ಕಾಂಗ್ರೆಸ್ನಿಂದ ದೂರವಾಗಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಮುಂಬೈನಲ್ಲಿ ನಡೆಯುತ್ತಿರುವ ಎರಡನೇ ದಿನದ ‘ಇಂಡಿಯಾ’ ಸಭೆಗೆ ಅನಿರೀಕ್ಷಿತವಾಗಿ ಆಗಮಿಸಿ ಎಲ್ಲರಿಗೂ ಆಘಾತ ಮೂಡಿಸಿದರು.
ಕಪಿಲ್ ಸಿಬಲ್ ಅವರಿಗೆ ‘ಇಂಡಿಯಾ’ ಒಕ್ಕೂಟದ ಸಭೆಗೆ ಅಧಿಕೃತವಾಗಿ ಆಹ್ವಾನವಿರಲಿಲ್ಲ. ಆದರೆ ಅವರ ಉಪಸ್ಥಿತಿಯು ಅನೇಕ ಕಾಂಗ್ರೆಸ್ ನಾಯಕರಿಗೆ ಇರುಸುಮುರುಸು ಉಂಟು ಮಾಡಿತು. ಕೆಲವು ನಾಯಕರು ಫೋಟೋ ಸೆಷನ್ನಲ್ಲಿ ಅವರ ಉಪಸ್ಥಿತಿ ನೋಡಿ ಅತೃಪ್ತಿ ಹೊರಹಾಕಿದರು. ಕಾಂಗ್ರೆಸ್ ಮುಖಂಡ ಕೆ ಸಿ ವೇಣುಗೋಪಾಲ್ ಫೋಟೋ ಕ್ಲಿಕ್ಕಿಸುವ ಮೊದಲು, ಅವರ ಹಠಾತ್ ಭೇಟಿಯ ಬಗ್ಗೆ ದೂರಿದರು. ಆದರೆ, ಫಾರೂಕ್ ಅಬ್ದುಲ್ಲಾ ಮತ್ತು ಅಖಿಲೇಶ್ ಯಾದವ್ ವೇಣುಗೋಪಾಲ್ ಮನವೊಲಿಸಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು, ತಮಗೆ ಯಾರ ಬಗ್ಗೆ ಯಾವ ಅಭ್ಯಂತರವಿಲ್ಲ ಎಂದು ಹೇಳಿದ ನಂತರ ಕಪಿಲ್ ಸಿಬಲ್ ಅವರನ್ನು ಫೋಟೋ ಸೆಷನ್ಗೆ ಕರೆಯಲಾಯಿತು ಮತ್ತು ಅವರನ್ನು ಸಭೆಯಲ್ಲಿ ಸ್ವಾಗತಿಸಲಾಯಿತು.
ಈ ಸುದ್ದಿ ಓದಿದ್ದೀರಾ? ತನ್ನ ವಿರುದ್ಧ ಮತ ಚಲಾಯಿಸಿದಕ್ಕೆ ಇಬ್ಬರ ಕೊಲೆ; ಆರ್ಜೆಡಿ ಮಾಜಿ ಸಂಸದನಿಗೆ ಸುಪ್ರೀಂನಿಂದ ಜೀವಾವಧಿ ಶಿಕ್ಷೆ
ಕಾಂಗ್ರೆಸ್ನ ಪ್ರಮುಖ ನಾಯರಾಗಿದ್ದ ಕಪಿಲ್ ಸಿಬಲ್ 2022 ರ ಮೇನಲ್ಲಿ ಕಾಂಗ್ರೆಸ್ ತೊರೆದರು. ಎಸ್ಪಿ ಬೆಂಬಲದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ರಾಜ್ಯಸಭಾ ಸದಸ್ಯರಾದರು. ಅಂದಿನ ಪ್ರಧಾನಿ ಮನ್ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕಾನೂನು ಹಾಗೂ ಮಾನವ ಸಂಪನ್ಮೂಲದಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ನ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡು ಪಕ್ಷದಿಂದ ದೂರವಾಗಿದ್ದಾರೆ.
‘ಇಂಡಿಯಾ’ ಸಭೆಯಲ್ಲಿ ಇಂದು ಮೈತ್ರಿಕೂಟದ ಚಿಹ್ನೆ ಬಿಡುಗಡೆಯಾಗಲಿದೆ. ಇದಲ್ಲದೇ ಗುರುವಾರ ನಡೆಯಲಿರುವ ಸಭೆಯ ಕಾರ್ಯಸೂಚಿ ಬಗ್ಗೆಯೂ ಚರ್ಚೆ ನಡೆಸಲಾಯಿತು. ಸಂಜೆ ಇಂಡಿಯಾ ಮೈತ್ರಿಕೂಟದ ನಾಯಕರು ಜಂಟಿ ಹೇಳಿಕೆಯನ್ನು ನೀಡಲಿದ್ದಾರೆ.
ಇಂದಿನ ಸಭೆಯಲ್ಲಿ ಕಾಂಗ್ರೆಸಿನಿಂದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬ್ಯಾನರ್ಜಿ, ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಪಾಲಿನ್, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥ ಮಹಬೂಬಾ ಮುಫ್ತಿ, ಸಿಪಿಎಂ ಸೀತಾರಾಂ ಯೆಚೂರಿ, ಸಿಪಿಐನ ಡಿ ರಾಜಾ, ಸಿಪಿಐ (ಎಂಎಲ್ನ ದೀಪಂಕರ್ ಭಟ್ಟಾಚಾರ್ಯ), ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಮಾಜಿ ಮುಖ್ಯಮಂತ್ರಿ ಉತ್ತರ ಪ್ರದೇಶ ಮತ್ತು ಎನ್ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಆರ್ಎಲ್ಡಿಯ ಜಯ ಚೌಧರಿ ಉಪಸ್ಥಿತರಿದ್ದರು.