ಭದ್ರಾ ಬಲದಂಡೆ ಕಾಲುವೆಯಿಂದ ಪೈಪ್ ಅಳವಡಿಸಿ ಹೊಸದುರ್ಗ ನಗರ ಮತ್ತು ತಾಲೂಕಿನ 352 ಹಳ್ಳಿಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ 167 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಬಿಜೆಪಿಯ ಕೆಲವು ನಾಯಕರು ಮಾಡುತ್ತಿರುವ ಅಪಪ್ರಚಾರ ಮತ್ತು ರೈತರನ್ನು ನೀರಿನ ವಿಷಯದಲ್ಲಿ ಭಾವನಾತ್ಮಕವಾಗಿ ಕೆರಳಿಸುವ, ಯೋಜನೆಯ ಬಗ್ಗೆ ಅವರು ಹೇಳುತ್ತಿರುವ ಸುಳ್ಳನ್ನು ಖಂಡಿಸಿ, ವಾಸ್ತವ ಸ್ಥಿತಿಯನ್ನು ಜನರ ಮುಂದಿಡಲು ದಾವಣಗೆರೆ ಜಿಲ್ಲೆಯ ಕಾಂಗ್ರೆಸಿನ ಚನ್ನಗಿರಿ ಹೊನ್ನಾಳಿ ಮತ್ತು ಮಾಯಕೊಂಡ ಶಾಸಕರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಯೋಜನೆಯ ಸತ್ಯಶೋಧನಾ ಸಭೆ ನಡೆಸಿದರು.

ಈ ವೇಳೆ ಕಾಂಗ್ರೆಸ್ ಹಿರಿಯರು, ಹೊನ್ನಾಳಿ ಶಾಸಕರಾದ ಶಾಂತನಗೌಡ ಮಾತನಾಡಿ “ಭದ್ರಾ ಮೇಲ್ದಂಡೆ ಯೋಜನೆಯ ಬಲದಂಡೆ ಕಾಲುವೆಯಲ್ಲಿ ಹೊಸದುರ್ಗ ನಗರ ಮತ್ತು ತಾಲೂಕಿನ 346 ಹಳ್ಳಿಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ 172 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 2019ರಲ್ಲಿ ಬಿಜೆಪಿ ಸರ್ಕಾರವೇ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. 2020ರಲ್ಲಿ ಮತ್ತೆ ಇದೇ ಬಿಜೆಪಿ ಸರ್ಕಾರ ಭದ್ರಾ ಹಿನ್ನೀರಿನಿಂದ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಮರುನಡಾವಳಿಯನ್ನು ಮತ್ತೆ ಮಾಡಿದೆ. ನಂತರ ಹಣ ಬಿಡುಗಡೆ ಮಾಡಿ ಕಾಮಗಾರಿಯನ್ನು ಪ್ರಾರಂಭಿಸಿದ್ದು ಇದೇ ಬಿಜೆಪಿ ಸರ್ಕಾರ. ಆದರೆ ಈಗ ರಾಜಕೀಯ ಮಾಡಲಿಕ್ಕೋಸ್ಕರ ಕಾಂಗ್ರೆಸಿನ ಮೇಲೆ ಅವರು ಆರೋಪ ಹೊರಿಸಿ ಸುಳ್ಳು ಹೇಳುತ್ತಿದ್ದಾರೆ. ಕೇವಲ ರೈತರನ್ನು ಭಾವನಾತ್ಮಕವಾಗಿ ಕೆರಳಿಸಿ, ದ್ವೇಷ ಹರಡಲು, ದಾರಿ ತಪ್ಪಿಸಲು ರಾಜಕೀಯದ ಸಲುವಾಗಿ ಸುಳ್ಳು ಹೇಳುವುದೇ ಇವರ ಕೆಲಸವಾಗಿಬಿಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೇವಲ ವಿದ್ಯುತ್ ಶಕ್ತಿಯನ್ನು ಉಳಿಸುವ ಸಲುವಾಗಿ ಬಲದಂಡೆ ನಾಲೆಯಿಂದ ಪೈಪ್ ಮೂಲಕ ಗ್ರಾವಿಟಿ ಪವರ್ ನಲ್ಲಿ ನೀರನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಇಂಜಿನಿಯರ್ಗಳು ಯೋಜನೆ ರೂಪಿಸಿದ್ದಾರೆ. ಇವರಿಗೆ ಕೋಟಿ ಕೋಟಿ ಸಂಬಳ ತೆಗೆದುಕೊಳ್ಳುವುದು ಗೊತ್ತು. ಆದರೆ ರೈತರ ಕಷ್ಟ ನಷ್ಟಗಳು ಅರಿವಾಗುವುದಿಲ್ಲ” ಎಂದು ಅಧಿಕಾರಿಗಳ ವಿರುದ್ಧ ಅವೈಜ್ಞಾನಿಕ ಕಾಮಗಾರಿಯ ಆರೋಪ ಹೊರಿಸಿದರು.

