- ತಣ್ಣಗಾಗದ ಅಥಣಿ ಕ್ಷೇತ್ರದ ಟಿಕೆಟ್ ಜಟಾಪಟಿ
- ಬಿಜೆಪಿಗೆ ತಲೆ ನೋವಾದ ಶಿವಮೊಗ್ಗ ಬಂಡಾಯ
ರಾಜ್ಯದಲ್ಲಿ ಶತಾಯಗತಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಯತ್ನಿಸುತ್ತಿರುವ ಬಿಜೆಪಿ, ಅಭ್ಯರ್ಥಿಗಳ ಆಯ್ಕೆಗೆ ಇನ್ನಿಲ್ಲದ ಕಸರತ್ತು ನಡೆಸಿದೆ. ಸಭೆಯ ಮೇಲೊಂದು ಸಭೆ ನಡೆಸುತ್ತಿದೆ.
ಒಂದೆಡೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಇಂದು (ಏಪ್ರಿಲ್ 4) ಸಭೆ ಕರೆದಿದ್ದರೆ, ಬಿಜೆಪಿ ಮೊದಲ ಪಟ್ಟಿಯ ಶಿಫಾರಸಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸಂಭಾವ್ಯ ಪಟ್ಟಿ ಸಿದ್ದಪಡಿಸುವ ಹಿನ್ನೆಲೆ ಮಂಗಳವಾರ ಮತ್ತು ಬುಧವಾರ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ.
ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಜಿಲ್ಲಾ ಕೋರ್ ಕಮಿಟಿಯಲ್ಲಿ ಸಂಗ್ರಹಿಸಲಾದ ಆಕಾಂಕ್ಷಿಗಳ ಪಟ್ಟಿಯನ್ನು ‘ಫಿಲ್ಟರ್’ ಮಾಡಲಾಗುತ್ತದೆ. ಬಳಿಕ ಹೈ ಕಮಾಂಡ್ಗೆ ಅಭ್ಯರ್ಥಿಗಳ ಪಟ್ಟಿ ಸಲ್ಲಿಕೆಯಾಗಲಿದೆ.
ಬಿಜೆಪಿಯು ಪದಾಧಿಕಾರಿಗಳಿಂದ ಆಕಾಂಕ್ಷಿಗಳ ಪಟ್ಟಿ ಮಾಡಿಸಿತ್ತು. ಬಳಿಕ ಬೆಂಗಳೂರಿನ ನೆಲಮಂಗಲದ ರೆಸಾರ್ಟ್ವೊಂದರಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಿತ್ತು. ಈಗ ಮೂರನೇ ಹಂತದ ಭಾಗವಾಗಿ ಬಿಜೆಪಿ ಚುನಾವಣಾ ಸಮಿತಿ ಪ್ರತಿ ಕ್ಷೇತ್ರಕ್ಕೆ ಮೂವರು ಆಕಾಂಕ್ಷಿಗಳ ಹೆಸರು ಸೂಚಿಸುತ್ತದೆ ಎನ್ನಲಾಗಿದೆ.
ರಾಜ್ಯ ನಾಯಕರ ಶಿಫಾರಸಿನ ನಂತರ ಪಟ್ಟಿ ದೆಹಲಿ ಅಂಗಳಕ್ಕೆ ತೆರಳಲಿದೆ. ಅಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿವೆ. ಆದರೆ, ಬಿಜೆಪಿ ಮಾತ್ರ ಇನ್ನೂ ಮೊದಲ ಪಟ್ಟಿ ಶಿಫಾರಸಿನ ಹಂತದಲ್ಲೇ ಉಳಿದಿದೆ.
ಸಭೆಯಲ್ಲಿ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಡಿ ವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೈತಿಕ ಪೊಲೀಸ್ಗಿರಿ ಹತ್ಯೆಗೆ ಸಿಎಂ ಹೊಣೆ; ಡಿಕೆಶಿ ಆಗ್ರಹ
ನಿಲ್ಲದ ಅಥಣಿ ಜಟಾಪಟಿ
ಬಿಜೆಪಿಯೊಳಗೆ ಅಭ್ಯರ್ಥಿಗಳ ಆಯ್ಕೆ ಗೊಂದಲ ತಲೆದೂರಿದ್ದು, ಅಥಣಿ ವಿಧಾನಸಭಾ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್ ನೀಡುವಂತೆ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಅಥಣಿ ಕ್ಷೇತ್ರದ ಗೊಂದಲ ಪರಿಹರಿಸಲು ಯತ್ನಿಸಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
ರಮೇಶ್ ಜಾರಕಿಹೊಳಿ ಹಾಗೂ ಈರಣ್ಣ ಕಡಾಡಿ ನಡುವಿನ ಭಿನ್ನಮತವನ್ನು ಬೆಳಗಾವಿಯಲ್ಲೇ ಶಮನಮಾಡಿಕೊಂಡು ಬನ್ನಿ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದರು.
ಬೆನ್ನಲ್ಲೇ ಪ್ರಲ್ಹಾದ್ ಜೋಶಿ ಮತ್ತು ನಿರ್ಮಲ್ ಕುಮಾರ್ ಸುರಾನಾ, ಬೆಳಗಾವಿ ಉತ್ತರ ಹಾಗೂ ದಕ್ಷಿಣ ಪದಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.
ಶಿವಮೊಗ್ಗದಲ್ಲೂ ಬಂಡಾಯ
ಯಡಿಯೂರಪ್ಪ ಅವರು ತವರು ಜಿಲ್ಲೆಯಲ್ಲೇ ಬಿಜೆಪಿ ಟಿಕೆಟ್ ಗುದ್ದಾಟದ ಬಿಸಿ ತಟ್ಟಿದೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ವಪಕ್ಷೀಯರೇ ಬಂಡಾಯ ಸಾರಿದ್ದು, ಟಿಕೆಟ್ ಆಕಾಂಕ್ಷಿಗಳೆಲ್ಲ ತಮಗೆ ಟಿಕೆಟ್ ಕೊಡಿ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗ ಬಿಜೆಪಿ ನಾಯಕರು ಬಹಿರಂಗವಾಗಿ ಟಿಕೆಟ್ ವಿಷಯ ಪ್ರಸ್ತಾಪಿಸುತ್ತಿದ್ದು, ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ಈಶ್ವರಪ್ಪ ಪುತ್ರ ಕಾಂತೇಶ್, ಧನಂಜಯ ಸರ್ಜಿ, ಜ್ಯೋತಿ ಪ್ರಕಾಶ್ ಮತ್ತು ಆಯನೂರು ಮಂಜುನಾಥ್ ಶಿವಮೊಗ್ಗ ನಗರ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.