ವಿದ್ಯುತ್ ದೀಪಾಲಂಕಾರಕ್ಕೆ ಕುಮಾರಸ್ವಾಮಿಯವರ ಮನೆಗೆ ಅಕ್ರಮ ವಿದ್ಯುತ್ ಪಡೆದುಕೊಂಡ ಪ್ರಕರಣವು ರಾಜಕೀಯ ಕೆಸರರೆಚಾಟಕ್ಕೆ ವೇದಿಕೆಯೊದಗಿಸಿದೆ.
ಮಂಗಳವಾರ ತಡರಾತ್ರಿ ಜೆಡಿಎಸ್ ರಾಜ್ಯ ಕಚೇರಿಗೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಪೋಸ್ಟರ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ ಬಳಿಕ ರೊಚ್ಚಿಗೆದ್ದಿರುವ ಜಾತ್ಯತೀತ ಜನತಾದಳದ ಐಟಿ ಸೆಲ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಜೆಡಿಎಸ್, ಕುಮಾರಸ್ವಾಮಿಯವರು ಕಳೆದೊಂದು ವಾರದಿಂದ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್ʼಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಹಾಗಾಗಿ, ಗ್ಯಾರಂಟಿ ವೈಫಲ್ಯವನ್ನು ಮುಚ್ಚಲು ಕಾಂಗ್ರೆಸ್ ಕರೆಂಟ್ ವೈರ್ ಹಿಡಿದು ‘ಶಕುನಿ ಯುದ್ಧ’ ಆರಂಭಿಸಿದೆ ಎಂದು ಆಕ್ರೋಶ ಹೊರಹಾಕಿದೆ.
ಕೊಳಕು ಮಂಡಲ @INCKarnataka ಗೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕಳೆದೊಂದು ವಾರದಿಂದ @hd_kumaraswamy ಅವರು ನಡೆಸಿದ ಸರ್ಜಿಕಲ್ ಸ್ಟ್ರೈಕ್ʼಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಅವರ ಭಾನುವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಅದರ ನವರಂಧ್ರಗಳು ಆಸ್ಫೋಟಗೊಂಡಿವೆ.1/8#ಕೊಳಕುಮಂಡಲ_ಕಾಂಗ್ರೆಸ್
— Janata Dal Secular (@JanataDal_S) November 15, 2023
ಕೊಳಕು ಮಂಡಲ ಕಾಂಗ್ರೆಸ್ಗೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕಳೆದೊಂದು ವಾರದಿಂದ ಕುಮಾರಸ್ವಾಮಿಯವರು ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಅವರ ಭಾನುವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಅದರ ನವರಂಧ್ರಗಳು ಆಸ್ಫೋಟಗೊಂಡಿವೆ. ಈಗ ಮಾರಿ ಉಳಿಸಿಕೊಳ್ಳಲು ಕರೆಂಟ್ ವೈರ್ ಮೊರೆ ಹೋಗಿದೆ ಎಂದು ಜೆಡಿಎಸ್ ತಿಳಿಸಿದೆ.
ಇದನ್ನು ಓದಿದ್ದೀರಾ? ಜೆಡಿಎಸ್ ಕಚೇರಿ ಎದುರು ರಾತ್ರೋರಾತ್ರಿ ಪ್ರತ್ಯಕ್ಷವಾದ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಪೋಸ್ಟರ್!
