ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಒಂದು ಕಡೆ ಬಂಡಾಯದ ಬಿಸಿ ಏರುತ್ತಿದ್ದರೆ, ಟಿಕೆಟ್ ಗಿಟ್ಟಿಸಿಕೊಂಡಿರುವ ಹಾಲಿ ಸಂಸದರು ಸ್ವಪಕ್ಷದ ಕಾರ್ಯಕರ್ತರಿಂದಲೇ ಮುಜುಗರಕ್ಕೊಳಗಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇಂದು ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಬೆಂಗಳೂರು ಸೆಂಟ್ರಲ್ ಕ್ಷೇತ್ರ ಬಿಜೆಪಿ ಸಂಸದ ಪಿ ಸಿ ಮೋಹನ್ ವಿರುದ್ಧ ಪಕ್ಷದ ಕಾರ್ಯಕರ್ತರು ತಿರುಗಿಬಿದ್ದ ಘಟನೆ ಇಂದು ನಡೆದಿದೆ. ಬೆಂಗಳೂರಿನ ಶಾಂತಿನಗರದಲ್ಲಿ ಪ್ರಚಾರದ ವೇಳೆ ಸಂಸದರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದ್ದು, ಹಾಲಿ ಸಂಸದನಿಗೆ ಭಾರೀ ಮುಖಭಂಗ ಉಂಟಾಗಿದೆ.
“ನಿಮ್ಮನ್ನು ಮೂರಿ ಬಾರಿ ಸಂಸದರಾಗಿ ಲೋಕಸಭೆಗೆ ಕಳಿಸಿದ್ದೇವೆ. ನಮ್ಮ ಕ್ಷೇತ್ರದ ಸಂಸದರಾಗಿ ನಮ್ಮ ಪ್ರದೇಶಕ್ಕೆ ಏನು ಮಾಡಿದ್ದೀರಾ? ನಿಮ್ಮ ಸಾಧನೆ ಏನು? ನಾವು ಮೋದಿಯವರನ್ನು ನೋಡಿ ನಿಮಗೆ ಓಟು ಕೊಟ್ಟಿದ್ದರೆ, ನೀವು ನಮಗೆ ಏನು ಮಾಡಿದ್ದೀರಾ? ನಮ್ಮ ಪ್ರದೇಶಕ್ಕೆ ಈ ಮೊದಲು ಎಷ್ಟು ಬಾರಿ ಬಂದಿದ್ದೀರಾ? ಬಡವರಿಗೆ ಏನು ಮಾಡಿದ್ದೀರಾ?” ಎಂದು ಹಲವು ಪ್ರಶ್ನೆಗಳನ್ನು ಬಿಜೆಪಿ ಕಾರ್ಯಕರ್ತರು ಕೇಳಿದಾಗ, ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ಉಲ್ಲೇಖಿಸುತ್ತಾ ಸಮಜಾಯಿಷಿ ನೀಡಲು ಬಿಜೆಪಿ ಸಂಸದ ಪಿಸಿ ಮೋಹನ್ ಯತ್ನಿಸಿದರು. ಅಲ್ಲದೇ, ಈ ನಡುವೆ ಪಿ ಸಿ ಮೋಹನ್ ಅಭಿಮಾನಿಗಳು ಆಕ್ರೋಶಗೊಂಡಿದ್ದ ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕೆ ಇಳಿದರು. ವಾಗ್ವಾದವು ವಿಪರೀತಕ್ಕೆ ಏರಿತಲ್ಲದೇ, ಪಿ ಸಿ ಮೋಹನ್ಗೆ ಧಿಕ್ಕಾರ ಕೂಗಿದ್ದಲ್ಲದೇ, ‘ಭಾರತ್ ಮಾತಾಕೀ ಜೈ” ಎಂದು ಘೋಷಣೆ ಕೂಡ ಕೂಗಿದರು.
