- ವಿಧಾನಸಭೆ ಚುನಾವಣೆಯ ಸೋಲಿನ ಪರಾಮರ್ಶೆ ಮಾಡಿಕೊಂಡ ಬಿಜೆಪಿ
- ಸೋತವರ ಸೋಲಿನ ಕಾರಣ ಕೇಳಿ ಮಗುಮ್ಮಾಗಿ ಕುಳಿತ ಬಿಜೆಪಿ ನಾಯಕರು
ಅತಿಯಾದ ಆತ್ಮವಿಶ್ವಾಸದಲ್ಲಿ, ಮರಳಿ ಅಧಿಕಾರಕ್ಕೆ ಬಂದೇ ಬರುತ್ತೇವೆಂದು ಕನಸು ಕಾಣುತ್ತಾ ಕೂತಿದ್ದ ಬಿಜೆಪಿಗೆ ರಾಜ್ಯದ ಜನ ಕೊಟ್ಟ ಮಹಾ ತೀರ್ಪಿನ ಏಟು ಅದರ ಜಂಘಾಬಲವನ್ನೇ ಉಡುಗಿಸಿದೆ.
ಮೊದಲೇ ಸೋತು ಸುಣ್ಣವಾಗಿರುವ ಪಕ್ಷದ ನಾಯಕರಿಗೆ ಈಗ ಸೋತು ನಿಂತ ಅಭ್ಯರ್ಥಿಗಳು ಪರಾಮರ್ಶೆಯ ಸಭೆಯಲ್ಲಿ ಕೊಟ್ಟ ಪರಾಜಯದ ಕಾರಣಗಳು ಗಾಯದ ಮೇಲೆ ಮೇಲೆ ಬರೆ ಎಳೆದಂತಾಗಿಸಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಅವಲೋಕನ ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳು ಕೊಟ್ಟ ಕಾರಣಗಳಲ್ಲಿ ಪ್ರಮುಖವಾಗಿದ್ದು, ಸರ್ಕಾರ ಆಡಳಿತ ವಿರೋಧಿ ಅಲೆ, ಮತ್ತು ಹೈಕಮಾಂಡ್ ಮೇಲಿನ ಅತಿಯಾದ ಅವಲಂಬನೆ.
ಹೌದು.. ಸೋತ ಅಭ್ಯರ್ಥಿಗಳು ಕೊಟ್ಟ ಕಾರಣ ನೂರಕ್ಕೆ ನೂರರಷ್ಟು ಸತ್ಯ ಎನ್ನುವುದು ಸಭೆಯಲ್ಲಿದ್ದ ಹಲವು ನಾಯಕರಿಗೂ ಮನದಟ್ಟಾಗಿದೆ. ವಿಘ್ನ ಸಂತೋಷಿಗಳು ಕೂಟದ ಹಿಡಿತಕ್ಕೆ ಸಿಕ್ಕ ಪಕ್ಷ ಪಟ್ಟಿಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿಗೆ ಸಾಗಿದ್ದೇ ಬಹುಪಾಲು ಜನಪ್ರತಿನಿಧಿಗಳ ಸೋಲಿಗೆ ಕಾರಣ ಎನ್ನುವುದನ್ನು ಸಭೆಯೂ ಒಪ್ಪಿಕೊಂಡಿದೆ.
ಹಾಗೆಯೇ ಹೊಸ ನಾಯಕತ್ವ ರೂಪಿಸದೆಯೇ ಯಡಿಯೂರಪ್ಪನವರನ್ನು ಬದಿಗೆ ಸರಿಸಿ ಹೈಕಮಾಂಡ್ ನಾಯಕರೇ ಅಂತಿಮ ಎಂದು ಬಿಂಬಿಸಿಕೊಂಡ ಪಕ್ಷದ ನಿರ್ಧಾರವೂ, ಸ್ಥಳೀಯ ಮಟ್ಟದಲ್ಲಿ ಹೊಡೆತ ನೀಡಿತೆನ್ನುವುದು ಕೆಲವರ ವಾದ.