ಕಾಂಗ್ರೆಸ್ನ ಗ್ಯಾರಂಟಿಗಳ ವೈಫಲ್ಯಕ್ಕೆ ದಿನ ಬೆಳಗಾದರೆ ಜನರಿಂದ ಕ್ಯಾಕರಿಸಿ ಉಗಿಸಿಕೊಳ್ಳುತ್ತಿದೆ. ದಿಕ್ಕಿಲ್ಲದೆ ಅಪಾಯಕಾರಿ ಕರೆಂಟ್ ವೈರ್ ಹಿಡಿದುಬಿಟ್ಟಿದೆ. ದರಬೇಸಿ ಕಾಂಗ್ರೆಸ್ಸಿಗೆ ದಾರಿ ಕಾಣುತ್ತಿಲ್ಲ. ಉತ್ತರಪ್ರದೇಶದಲ್ಲಿ ಮೂರಂಕಿಗೆ ಕುಸಿದಿತ್ತು. ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಏದುಸಿರು ಬಿಡುತ್ತಿದೆ. ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳರಂತೆ ಪೋಸ್ಟರ್ ಅಂಟಿಸುವ ‘ಶಿಖಂಡಿ’ಸ್ಥಿತಿಗೆ ಬಂದಿದೆ. ಪಾಪ, ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕೂಡ ಏಕವಚನದಲ್ಲೇ ವಾಗ್ದಾಳಿ ನಡೆಸಿದೆ.
ಕುಮಾರಸ್ವಾಮಿ ಅವರು ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್ ವಿಕೃತಿ ಮಿತಿಮೀರಿದೆ. ಬೆಸ್ಕಾಂ ವಿದ್ಯುತ್ ವೇಗದಲ್ಲಿ ಎಫ್ಐಆರ್ ದಾಖಲಿಸಿದೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನೂ ಮಾಡಿಲ್ಲ. ಈಡಿ, ಸಿಬಿಐ, ಐಟಿ ಅವರ ಬೆನ್ನು ಹತ್ತಿಲ್ಲ. ಪುಡಿರೌಡಿ ‘ಕಿಡಿಗೇಡಿಕುಮಾರ’ನ ಕೈಚಳಕಕ್ಕೆ ಹೆದರುವ ಪ್ರಶ್ನೆಯೂ ಇಲ್ಲ. ರಾಜ್ಯವನ್ನೇ ಗುಡಿಸಿ ಗಂಡಾಂತರಿಸಿ ಲಜ್ಜೆಗೇಡಿ ಕಾಂಗ್ರೆಸ್ ತಿಪ್ಪೆ ಸಾರಿಸಿದೆ ಎಂದು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.
ಹಳ್ಳ ಹಿಡಿದ ಗ್ಯಾರಂಟಿಗಳು ಕಾಂಗ್ರೆಸ್ಸಿನಲ್ಲಿ ಹಾಲಾಹಲವನ್ನೇ ಸೃಷ್ಟಿಸಿವೆ ಎನ್ನುವುದಕ್ಕೆ ಕುಮಾರಸ್ವಾಮಿ ಅವರ ಮನೆಯ ಕರೆಂಟ್ ವೈರ್ ಕೊಟ್ಟ ಶಾಕೇ ಸಾಕ್ಷಿ. ರಾಜಕೀಯವಾಗಿ ಅವರನ್ನು ಎದುರಿಸಲಾಗದ ನರಸತ್ತ ಪಕ್ಷ, ಕರೆಂಟ್ ವೈರ್ ಹಿಡಿದು ‘ಶಕುನಿ ಯುದ್ಧ’ ಆರಂಭಿಸಿದೆ. ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ. ಕಂಬದ ಕರೆಂಟಿನ ಬಗ್ಗೆ ಕಾಂಗ್ರೆಸ್ ಈ ಪರಿ ಕೈಕೈ ಹಿಚುಕಿಕೊಳ್ಳುತ್ತಿರುವುದನ್ನು ನೋಡಿದರೆ ವೈರಿನಲ್ಲಿಯೂ ನರಿ ರಾಜಕೀಯ ದಿಟವೆನಿಸುತ್ತದೆ. ಕುಮಾರಸ್ವಾಮಿ ಅವರ ಒಂದೇ ಒಂದು ಕ್ಷಿಪಣಿ ಸಾಕು, ಕಾಂಗ್ರೆಸ್ ’ರಕ್ಕಸ ರಿಪಬ್ಲಿಕ್’ ಉಡೀಸ್ ಆಗಲಿಕ್ಕೆ. ಶಿಖಂಡಿ ಅಂತ್ಯಕಾಲ ಆರಂಭವಾಗಿದೆ ಎಂದು ಜೆಡಿಎಸ್ ಐಟಿ ಸೆಲ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.