ಕೊನೆಗೆ ಆಕ್ರೋಶ ಬಿಜೆಪಿ ಕಾರ್ಯಕರ್ತರನ್ನು ಎಷ್ಟೇ ಸಮಾಧಾನಿಸಲು ಪಿ ಸಿ ಮೋಹನ್ ಯತ್ನಿಸಿದರಾದರೂ, ಸಮಾಧಾನಗೊಳ್ಳಲಿಲ್ಲ. ಬೇರೆ ದಾರಿ ಕಾಣದಾಗದೆ, ಚುನಾವಣಾ ಪ್ರಚಾರ ಕಾರ್ಯವನ್ನು ಅರ್ಧಕ್ಕೇ ಮೊಟಕುಗೊಳಿಸಿ, ಸ್ಥಳದಿಂದ ತೆರಳಿದರು.
4ನೇ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಪಿಸಿ ಮೋಹನ್
ಅಲ್ಪಸಂಖ್ಯಾತರೇ ಹೆಚ್ಚಿರುವ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿಯಿಂದ 4ನೇ ಬಾರಿ ಪಿಸಿ ಮೋಹನ್ ಕಣಕ್ಕೆ ಇಳಿದಿದ್ದಾರೆ. ಬೆಂಗಳೂರಿನ ಹೃದಯ ಭಾಗದ 8 ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗಿನಿಂದ ಈ ಕ್ಷೇತ್ರದಲ್ಲಿ ನಡೆದ ಎಲ್ಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದುಕೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3ರಲ್ಲಿ ಗೆಲುವು ಸಾಧಿಸಿದೆ. ಸಚಿವರಾದ ಕೆ.ಜೆ.ಜಾರ್ಜ್(ಸರ್ವಜ್ಞ ನಗರ), ದಿನೇಶ್ ಗುಂಡೂರಾವ್ (ಗಾಂಧಿನಗರ), ಝಮೀರ್ ಅಹಮದ್ ಖಾನ್(ಚಾಮರಾಜಪೇಟೆ), ರಿಜ್ವಾನ್ ಅರ್ಷದ್ (ಶಿವಾಜಿ ನಗರ), ಎನ್.ಎ.ಹ್ಯಾರಿಸ್(ಶಾಂತಿನಗರ) ಕಾಂಗ್ರೆಸ್ ಶಾಸಕರು. ಸುರೇಶ್ ಕುಮಾರ್ (ರಾಜಾಜಿನಗರ), ಎಸ್ ರಘು(ಸಿವಿ ರಾಮನ್ ನಗರ) ಮತ್ತು ಮಂಜುಳಾ ಲಿಂಬಾವಳಿ(ಮಹದೇವಪುರ) ಬಿಜೆಪಿ ಶಾಸಕರಾಗಿದ್ದಾರೆ.
C.V Raman Nagar showed me enormous support and encouragement in today’s Congress Party workers’ meeting in preparation for the upcoming election.
Present at the meeting were KPCC Working President and Rajyasabha MP Shri @ChandrashekarMp , Shivajinagar MLA Shri @ArshadRizwan ,… pic.twitter.com/cbf7sy1frJ
— Mansoor Khan (@MansoorKhanINC) March 28, 2024
ಹಾಲಿ ಸಂಸದ ಬಿಜೆಪಿಯ ಪಿ.ಸಿ.ಮೋಹನ್ ಅವರು 2009, 2014 ಮತ್ತು 2019ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು, ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಅಭಿವೃದ್ಧಿ ಮಾತ್ರ ಏನೂ ಮಾಡಿಲ್ಲ ಎಂದು ಬಿಜೆಪಿ ಕಾರ್ಯಕರ್ತರೇ ದೂರುತ್ತಿದ್ದಾರೆ. ಹೋದಲ್ಲೆಲ್ಲ ತಮ್ಮ ಅಭ್ಯರ್ಥಿಯ ವಿರುದ್ಧವೇ ಧಿಕ್ಕಾರ ಕೂಗುತ್ತಿದ್ದಾರೆ.
ಕಾಂಗ್ರೆಸ್ನಿಂದ ಈ ಬಾರಿ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ಗೆ ಅವಕಾಶ ಸಿಗಲಿದೆಯೇ ಎಂದು ಕಾದುನೋಡಬೇಕಿದೆ.