“ಕೇವಲ ರೈತರ ವಿಷಯದಲ್ಲಿ ಭಾವನಾತ್ಮಕ ಆಟವಾಡುತ್ತಾ ಅಪಪ್ರಚಾರ ಮಾಡುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ಸರ್ಕಾರದ ಮೇಲೆ ಒತ್ತಡ ತಂದು ಯೋಜನೆಯ ಮಾರ್ಗ ಬದಲಿಸಲು ಹೋರಾಟ ನೆಡೆಸಬಹುದು. ಆದರೆ ಈಗಾಗಲೇ ಶೇಕಡಾ 75 ಭಾಗ ಕೆಲಸ ಮುಗಿದಿದೆ. ಹೊಸದುರ್ಗ ತಾಲೂಕಿನ 346 ಹಳ್ಳಿಗಳು ಮತ್ತು ಚಿಕ್ಕಮಗಳೂರು ಜಿಲ್ಲೆಯ ನೂರಾ ಎಪ್ಫತ್ತೆರಡು ಹಳ್ಳಿಗಳಿಗೆ ಸಂಪರ್ಕ ಕಾರ್ಯ ಮತ್ತು ಶುದ್ಧೀಕರಣ ಘಟಕಗಳ ಕಾರ್ಯ ಮುಗಿದಿದ್ದು 80ರಷ್ಟು ಕಾಮಗಾರಿ ಸಂಪೂರ್ಣಗೊಂಡಿದೆ. ಈ ಹಂತದಲ್ಲಿ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ. ನಾವು ಒತ್ತಾಯ ಮಾಡಲು ಕೂಡ ಸಾಧ್ಯವಿಲ್ಲ. ಇದಕ್ಕೆ ರಾಷ್ಟ್ರೀಯ ನೀತಿ ಕಾರಣವಾಗಿದೆ. ಯಾವುದೇ ಯೋಜನೆ ಮಾಡಿದ್ದರೂ ಮೊದಲು ಕುಡಿಯುವ ನೀರಿಗೆ ಆದ್ಯತೆಯನ್ನು ನೀಡಬೇಕು ಎಂದು ಕಾನೂನಿದೆ. ಹಾಗಾಗಿ ಈ ವಿಷಯದಲ್ಲಿ ನಾವು ಕೂಡ ಒತ್ತಾಯ ಮಾಡುವುದು ಸರಿಯೇ” ಯೋಜನೆಯ ಬಗ್ಗೆ ವಿಶ್ಲೇಷಿಸಿದರು.

