ ತೊಂದರೆಯಾಗಿದೆಯೇ ಎಂದು ನಾನೇ ಗಾಬರಿಗೊಂಡಿದ್ದೆ. ಅದೃಷ್ಟವಶಾತ್ ತೊಂದರೆಯಾಗಿಲ್ಲ” ಎಂದರು.
ಇದನ್ನು ಓದಿದ್ದೀರಾ? ಬೆಂಗಳೂರು: 133 ವರ್ಷಗಳ ದಾಖಲೆ ಮುರಿದ ಒಂದೇ ದಿನದ ಮಳೆ
ಎಲ್ಲ ವಾರ್ಡ್ಗಳಲ್ಲಿ ತೊಂದರೆಯಾಗುತ್ತಿದ್ದು ಸ್ಥಳೀಯ ಕಾರ್ಪೋರೇಟರ್ಗಳು ಇಲ್ಲದಿರುವುದು ತೊಂದರೆಯಾಗುತ್ತಿದೆಯೇ ಎಂದಾಗ, “ಕಾರ್ಪೋರೇಟರ್ಗಳು ಏನು ಮಾಡುತ್ತಾರೆ. ಅಧಿಕಾರ ಇರಲಿ ಇಲ್ಲದಿರಲಿ ಜನರ ಸೇವೆಗೆ ಯಾವಾಗಲೂ ಕೆಲಸ ಮಾಡಬೇಕು. ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಜನಪ್ರತಿನಿಧಿಗಳು ಇರಬೇಕು. ಲೋಕಸಭೆ ಚುನಾವಣೆ ಮುಗಿದಿದೆ. ಈಗ ಅದರ ಬಗ್ಗೆ ಯೋಚಿಸಲಾಗುವುದು” ಎಂದು ಹೇಳಿದರು.
