ಯುವಕನೋರ್ವನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಎಚ್ ಡಿ ರೇವಣ್ಣ ಅವರ ಹಿರಿಯ ಪುತ್ರ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ನ್ಯಾಯಾಲಯವು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಭಾನುವಾರ ಸಿಐಡಿಗೆ ವಹಿಸಿ ಆದೇಶಿಸಿತ್ತು. ಆದರೆ ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಆಗಿರಲಿಲ್ಲ. ಈ ನಡುವೆ ಭಾನುವಾರ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇಂದು ಸೂರಜ್ ರೇವಣ್ಣ ಅವರನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದರು. ವಿಚಾರಣೆ ವೇಳೆ ಸರ್ಕಾರಿ ವಕೀಲರು 14 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆದರೆ ನ್ಯಾಯಾಧೀಶರು 8 ದಿನ ಪೊಲೀಸ್ ಕಸ್ಟಡಿಗೆ ನೀಡಿದರು. ಜುಲೈ 1ರ ಸಂಜೆ 4 ಗಂಟೆಗೆ ಸೂರಜ್ ರೇವಣ್ಣ ಅವರನ್ನು ಮತ್ತೆ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ನ್ಯಾಯಾಧೀಶರು ಸಿಐಡಿ ಪೊಲೀಸರಿಗೆ ಸೂಚಿಸಿದ್ದಾರೆ.
ಸಂತ್ರಸ್ತನ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರೇವಣ್ಣರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು ಮುಂಜಾನೆಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಭಾನುವಾರ ಬೆಳಗ್ಗೆ ಸೂರಜ್ರನ್ನು ಅಧಿಕೃತವಾಗಿ ಬಂಧಿಸಿದರು.
ಇದನ್ನು ಓದಿದ್ದೀರಾ? ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ | ಜುಲೈ 8ರವರೆಗೆ ಪ್ರಜ್ವಲ್ ರೇವಣ್ಣನಿಗೆ ನ್ಯಾಯಾಂಗ ಬಂಧನ
ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದಾರೆ ಎನ್ನಲಾದ ಸಂತ್ರಸ್ತನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಭಾನುವಾರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ಏನಿದು ಪ್ರಕರಣ?
27 ವರ್ಷದ ಚೇತನ್ ಕೆಎಸ್ ಎಂಬುವವರು ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ್ದಾರೆ. ಸೂರಜ್ ರೇವಣ್ಣ ಅವರು ಜೂನ್ 16 ರಂದು ಹೊಳೆನರಸೀಪುರ ತಾಲೂಕಿನ ಘನ್ನಿಕಡದಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತನಗೆ ಬೆದರಿಕೆ ಹಾಕಿದ್ದಾರೆ. ಅವರು ಕರೆದಾಗಲೆಲ್ಲ ತಮ್ಮ ಫಾರ್ಮ್ಹೌಸ್ಗೆ ಬರುವಂತೆ ಹೇಳಿದ್ದಾರೆ ಎಂದು ಚೇತನ್ ಆರೋಪಿಸಿದ್ದಾರೆ.
ಸೂರಜ್ ರೇವಣ್ಣನ ಆಪ್ತರೊಬ್ಬರು ಈ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದರು, ಕೆಲಸ ಮತ್ತು ಬಾಯಿ ಮುಚ್ಚಿಕೊಂಡಿರಲು 2 ಕೋಟಿ ರೂಪಾಯಿ ನೀಡುವುದಾಗಿಯೂ ಹೇಳಿದ್ದಾರೆ ದೂರು ನೀಡಿದ್ದಾರೆ. ಈ ನಡುವೆ ದೂರುದಾರ ಚೇತನ್ ಕೆಎಸ್ ವಿರುದ್ಧ ಸುಲಿಗೆ ಯತ್ನದ ಆರೋಪದಲ್ಲಿ ಪ್ರತಿದೂರು ದಾಖಲಾಗಿದೆ.