“ಬಳ್ಳಾರಿ, ಹೊಸದುರ್ಗ, ಕೊಟ್ಟೂರು ಸೇರಿದಂತೆ ಬೇರೆಬೇರೆ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುವುದು ಸರಿಯಲ್ಲ. ಸದ್ಯ ಕೇವಲ 21 ಕ್ಯೂಸೆಕ್ಸ್ ನೀರನ್ನು ಮಾತ್ರ ನಾಲೆಯಿಂದ ಬಳಸುತ್ತಿದ್ದಾರೆ. ಆದರೆ ಸರ್ಕಾರದ ಮೇಲೆ ಒತ್ತಡ ತಂದು ಇದಕ್ಕೆ ಹಿನ್ನೀರಿನಿಂದಲೇ ಸರಬರಾಜಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ನಾವು ಯಾವುದೇ ಸರ್ಕಾರಗಳಿದ್ದರೂ ಪ್ರಯತ್ನಿಸೋಣ. ಇದಕ್ಕೆ ಎಲ್ಲರೂ ಒಂದಾಗಿ ಹೋರಾಡಬೇಕಿದೆ. ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುವುದನ್ನು ಬಿಡಬೇಕು ಸುಳ್ಳು ಹೇಳುವುದನ್ನು ಬಿಡಬೇಕು. 2021 ರಲ್ಲಿ ಹೊಸದುರ್ಗದಲ್ಲಿ ಕೆ ಎಸ್ ಈಶ್ವರಪ್ಪನವರೇ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಯೋಜನೆ ಉದ್ಘಾಟಿಸಿದ್ದರು. ಆಗ ಇವರು ಸುಮ್ಮನೆ ಇದ್ದದ್ದು ಏಕೆ? ಎಂದು ಮಾತಿನಲ್ಲೇ ಬಿಜೆಪಿಯವರಿಗೆ ತೀಕ್ಷ್ಣವಾಗಿ ಪ್ರಶ್ನಿಸಿದರು.
ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ, ಯೋಜನೆಯ ಸತ್ಯ ಸಂಪೂರ್ಣ ರೈತರು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಭದ್ರ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ಭಾಗದ ಜನರ ಹಿತ ಕಾಯಲು ಬದ್ದರಿದ್ದೇವೆ. ಇತ್ತೀಚೆಗೆ ತಾನೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡಿಸಿಎಂ ಶಿವಕುಮಾರ್ ಮತ್ತು ಜಿಲ್ಲೆಯ ಶಾಸಕರ ಸಭೆ ನಡೆದಿದ್ದು, ನಾವೆಲ್ಲರೂ ಸೇರಿ ಭದ್ರ ಅಚ್ಚುಕಟ್ಟು ಪ್ರದೇಶದ ಜನರ ಹಿತ ಕಾಯಲು ಒತ್ತಾಯಿಸಿದ್ದೇವೆ. ಅಲ್ಲದೆ ಹರಿಹರ ಮತ್ತು ದಾವಣಗೆರೆಯಲ್ಲಿ ಬೇರೆ ಬೇರೆ ಭಾಗಗಳ ಕುಡಿಯುವ ನೀರು ಮತ್ತು ಕೆರೆ ತುಂಬಿಸುವ ಯೋಜನೆಯ ಸಕಾರಕ್ಕೆ ಮನವಿ ಮಾಡಿದ್ದೇವೆ. ಜಿಲ್ಲೆಯ ರೈತರ ಹಿತಕಾಯಲು ಕಾಂಗ್ರೆಸ್ ಬದ್ದ. ವಿಷಯದಲ್ಲಿ ಬಿಜೆಪಿಯ ಮುಖಂಡರು ದಾರಿ ತಪ್ಪಿಸಲು ಸುಳ್ಳು ಹೇಳುವುದನ್ನು ಬಿಡಬೇಕು” ಎಂದು ತಿಳಿಸಿದರು.

