ಮತದಾರರಿಗೆ ಆಮಿಷವೊಡ್ಡಿ ಚುನಾವಣಾ ಅಕ್ರಮ ಎಸಗಿದ ಪ್ರಕರಣದಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್ ಅವರ ಶಾಸಕ ಸ್ಥಾನವನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ಶಾಸಕ ಗೌರಿ ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು, ಈ ಬಗ್ಗೆ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್, ತನ್ನ ತೀರ್ಪನ್ನು 30 ದಿನಗಳ ಮಟ್ಟಿಗೆ ತಡೆ ಹಿಡಿದಿದೆ.
2018ರ ವಿಧಾನಸಭಾ ಚುನಾವಣೆ ವೇಳೆ, ಗೌರಿ ಶಂಕರ್ ಅವರು ಮತದಾರರಿಗೆ ನಕಲಿ ವಿಮೆ ಬಾಂಡ್ ಆಮಿಷವೊಡ್ಡಿದ್ದರು. ಆ ಮೂಲಕ ಮತದಾರರನ್ನು ತಮ್ಮತ್ತ ಸೆಳೆದಿದ್ದರು ಎಂದು ಆರೋಪಿಸಿ, 2018ರಲ್ಲಿಯೇ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಬಿ ಸುರೇಶ್ ಗೌಡ ಅರ್ಜಿ ಸಲ್ಲಿಸಿದ್ದರು.
ಸುಧೀರ್ಘ ಐದು ವರ್ಷಗಳ ಕಾಲ ಹೈಕೋರ್ಟ್ನಲ್ಲಿ ಅವರ ಅರ್ಜಿಯ ವಿಚಾರಣೆ ನಡೆದಿದೆ. ಇದೀಗ, ಗೌರಿ ಶಂಕರ್ ಅವರ ಶಾಸಕತ್ವವನ್ನು ಅಸಿಂಧುಗೊಳಿಸಿ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿದೆ.
ಚುನಾವಣಾ ಅಕ್ರಮ ಆರೋಪದಲ್ಲಿ ಶಾಸಕ ಸ್ಥಾನ ಕಳೆದು ಕೊಂಡವರು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ನಿಯಮವಿದೆ. ಹೈಕೋರ್ಟ್ ತೀರ್ಪು ಜಾರಿಯಾದರೆ, ಗೌರಿ ಶಂಕರ್ ಕೂಡ ಹಾಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಮತ್ತು ಮುಂದಿನ ಆರು ವರ್ಷಗಳ ಕಾಲ ನಡೆಯುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿದ್ದೀರಾ?: ರಾಜಕೀಯ ಸತ್ ಪರಂಪರೆಯ ರಾಜ್ಯದಲ್ಲಿ ನಡೆಯಬೇಕಿದೆ ಮುಕ್ತ, ನ್ಯಾಯಸಮ್ಮತ ಚುನಾವಣೆ
ಸದ್ಯ, ಗೌರಿ ಶಂಕರ್ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಹೀಗಾಗಿ, ಹೈಕೋರ್ಟ್ ತನ್ನ ಆದೇಶವನ್ನು 30 ದಿನಗಳ ಮಟ್ಟಿಗೆ ತಡೆಹಿಡಿದಿದೆ. ಒಂದು ವೇಳೆ, ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದರೆ, ಗೌರಿ ಶಂಕರ್ ಅವರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಅಲ್ಲದೆ, ಚುನಾವಣೆಯಿಂದಲೂ ದೂರ ಉಳಿಯಬೇಕಾಗುತ್ತದೆ.
ಪ್ರಕರಣ ಹಿನ್ನೆಲೆ
2018ರ ಚುನಾವಣೆ ಸಂದರ್ಭ ಗೌರಿಶಂಕರ್ ಅವರು 32,000 ವಯಸ್ಕರು ಹಾಗೂ 16,000 ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದರು. ಅವರು ವಿಮಾ ಪಾಲಿಸಿಯ ಆಮಿಷ ಒಡ್ಡಿ ಅಕ್ರಮವಾಗಿ ಚುನಾವಣೆ ಗೆದ್ದಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಆರೋಪಿಸಿದ್ದರು. ಅಲ್ಲದೆ, ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಬೇಕೆಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.