- ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅಭಿಮತ
- ‘ರಾಜ್ಯ ದಿವಾಳಿಯಾಗಲಿಲ್ಲ, ಪ್ರಧಾನಿ ಅವರೇ ನಿಮ್ಮ ಮಾತು ಪರಮ ಸುಳ್ಳು’
ನಾವು ಬಡವರ ಪರವಾದ, ಮಧ್ಯಮ ವರ್ಗದವರ ಪರವಾದ ಯೋಜನೆಗಳನ್ನು ರೂಪಿಸಿದಾಗ, ಘೋಷಿಸಿದಾಗ ಬಿಜೆಪಿ ನಾಯಕರು ಇನ್ನಿಲ್ಲದ ಆರೋಪಗಳನ್ನು ಮಾಡಿದರು. ವಿರೋಧಪಕ್ಷದ ಎಲ್ಲ ಆರೋಪಗಳನ್ನೂ ನಮ್ಮ ಗ್ಯಾರಂಟಿ ಯೋಜನೆಗಳು ಸುಳ್ಳು ಎಂದು ಸಾಬೀತು ಮಾಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಚಾರಿತ್ರಿಕ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸ್ವತಃ ಪ್ರಧಾನಿ ಮೋದಿಯವರು ರಾಜ್ಯ ದಿವಾಳಿಯಾಗುತ್ತದೆ ಎಂದು ಭಾಷಣ ಮಾಡಿದರು. ಆದರೆ, ಈಗ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಪ್ರತಿದಿನ ಕೋಟಿಗೂ ಅಧಿಕ ಮಂದಿ ಪ್ರತಿ ದಿನ, ಪ್ರತಿ ತಿಂಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರ ಮಾತುಗಳು ಸುಳ್ಳಾಗಿವೆ” ಎಂದು ತಿರುಗೇಟು ನೀಡಿದರು.
“ನೂರು ದಿನಗಳ ಸಾಧನೆಯ ಪುಸ್ತಕ ಹೊರಗೆ ತಂದಿದ್ದೇವೆ. ಈ ಪುಸ್ತಕವನ್ನು ಮತ್ತು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಪಟ್ಟಿ ಮಾಡಿ ನೋಡಿ. ನಿಮಗೂ ನುಡಿದಂತೆ ನಡೆದ ನಮ್ಮ ಸರ್ಕಾರದ ಬಗ್ಗೆ ಹೆಮ್ಮೆ ಬರುತ್ತದೆ. ಭಾರತದ ರಾಜಕೀಯ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ಜನೋಪಯೋಗಿ ಕಾರ್ಯಕ್ರಮ ಜಾರಿ ಆಗಿಲ್ಲ. ಶಕ್ತಿಯೋಜನೆಯಿಂದ 48.5 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ, ಇಷ್ಟು ಕಡಿಮೆ ಅವಧಿಯಲ್ಲಿ. ಅವರಿಗೆಲ್ಲಾ ಸಾವಿರಾರು ರೂಪಾಯಿ ಬಸ್ ಚಾರ್ಜ್ ಉಳಿತಾಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಶ್ವದ ಯಾವ ಭಾಗದಲ್ಲೂ ಇರದ ಅತ್ಯಂತ ದೊಡ್ಡ ಯೋಜನೆ ಗೃಹಲಕ್ಷ್ಮಿ : ರಾಹುಲ್ ಗಾಂಧಿ ಬಣ್ಣನೆ
“ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು, ಕನ್ನಡ ನಾಡಿನ ಬಡವರು, ಮಧ್ಯಮ ವರ್ಗದವರು ಊಟ ಮಾಡಲು ಅಕ್ಕಿ ಕೊಡದೆ ಕೇಂದ್ರ ಸರ್ಕಾರ ನಮಗೆ ವಂಚಿಸಿತು. ನಾವು ಅಕ್ಕಿಯ ಬದಲಿಗೆ ಹಣ ಕೊಟ್ಟೆವು. ಪ್ರತೀ ದಿನ, ಪ್ರತೀ ತಿಂಗಳು ಕೋಟಿಗೂ ಅಧಿಕ ಕುಟುಂಬಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆದುಕೊಳ್ಳುತ್ತಿವೆ. ಪ್ರಧಾನ ಮಂತ್ರಿ ಮೋದಿಯವರೇ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳ ಜಾರಿಯಿಂದ, ಬಡವ-ಮಧ್ಯಮ ವರ್ಗದವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ದಿವಾಳಿಯಾಗಲಿಲ್ಲ. ದಿವಾಳಿಯಾಗುತ್ತದೆ ಎನ್ನುವ ನಿಮ್ಮ ಮಾತು ಪರಮ ಸುಳ್ಳು” ಎಂದು ಕುಟುಕಿದರು.