“ನನ್ನನ್ನು ಸೋಲಿಸಬೇಕು ಎಂದು ನಿರ್ದೇಶಕ, ನಿರ್ಮಾಪಕ, ಚಿತ್ರಕತೆ ಬರೆಯುವವರು, ನಟ, ಬಂಡವಾಳ ಹೂಡಿಕೆ ಮಾಡುವವರು ಎಲ್ಲಾ ಒಂದಾಗಿದ್ದಾರಂತೆ. ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ಬಿಟ್ಟರೆ ಜನ ಒಪ್ಪಲ್ಲ” ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಬಿಜೆಪಿ-ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಗೆ ಡಿ.ಕೆ. ಸುರೇಶ್ ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ತಮ್ಮ ರಾಜಕೀಯ ಎದುರಾಳಿ ಕುಮಾರಸ್ವಾಮಿ, ಮುನಿರತ್ನ ಹಾಗೂ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
“ಎಲ್ಲರು ಒಂದಾಗಿ ನನ್ನನ್ನು ಸೋಲಿಸುತ್ತಾರಂತೆ? ಏತಕ್ಕೆ ನನ್ನ ಸೋಲಿಸುತ್ತೀರ? ಬಡವರ ಪರವಾಗಿ, ರೈತರ ಪರವಾಗಿ, ಕನ್ನಡಿಗರ ಪರವಾಗಿ ದನಿ ಎತ್ತಿದಕ್ಕಾ? ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಸೋಲಿಸಲು ಹೊರಟ್ಟಿದ್ದೀರಾ? ಅವರಿಗೆ ನಿಜ ಜೀವನಕ್ಕೂ, ಸಿನಿಮಾಕ್ಕೂ ವ್ಯತ್ಯಾಸ ಗೊತ್ತಿಲ್ಲ. ನಿಜ ಜೀವನದಲ್ಲಿ ಸೋಲಿಸಬೇಕೆ ಹೊರತು, ಸಿನಿಮಾದಲ್ಲಿ ಅಲ್ಲ. ನೀವು ಬಿಟ್ಟಿರುವ ಎಲ್ಲಾ ರೀಲುಗಳು ಡಬ್ಬ ಸೇರಿಕೊಂಡಿವೆ” ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್, ರಾಮನಗರ ಡಿಸಿ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಡಿಸಿ ಅವಿನಾಶ್ ಮೆನನ್ ರಾಜೇಂದ್ರ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಚ್ ಸಿ ಬಾಲಕೃಷ್ಣ, ಆನೇಕಲ್ ಶಿವಣ್ಣ ಮತ್ತಿತರರಿದ್ದರು. pic.twitter.com/Q3sLnSESzX
— eedina.com (@eedinanews) March 28, 2024
ಮುಂದಿನ ಮೂವತ್ತು ದಿನಗಳ ಕಾಲ ಯಾರು, ಯಾರು ಏನು ಮಾತನಾಡುತ್ತಾರೆ ಎಂಬುದನ್ನು ನಾವು, ನೀವು ಕೇಳಬೇಕಾಗಿದೆ. ಅದಕ್ಕೆ ಉತ್ತರ ಕೊಡುವ ಕಾಲ ಮುಂದಿದೆ. ಕಣ್ಣೀರು ಹಾಕುವವರಿಗೆ ಈ ಚುನಾವಣೆಗೆ ಒಂದು ಕರ್ಮಭೂಮಿ, ಇನ್ನೊಂದು ಚುನಾವಣೆಗೆ ಮತ್ತೊಂದು ಕರ್ಮಭೂಮಿ. ಯಾವ, ಯಾವ ಕರ್ಮಭೂಮಿಯಲ್ಲಿ ಏನೇನು ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ ಎನ್ನುವ ಮೂಲಕ ಕುಮಾರಸ್ವಾಮಿ ವಿರುದ್ಧ ಡಿ ಕೆ ಸುರೇಶ್ ಹರಿಹಾಯ್ದರು.
ನಾವು ಮುಂದಿನ 4 ವರ್ಷಗಳ ಕಾಲ ರಾಜ್ಯದ ಜನರ ಕಷ್ಟಗಳನ್ನು ಪರಿಹರಿಸಲು ಬದ್ಧರಾಗಿದ್ದೇವೆ. ಸುಳ್ಳಿನ ಗ್ಯಾರಂಟಿಗಳನ್ನು ಹೊತ್ತುಕೊಂಡು ಬಿಜೆಪಿಯವರು ಮತ ಕೇಳಲು ಬರುತ್ತಿದ್ದಾರೆ. ಸುಳ್ಳು ಹೇಳುವವರ ಜೊತೆ ಕಣ್ಣೀರು ಹಾಕುವವರು ಸೇರಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದರು.
