ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ಬಳಲಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾರಿನಲ್ಲಿ ಕೂರುವ ವೇಳೆ ನಿತ್ರಾಣ ಕಳೆದುಕೊಂಡು ಕುಸಿದಿದ್ದಾರೆ.
ವಿಜಯನಗರದ ಕೂಡ್ಲಿಗಿ ಬಳಿ ಪ್ರಚಾರಕ್ಕೆ ತೆರಳಿದ್ದ ಸಿದ್ದರಾಮಯ್ಯ ಬಳಲಿಕೆಯಿಂದ ಕುಸಿದು ಕೂತ ಘಟನೆ ಕೂಡ್ಲಿಗಿ ಏರ್ ಬೇಸ್ ನಲ್ಲಿ ನಡೆದಿದೆ. ಇಂದು ವಿಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಪ್ರಚಾರಕ್ಕೆ ತೆರಳಿದ್ದರು.
ಕಾರಿನಲ್ಲಿ ನಿಂತು ಕಾರ್ಯಕರ್ತರತ್ತ ಕೈ ಬೀಸುತ್ತಿದ್ದ ಸಿದ್ದರಾಮಯ್ಯ ಮರಳಿ ಕಾರಿನಲ್ಲಿ ಕೂರುವ ವೇಳೆ ವಾಲಿದಂತೆ ಕೆಳಗೆ ಕುಸಿದರು. ಈ ವೇಳೆ ತಕ್ಷಣದಲ್ಲಿ ಸ್ಪಂದಿಸಿದ ಅವರ ಗನ್ ಮ್ಯಾನ್, ಅವರನ್ನೆತ್ತಿ ಕಾರಿನಲ್ಲಿ ಕೂರಿಸಿದರು. ಬಳಿಕ ಅವರಿಗೆ ತಂಪು ಪಾನೀಯ ನೀಡಿ ಆರೈಕೆ ಮಾಡಲಾಯಿತು.
ಅದೃಷ್ಟವಶಾತ್ ಸಿದ್ದರಾಮಯ್ಯ ಅವರ ಕಾರಿನ ಬಳಿ ಗನ್ಮ್ಯಾನ್ ಮತ್ತು ಇತರ ಬೆಂಬಲಿಗರು ಇದ್ದ ಕಾರಣ ಯಾವುದೆ ಅಪಾಯ ಸಂಭವಿಸಿಲ್ಲ. ವೈದ್ಯರು ಸಿದ್ದರಾಮಯ್ಯ ಅವರಿಗೆ ಗ್ಲೂಕೋಸ್ ನೀಡಿದ್ದಾರೆ, ಸಿದ್ದರಾಮಯ್ಯ ಅವರು ಕ್ಷಣಕಾಲ ಪ್ರಜ್ಞೆ ತಪ್ಪಿದ್ದರು ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರ ಮನೆಗೆ ತೆರಳಿ, ಆ ಬಳಿಕ ಅವರನ್ನು ವೈದ್ಯರು ಪರೀಕ್ಷಿಸಲಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ತೆರಳುತ್ತಾರೆ.
ಘಟನೆ ಕುರಿತು ಸ್ವತಃ ಸಿದ್ದರಾಮಯ್ಯನವರೆ ಟ್ವೀಟ್ ಮಾಡಿದ್ದಾರೆ.