ಸಮಾವೇಶದಲ್ಲಿ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, “ಗ್ಯಾರಂಟಿ ಸೇರಿದಂತೆ ಎಲ್ಲಾ ಯೋಜನೆಗಳನ್ನು ಸಮರ್ಥವಾಗಿ, ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಇದನ್ನು ಸಹಿಸಲಾರದೆ ಜಿಲ್ಲೆಯ ನಿರುದ್ಯೋಗಿ ಮಿತ್ರರು, ಭದ್ರಾ ಬಲದಂಡೆ ಕಾಲುವೆ ಸೀಳಿ ದಾವಣಗೆರೆ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಸುಳ್ಳು ಆರೋಪದೊಂದಿಗೆ ಬಿಜೆಪಿ ನಾಯಕರು ಹೋರಾಟ ನಡೆಸಿದ್ದಾರೆ. ಈಗ ಅವರಿಗೆ ಅದು ತಿರುಗುಬಾಣವಾಗಿದೆ. ಕೇವಲ ಮಾಧ್ಯಮದಲ್ಲಿ ಪ್ರಚಾರದಲ್ಲಿರುವ ಸಲುವಾಗಿ ಸುಳ್ಳು ಹೋರಾಟ ಪ್ರಾರಂಭಿಸಿ, ಈಗ ಅವರ ಮುಖಕ್ಕೆ ಅವರೇ ಮಸಿ ಬಳಿದುಕೊಂಡಿದ್ದಾರೆ. ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾದರೆ ಕಾಂಗ್ರೆಸ್ ಶಾಸಕರು ಸುಮ್ಮನಿರುವುದಿಲ್ಲ. ನಿಜವಾದ ಜನಪರ ಕಾಳಜಿದ್ದರೆ ಯೋಜನೆಯ ಆರಂಭದಲ್ಲಿ ಇವರದೇ ಸರ್ಕಾರ ಇದ್ದಾಗ ಬಿಜೆಪಿ ಮುಖಂಡರು ತಡೆಯಬೇಕಿತ್ತು.
ಕಾಮಗಾರಿ 75 ಭಾಗ ಮಾಡಿದ ನಂತರ ಕೇವಲ ಪ್ರಚಾರಕ್ಕಾಗಿ ಸುಳ್ಳು ಹೇಳಿಕೊಂಡು ಹೋರಾಟ ಮಾಡುತ್ತಿದ್ದಾರೆ. ಹೋರಾಟದಲ್ಲಿನ ಮಾಜಿ ಶಾಸಕರು ಯೋಜನೆ ಪ್ರಾರಂಭವಾದಾಗ ಇಲ್ಲಿ ಶಾಸಕರಾಗಿದ್ದರು. ಹಿಂದೆ ಸಚಿವರಾಗಿದ್ದರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಆಗ ಅವರ ಅರಿವಿಗೆ ಯೋಜನೆ ಬಂದಿರಲಿಲ್ಲವೇ. ಆಗ ಸುಮ್ಮನಿದ್ದ ಇವರು ಈಗ ಹೋರಾಟದ ನಾಟಕ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಜಗಳೂರು ತಾಲೂಕಿನಲ್ಲಿ ಯೂರಿಯಾ ವಿತರಣೆ, ಗೊಬ್ಬರ ಸಿಗದೇ ರೈತರ ನಿರಾಸೆ
ಸಮಾವೇಶದಲ್ಲಿ ಶಾಸಕಿ ಲತಾ ಮಲ್ಲಿಕಾರ್ಜುನ್, ರೈತ ಮುಖಂಡರಾದ ತೇಜಸ್ವಿ ಪಟೇಲ್, ವರದಪ್ಪ, ಕಡದಕಟ್ಟೆ ಚಂದ್ರಪ್ಪ, ಅಸ್ಲಂ ಬಾಷಾ, ಚೀಲೂರು ಜಯಣ್ಣ,ಕೆ ಎಂ ಎಫ್ ನಿರ್ದೇಶಕರಾದ ಬಸವರಾಜ, ಚನ್ನಗಿರಿ ಬಸಣ್ಣ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಮೇಶ್, ಸಾದು ಲಿಂಗಾಯತ ಸಮಾಜದ ಮುಖಂಡರಾದ ಗದಿಗೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು, ಸಾವಿರಾರು ರೈತರು ಭಾಗವಹಿಸಿದ್ದರು.