ಕಾಂಗ್ರೆಸ್ಸಿನಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, “ಕಾಂಗ್ರೆಸ್ನವರು 30-35 ಜನಕ್ಕೂ ಡಿಸಿಎಂ ಸ್ಥಾನ ಕೊಟ್ಟು ಬಿಡಲಿ” ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗೊಂದಿಗೆ ಮಾತನಾಡಿದ ಮಾಜಿ ಸಿಎಂ, “ಕಾಂಗ್ರೆಸ್ನಲ್ಲಿ ಪ್ರತಿ ಜಾತಿಗೆ ಉಪಮುಖ್ಯಮಂತ್ರಿ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ನನ್ನ ಅಭಿಪ್ರಾಯದಲ್ಲಿ ಸುಮಾರು 30-35 ಜನರಿಗೂ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟು ಬಿಡಲಿ. ಆಗ ಯಾವ ಸಮಸ್ಯೆಯೂ ಇರಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
“ಪ್ರತಿನಿತ್ಯ ಕೆಲವು ಸಚಿವರು, ಮುಖಂಡರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಜನರಿಗೆ ಇದು ಯಾವುದೂ ಅಗತ್ಯವಿಲ್ಲ. ಅಧಿಕಾರದಲ್ಲಿರುವ ಕಾಂಗ್ರೆಸ್ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡ್ತಾ ಇದೆ. ಈಗ ಗ್ಯಾರಂಟಿ ನೋಡಿಕೊಳ್ಳೋದಕ್ಕೂ ಓರ್ವ ಅಧ್ಯಕ್ಷನಂತೆ, ಐವರು ಉಪಾಧ್ಯಕ್ಷರಂತೆ. ಇದೆಲ್ಲ ಬೇಕಾ” ಎಂದು ಪ್ರಶ್ನಿಸಿದರು.
“ಚಿಕ್ಕಮಗಳೂರು, ಕೊಡಗು ಭಾಗದ ಕಾಫಿ ಬೆಳೆಗಾರರು ಅಕಾಲಿಕ ಮಳೆಯ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಸಿಎಂ ಆಗಲೀ, ಡಿಸಿಎಂ ಆಗಲೀ, ಸಚಿವರಾಗಲೀ ಮಾತನಾಡುತ್ತಿದ್ದಾರಾ? ರೈತರ ಸಂಕಷ್ಟವನ್ನು ಕೇಳುತ್ತಿದ್ದಾರ? ಎಂದು ಕೇಳಿದ ಕುಮಾರಸ್ವಾಮಿ, ಕಾಂಗ್ರೆಸ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಕಾಂಗ್ರೆಸ್ನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯುವನಿಧಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯುವನಿಧಿ ಯೋಜನೆ ಕಾರ್ಯಕ್ರಮದಲ್ಲಿ ಏನಿದೆ? ಯುವನಿಧಿ ಯೋಜನೆಗೆ ಎಷ್ಟು ಜನ ನೋಂದಣಿ ಮಾಡಿಸಿದ್ದಾರೆ? 2023-2024 ಎಷ್ಟು ಜನ ಪದವಿ ಪಡೆದಿದ್ದಾರೆ, ಅವರ ಗೈಡ್ ಲೈನ್ಸ್ನಲ್ಲಿ ಏನಿದೆ ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಹಾವೇರಿ | ಅನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ತಿರುವು: ಮಹಿಳೆ ಅಪಹರಿಸಿ ಏಳು ಮಂದಿಯಿಂದ ಅತ್ಯಾಚಾರ
“ಮಂಡ್ಯದಲ್ಲಿ ನಮ್ಮ ಸಾಮಾನ್ಯ ಕಾರ್ಯಕರ್ತ ಕೂಡ ಗೆಲ್ಲುತ್ತಾನೆ. ಕಳೆದ ಬಾರಿಯ ಲೋಕಸಭೆ ಚುನಾವಣೆ ಬೇರೆ, ಈ ಚುನಾವಣೆ ಬೇರೆ. ಇವತ್ತು ಓರ್ವ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿದರೂ ಗೆಲ್ಲಲಿದ್ದಾರೆ. ಕಳೆದ ಬಾರಿ ಎಲ್ಲರೂ ಪಕ್ಷೇತರ ಅಭ್ಯರ್ಥಿಯ ಪರ ಮತ ಹಾಕಿದರು. ರೈತರು, ಬಿಜೆಪಿ, ಕಾಂಗ್ರೆಸ್ಸಿಗರು ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಜೆಡಿಎಸ್ ಬಿಟ್ಟು ಶೇ 2ರಿಂದ 3ರಷ್ಟು ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯ ಕ್ಷೇತ್ರದಲ್ಲಿ ಆ ವಾತಾವರಣ ಇಲ್ಲ” ಎಂದು ಇದೇ ವೇಳೆ ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಿದರು.