- ತಮ್ಮ ಚುನಾವಣಾ ಸ್ಪರ್ಧೆ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಜಿ. ಪರಮೇಶ್ವರ್
- ಜನ ಬದಲಾವಣೆ ಬಯಸಿದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ
ತಮ್ಮ ಚುನಾವಣಾ ಸ್ಪರ್ಧಾಕಣದ ವಿಚಾರವಾಗಿ ಎದ್ದಿದ್ದ ಊಹಾಪೋಹಗಳಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಸೋತರೂ ಗೆದ್ದರೂ ತಮ್ಮ ಕರ್ಮಭೂಮಿ ಕೊರಟಗೆರೆಯಿಂದಲೇ ತಮ್ಮ ಸ್ಪರ್ಧೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಡಾ.ಜಿ. ಪರಮೇಶ್ವರ್, ನಾನು ಬೆಂಗಳೂರಿನ ಮಹದೇವಪುರದಿಂದ ಸ್ಪರ್ಧೆ ಮಾಡುವುದಾಗಿ ಸುದ್ದಿಯಾಗಿತ್ತು. ಆದರೆ ಅಲ್ಲಿಂದ ಕಣಕ್ಕಿಳಿಯುವುದರ ಬಗ್ಗೆ ನಾನು ಯೋಚನೆಯನ್ನೇ ಮಾಡಿಲ್ಲ. ನನ್ನೂರಿನ ಜನ ನನ್ನದೇ ಕ್ಷೇತ್ರ ಇರುವಾಗ ನಾನು ಬೇರೆ ಕಡೆಯಿಂದ ಸ್ಪರ್ಧೆ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ಜಿ. ಪರಮೇಶ್ವರ್, ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ಲುತ್ತಾರೆ ಅವರ ಜನಮನ್ನಣೆ ಸಹಿಸಲಾರದೆ ಬಿಜೆಪಿ ಇಲ್ಲಸಲ್ಲದ ಆರೋಪಗಳನ್ನು, ಸುದ್ದಿಗಳನ್ನು ಹರಡುತ್ತಿದೆ ಎಂದರು.
ಇನ್ನು ಸಚಿವ ಮಹದೇವಪ್ಪ ಸ್ಪರ್ಧೆ ವಿಚಾರದ ಬಗ್ಗೆ ಮಾಹಿತಿ ನೀಡಿದ ಪರಮೇಶ್ವರ್, ನಮ್ಮ ಪಕ್ಷದ ಹಿರಿಯ ದಲಿತ ನಾಯಕರಲ್ಲಿ ಒಬ್ಬರಾಗಿರುವ ಮಹದೇವಪ್ಪ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ.
ನಂಜನಗೂಡಿನಿಂದ ಹಿಂದೆ ಸರಿದಾಕ್ಷಣಕ್ಕೆ ಅವರು ಸ್ಪರ್ಧೆ ಮಾಡುವುದಿಲ್ಲ ಎಂದಲ್ಲ. ಅವರು ಮಾನವೀಯತೆಯ ರಾಜಕಾರಣಕ್ಕೆ ಮುಂದಡಿ ಇಟ್ಟಿದ್ದಾರೆ. ನಂಜನಗೂಡನ್ನು ದರ್ಶನ್ ಅವರಿಗೆ ಬಿಟ್ಟ ಮೇಲೆ ಟಿ.ನರಸೀಪುರದಿಂದಲೇ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಜನ ಬದಲಾವಣೆ ಬಯಸಿದ್ದ ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಖಂಡಿತ ಬೆಂಬಲಿಸಲಿದ್ದಾರೆ. ಹೀಗಾಗಿ ಮುಂದೆ ನಾವು ಗೆದ್ದುಬರುತ್ತೇವೆ, ಜನಪರ ಸರ್ಕಾರ ನಡೆಸುತ್ತೇವೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.