- ನಿಷ್ಪಕ್ಷಪಾತ ಚುನಾವಣೆ ಮಾಡುವುದು ಆಯೋಗದ ಜವಾಬ್ದಾರಿ
- ಬಿಜೆಪಿ ಸರ್ಕಾರ ಅಕ್ರಮ ನಡೆಸುವ ಸಾಧ್ಯತೆ ಹೆಚ್ಚಿದೆ ಸಿದ್ದರಾಮಯ್ಯ
ರಾಜ್ಯ ವಿಧಾನಸಭೆ ಚುನಾವಣಾ ಕಾರ್ಯಕ್ಕೆ ಐಟಿ ಅಧಿಕಾರಿಗಳನ್ನು ಬಿಜೆಪಿ ನಿಯೋಜನೆ ಮಾಡಿದೆ. ಇದು ಚುನಾವಣಾ ಅಕ್ರಮಕ್ಕೆ ಅವರು ಮಾಡಿಕೊಂಡಿರುವ ದಾರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಚುನಾವಣಾ ನೀತಿ ಸಂಹಿತೆ ಘೋಷಣೆ ಬೆನ್ನಲ್ಲೇ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ಆದರೆ ಇದನ್ನು ತಡೆಯಲು ಬಿಜೆಪಿ ತೆರೆಮರೆಯ ಪ್ರಯತ್ನ ಮಾಡುತ್ತಿದೆ.
ಇದಕ್ಕಾಗಿ ರಾಜ್ಯ ವಿಧಾನಸಭೆ ಚುನಾವಣಾ ಕಾರ್ಯಕ್ಕೆ 300ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ನೇಮಕ ಮಾಡಲಾಗಿದೆ. ಇದು ನಮ್ಮ ಪಕ್ಷವನ್ನು ಕಟ್ಟಿಹಾಕಲು ಮಾಡಿರುವ ತಂತ್ರ ಎಂದು ಕಿಡಿಕಾರಿದರು.
ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಚುನಾವಣಾ ಆಯೋಗದ ಕ್ರಮ ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಾಗಿದೆ. ನಿಷ್ಪಕ್ಷಪಾತ, ಸ್ವತಂತ್ರ ಚುನಾವಣೆ ಮಾಡುವುದು ಆಯೋಗದ ಜವಾಬ್ದಾರಿ. ಬಿಜೆಪಿ ಸಂಪೂರ್ಣ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದೆ. ದೇಶದಲ್ಲಿ ಆಪರೇಷನ್ ಕಮಲದಂತಹ ಜನವಿರೋಧಿ ಪದ್ಧತಿಯನ್ನು ಪಕ್ಷ ಬಳಕೆಗೆ ತಂದಿದೆ ಎಂದರು.
ಈಗ ಇದರದ್ದೇ ಭಾಗವಾಗಿ ಈ ಬಾರಿ ಪೊಲೀಸರು ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳನ್ನೇ ಬಳಸಿಕೊಂಡು ಅಕ್ರಮ ನಡೆಸುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? : ನೀತಿ ಸಂಹಿತೆ ಬಿಸಿ: ಸರ್ಕಾರಿ ಕಾರು ವಾಪಾಸ್ ಕಳುಹಿಸಿದ ಸಿದ್ದರಾಮಯ್ಯ
ನಮ್ಮ ನಿರೀಕ್ಷೆಯಂತೆಯೇ ಇಂದು ಚುನಾವಣೆ ಘೋಷಣೆಯಾಗಿದೆ. ನಾವೂ ಕೂಡ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ.ಏಪ್ರಿಲ್ 5ಕ್ಕೆ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ.ಅವರ ನೇತೃತ್ವದಲ್ಲಿ ನಾವು ಪಕ್ಷ ಕಟ್ಟುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಕಾಂಗ್ರೆಸ್ನವರು ಕೊಟ್ಟ ಭರವಸೆ ಈಡೇರಿಸದಿದ್ದರೇ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು. ನಾನು ರಾಜ್ಯ ಸುತ್ತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದರು.
ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕರು,ಸಿಎಂ ಜನರಿಗೆ ಬರೀ ಸುಳ್ಳು ಭರವಸೆಗಳನ್ನು ನೀಡಿಕೊಂಡೇ ಅಧಿಕಾರ ಮುಗಿಸಿದರು. ಬಿಜೆಪಿ ಅವಧಿಯಲ್ಲಿ ಆಗಿದ್ದು ಅಭಿವೃದ್ದಿಯಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.