- ಕ್ಷೇತ್ರದ ಕುರಿತು ಚರ್ಚಿಸಿರುವೆ ಎಂದ ರಮೇಶ್ ಜಾರಕಿಹೊಳಿ
- ಮಹೇಶ್ ಕುಮಟಳ್ಳಿ ಪರ ಬ್ಯಾಟ್ ಬೀಸಿರುವ ಗೋಕಾಕ್ ಶಾಸಕ
ಇಂದು (ಮಾರ್ಚ್ 26) ಬಿಜೆಪಿ ಕೋರ್ ಸಮಿತಿ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ದಿಢೀರ್ ಆಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಹೊತ್ತಿನಲ್ಲಿ ರಾಜಕೀಯ ನಾಯಕರ ನಡುವೆ ಟಿಕೆಟ್ ಹಂಚಿಕೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, “ಮುಖ್ಯಮಂತ್ರಿಗಳ ಜೊತೆಗೆ ಕ್ಷೇತ್ರದ ಕುರಿತು ಚರ್ಚೆ ಮಾಡಿದ್ದೇನೆ. ಅಥಣಿ ಕ್ಷೇತ್ರದ ಟಿಕೆಟ್ ಹಂಚಿಕೆಯ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ” ಎಂದು ಹೇಳಿದ್ದಾರೆ.
ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹೇಶ ಕುಮಟಳ್ಳಿ ಪರವಾಗಿ ಬ್ಯಾಂಟಿಗ್ ಮಾಡಲು ಆಗಮಿಸಿರುವ ಸಾಧ್ಯತೆಗಳೆ ಹೆಚ್ಚು ಎನ್ನಲಾಗಿದೆ. ಈ ಹಿಂದೆಯೂ ರಮೇಶ್ ಜಾರಕಿಹೊಳಿ ಅವರು ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಒತ್ತಡ ಹೇರಿದ್ದರು.
ಇದೇ ವೇಳೆ ಮೀಸಲಾತಿ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಜಾರಕಿಹೊಳಿ, “ಮೀಸಲಾತಿ ಹಂಚಿಕೆ ಒಳ್ಳೆಯ ಕಾರ್ಯವಾಗಿದೆ. ಹಿಂದುಳಿದವರ ಮೀಸಲಾತಿ ಕಸಿದುಕೊಂಡಿಲ್ಲ” ಎಂದಿದ್ದಾರೆ.