ದಲಿತೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗುತ್ತಾರೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿಯ ಹಲವಾರು ಸದಸ್ಯರು ಅಧ್ಯಕ್ಷರ ಚುನಾವಣೆಗೆ ಗೈರಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳಿಯಲ್ಲಿ ನಡೆದಿದೆ.
ಅಧ್ಯಕ್ಷರ ಆಯ್ಕೆಗೆ ಕೋರಂ ಇಲ್ಲದೆ, ಚುನಾವಣೆ ಮುಂದೂಡಲ್ಪಟ್ಟಿದ್ದು, ಅವಿರೋಧವಾಗಿ ಆಯ್ಕೆಯಾಗಬೇಕಿದ್ದ ಸದಸ್ಯೆ ಕಣ್ಣೀರು ಹಾಕಿದ್ದಾರೆ.
ಹೊಂಗಡಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಗ್ರಾಮ ಪಂಚಾಯತಿಯಲ್ಲಿ ಎಸ್ಸಿ ಸಮುದಾಯಕ್ಕೆ ಸೇರಿದ ವನಜಾಕ್ಷಿ ಒಬ್ಬರೇ ಸದಸ್ಯರಿದ್ದರು. ಕಾರಣ, ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅವರೇ ಅವಿರೋಧವಾಗಿ ಆಯ್ಕೆಯಾಗಬೇಕಿತ್ತು. ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಬೇಕಿತ್ತು.
ಆದರೆ, ಗ್ರಾಮ ಪಂಚಾಯತಿಯಲ್ಲಿ 6 ಮಂದಿ ಸದಸ್ಯರಿದ್ದು, ಕೋರಂಗೆ ಕನಿಷ್ಠ ಮೂರು ಮಂದಿ ಸದಸ್ಯರು ಭಾಗವಹಿಸಬೇಕಿತ್ತು. ಆದರೆ, ಇಬ್ಬರು ಮಾತ್ರವೇ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳು ಸಮಯವನ್ನು ವಿಸ್ತರಿಸಿದರೂ, ಉಳಿದ ಯಾರೊಬ್ಬರೂ ಗ್ರಾಮ ಪಂಚಾಯತಿಯತ್ತ ಸುಳಿದಿಲ್ಲ. ಪರಿಣಾಮ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ದಲಿತೆ ಎಂಬ ಕಾರಣಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದ ಸದಸ್ಯರ ಜಾತಿಗ್ರಸ್ತ ಧೋರಣೆಯಿಂದ ನೊಂದ ವನಜಾಕ್ಷಿ ಅವರು ಕಣ್ಣೀರು ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂ. ಗ್ರಾಮಾಂತರ | ಕೊಲೆಯಾದ ಸ್ಥಿತಿಯಲ್ಲಿ ದಲಿತ ಬಾಲಕಿ ಮೃತದೇಹ ಪತ್ತೆ; ಸವರ್ಣೀಯನ ಮೇಲೆ ಶಂಕೆ
“ನಾನು ದಲಿತ ಮಹಿಳೆಯಾಗಿರುವ ಕಾರಣ ನನ್ನ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ಉಳಿದ ಸದಸ್ಯರು ವಿರೋಧಿಸುತ್ತಿದ್ದಾರೆ. ಹೀಗಾಗಿ, ಕೃತಕ ಕೋರಂ ಕೊರತೆ ಸೃಷ್ಟಿಸಿದ್ದಾರೆ. ನಾನು ಜೆಡಿಎಸ್ ಬೆಂಬಲಿತಳು. ಆದರೆ, ನನಗೆ ಸ್ಥಳೀಯ ಜೆಡಿಎಸ್ ನಾಯಕರೂ ಬೆಂಬಲ ನೀಡಿಲ್ಲ. ನಾನಲ್ಲದೆ, ಉಳಿದ ಐವರು ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದಾರೆ. ಅವರಲ್ಲಿ ಒಬ್ಬರು ಮಹಿಳೆಯಾಗಿದ್ದು, ಅವರು ಮಾತ್ರ ನನ್ನೊಂದಿಗೆ ಇರುತ್ತಾರೆ. ಉಳಿದವರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ” ಎಂದು ನೊಂದ ವನಜಾಕ್ಷಿ ಹೇಳಿರುವುದಾಗಿ ‘ಕನ್ನಡ ಪ್ಲಾನೆಟ್’ ವರದಿ ಮಾಡಿದೆ.
“ಜೆಡಿಎಸ್ ನಿರ್ಲಕ್ಷ್ಯ, ಬಿಜೆಪಿ ಅಸಹಾಕಾರದಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ. ಈಗ ನನ್ನನ್ನು ಬಿಜೆಪಿಗರು ತಮ್ಮ ಪಕ್ಷಕ್ಕೆ ಕರೆಯುತ್ತಿದ್ದಾರೆ. ಆದರೆ, ದಲಿತಳಾದ ನನಗೆ ಮುಂದಿನ ದಿನಗಳಲ್ಲಿ ಬಿಜೆಪಿಗರು ಸಹಕಾರ ನೀಡುತ್ತಾರೆ ಎಂಬ ಭರವಸೆಯೇ ಇಲ್ಲ. ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಅಂದೂ ಕೂಡ ಉಳಿದ ಸದಸ್ಯರು ಬರುತ್ತಾರೆಂಬ ನಿರೀಕ್ಷೆ ಇಲ್ಲ” ಎಂದು ಅವರು ಹೇಳಿದ್ದಾರೆ.