ಇದನ್ನು ಹೊರತು ಪಡಿಸಿದಂತೆ ವಿಪಕ್ಷ ಕಾಂಗ್ರೆಸ್ ಜನರ ಬಳಿಗೆ ಈ ಬಾರಿ ನಮಗಿಂತಲೂ ಚೆನ್ನಾಗಿ ತಲುಪಿದ್ದು ನಮ್ಮ ಹಿನ್ನಡೆಗೆ ಕಾರಣ ಎಂದ ಅಭ್ಯರ್ಥಿಗಳು, ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು, ನಮ್ಮ ಸರ್ಕಾರ ತಪ್ಪು ನಿರ್ಧಾರ, ಒಳ ಮೀಸಲಾತಿ ಹಂಚಿಕೆಯ ಒಳ ಏಟು, 40% ಕಮೀಷನ್ ಆರೋಪ ಸೇರಿ ಕೆಲವು ಭ್ರಷ್ಟಾಚಾರ ಆರೋಪ ಪ್ರಕರಣಗಳು, ಅಲ್ಲಲ್ಲಿ ಬೀಸಿದ ವಿರೋಧಿ ಅಲೆ, ಟಿಕೆಟ್ ಹಂಚಿಕೆಯಲ್ಲಿನ ವಿಳಂಬಗಳು ಬಹುಪಾಲು ಉಮೇದುವಾರರನ್ನು ಸೋಲಿನ ಹಾದಿಗೆ ತಂದು ನಿಲ್ಲಿಸಿತ್ತೆನ್ನುವ ಪ್ರಾಮಾಣಿಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಬಿಜೆಪಿ ಸಭೆ | ಶಾಸಕರಿಗೆ ಲೋಕಸಭೆ ಚುನಾವಣೆಯ ಗುರಿ; ಅಂತಿಮವಾಗದ ವಿಪಕ್ಷ ನಾಯಕ ಆಯ್ಕೆ
ಇದರ ಬೆನ್ನಿಗೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಸದಾನಂದಗೌಡರೂ ಪಕ್ಷದೊಳಗಿನ ಒಡೆದಾಳುವ, ಆತ್ಮಗೌರವಕ್ಕೆ ಚ್ಯುತಿ ತರುವ ನೀತಿಯನ್ನು ಕೆಲ ನಾಯಕರು ಪ್ರದರ್ಶಿಸುತ್ತಿರುವದರ ಬಗೆಗೆ ಪತ್ರಿಕಾಗೋಷ್ಠಿ ನಡೆಸಿ ಬೆಳಕು ಚೆಲ್ಲುವಂತೆ ಮಾಡಿದ್ದು, ಹೈಕಮಾಂಡ್ ನಾಯಕರು ಇವನ್ನು ಬಗೆಹರಿಸದಿದ್ದರೆ ಪಕ್ಷಕ್ಕಾಗುವ ಅಪಾಯದ ಬಗೆಗೂ ಮಾಹಿತಿ ಹಂಚಿಕೊಂಡಿದ್ದು, ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇತ್ತ ಪರಾಜಿತ ಅಭ್ಯರ್ಥಿಗಳ ಈ ವಿಚಾರಗಳೀಗ ಮೋದಿ ಮ್ಯಾಜಿಕ್ ಮೇಲೆಯೇ ಗೆದ್ದು ಬೀಗುತ್ತೇವೆಂದು ನಿಂತಿದ್ದ ಮೊದಲ ಸಾಲಿನ ನಾಯಕರಿಗೆ ಮಂಗಳಾರತಿ ಮಾಡಿದೆ. ಮತ್ತೊಂದು ಕಡೆ ಬದಿಗೆ ಸರಿಸಿದ ನಾಯಕರೆಲ್ಲರೂ ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ತಮ್ಮನ್ನ ಕಡೆಗಣಿಸಿದವರಿಗೆ ಸಿಕ್ಕ ಶಾಸ್ತಿ ಎಂದು ಮೀಸೆ ಮರೆಯಲ್ಲೇ ನಗುವಂತೆ ಮಾಡಿದೆ.
ಒಟ್ಟಿನಲ್ಲಿ ಸೋತವರೆಲ್ಲರೂ ಪ್ರಾಮಾಣಿಕವಾಗಿ ವಾಸ್ತವ ಸತ್ಯ ವಿಚಾರಗಳನ್ನು ಪಕ್ಷದ ನಾಯಕರ ಮುಂದಿಟ್ಟು ಈಗಲಾದರೂ ತಿದ್ದಿಕೊಂಡು ನಡೆದರೆ ಉತ್ತಮ ಎನ್ನುವ ಅಭಿಪ್ರಾಯ ಮಂಡಿಸಿದ್ದಾರೆ. ಇದಕ್ಕೆ ನಾಯಕರುಗಳು ಏನೆನ್ನುತ್ತಾರೆ ಎನ್ನುವುದೇ ಕುತೂಹಲದ ವಿಚಾರ.