ಕನ್ನಡಿಗರ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ನೀಡಿ ಲೂಟಿ ಮಾಡಲಾಗುತ್ತಿದೆ ಎಂದು ದನಿ ಎತ್ತಿದ ಕಾರಣಕ್ಕೆ ಬಿಜೆಪಿಯವರು ದೇಶದ್ರೋಹಿ ಪಟ್ಟ ಕಟ್ಟಿದರು. ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ನೀರು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. 4.30 ಲಕ್ಷ ಕೋಟಿ ತೆರಿಗೆ ಹಣವನ್ನು ಕನ್ನಡಿಗರು ಕೇಂದ್ರಕ್ಕೆ ನೀಡಿದ್ದಾರೆ. ರಾಜ್ಯದ ಬಜೆಟ್ 3.71 ಲಕ್ಷ ಕೋಟಿ, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಿಂದ ಕೇಂದ್ರಕ್ಕೆ 24 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ನೀಡಿದ್ದೇವೆ. ಆದರೆ ಅವರು ನಮಗೆ ಮರಳಿ ಕೊಟ್ಟಿರುವುದು ಕೇವಲ 2.94 ಲಕ್ಷ ಕೋಟಿ ಮಾತ್ರ ಎಂದು ಸುರೇಶ್ ತಿಳಿಸಿದರು.
ಇದನ್ನು ಓದಿದ್ದೀರಾ? PTI V/s ANI : ಡಿ ಕೆ ಸುರೇಶ್ ಎದುರೇ ವರದಿಗಾರ್ತಿ ಮೇಲೆ ಹಲ್ಲೆಗೈದ ಪತ್ರಕರ್ತ: ವಿಡಿಯೋ ವೈರಲ್
ಕನ್ನಡಿಗರ ದನಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಈ ಹೋರಾಟ ನಿರಂತರ, ಯಾರ ಬೆದರಿಕೆಗೂ ಜಗ್ಗುವ ವ್ಯಕ್ತಿ ನಾನಲ್ಲ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಉದ್ಯೋಗ ಖಾತ್ರಿ ಸೇರಿದಂತೆ ಅನೇಕ ಯೋಜನೆಗಳು ಮನೆ, ಮನೆಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳಿಂದ ರಾಮನಗರಕ್ಕೆ ರೂ.400 ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ. ಕೊರೋನಾ ಸಂದರ್ಭದಲ್ಲಿ ಎಲ್ಲರೂ ಮನೆ ಸೇರಿದ್ದರು. ಆದರೆ ನಾನು ನಿಮ್ಮ ಜೊತೆ ನಿಂತು ನಿಮ್ಮ ಕಷ್ಟಗಳಿಗೆ ಹೆಗಲಾಗಿ ಕೆಲಸ ಮಾಡಿದ್ದೇನೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ದೇವರಿಗೆ ಪೂಜೆ ಸಲ್ಲಿಸಿ, ಕನ್ನಡ ಪೇಟ ಧರಿಸಿ ನಾಮಪತ್ರ ಸಲ್ಲಿಕೆ:
ಗುರುವಾರ ಬೆಳಗ್ಗೆ ತಮ್ಮ ತಾಯಿ ಗೌರಮ್ಮ, ಸಹೋದರ ಡಿ.ಕೆ ಶಿವಕುಮಾರ್, ಅತ್ತಿಗೆ ಉಷಾ, ಅಣ್ಣನ ಮಗಳು ಐಶ್ವರ್ಯ ಡಿಕೆಎಸ್ ಹೆಗ್ಡೆ ಜೊತೆಗೂಡಿ ಸಾತನೂರಿನ ಕಬ್ಬಾಳಮ್ಮ, ಮನೆದೇವರಾದ ಕನಕಪುರದ ಕೆಂಕೇರಮ್ಮ, ರಾಮನಗರದ ಚಾಮುಂಡೇಶ್ವರಿ ದೇಗುಲದಲ್ಲಿ ಡಿ ಕೆ ಸುರೇಶ್ ಪೂಜೆ ಸಲ್ಲಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ @DKSureshINC ಡಿ ಕೆ ಸುರೇಶ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆಸಲಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಕಾಲಿಗೆ ಬಿದ್ದು, ಆಶೀರ್ವಾದ ಪಡೆದರು. ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್, ಪಿ ಜಿ ಆರ್ ಸಿಂಧ್ಯ ಮತ್ತಿತರರಿದ್ದರು. pic.twitter.com/cbxUQknws9
— eedina.com (@eedinanews) March 28, 2024
ನಂತರ ರಾಮನಗರದಲ್ಲಿ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜತೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುರೇಶ್ ಅವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟದ ಪೇಟ ಧರಿಸಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ, ಮಾಗಡಿ ಶಾಸಕರಾದ ಬಾಲಕೃಷ್ಣ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.