“ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನಲ್ಲೂ ಮುಖ್ಯ. ಶಾಲಾ ಶಿಕ್ಷಣದೊಂದಿಗೆ ನಮ್ಮ ಆಡಳಿತ ವ್ಯವಸ್ಥೆ, ರಾಜಕೀಯ ಪದ್ದತಿಗಳನ್ನು ಅರ್ಥೈಸಿಕೊಳ್ಳಬೇಕು” ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಅವರು ಇಂದು ಮಧ್ಯಾಹ್ನ ವಿಧಾನಮಂಡಲ ಅಧಿವೇಶನ ವೀಕ್ಷಣೆಗಾಗಿ ತಮ್ಮ ಮತಕ್ಷೇತ್ರ ಕಲಘಟಗಿಯ ಸರಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಎರಡು ಸದನಗಳ ಕಾರ್ಯಕಲಾಪ ಪರಿಚಯಿಸಿ, ವಿಧಾನಮಂಡಲ ಅಧಿವೇಶನ ಮತ್ತು ಸುವರ್ಣಸೌಧ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ತಮ್ಮ ಕಚೇರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡಿದರು.
ವಿದ್ಯಾರ್ಥಿ ಜೀವನ ನಮ್ಮೆಲ್ಲರ ಬದುಕಿನ ಅತ್ಯಂತ ಸುಂದರವಾದ ಅಧ್ಯಾಯ ಎಂಬ ಮಾತು ಎಷ್ಟೊಂದು ಸತ್ಯ!
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ವೀಕ್ಷಿಸಲು ಆಗಮಿಸಿದ್ದ ನನ್ನ ಮತಕ್ಷೇತ್ರ ಕಲಘಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಕಳೆದ ಕೆಲ ಹೊತ್ತು ನನ್ನ ಶಾಲಾ ಕಾಲೇಜು ದಿನಗಳನ್ನು ನೆನಪಿಸಿದವು.#Bliss… pic.twitter.com/qzBNlU8KJg
— Santosh Lad Official (@SantoshSLadINC) December 8, 2023
“ವಿಧಾನಮಂಡಲ ಅಧಿವೇಶನವು ವಿದ್ಯಾರ್ಥಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಜ್ಞಾನ ನೀಡುತ್ತದೆ. ಮನುಷ್ಯ ರಾಜಕೀಯ ಜೀವಿ. ಬಲಿಷ್ಠ ಭಾರತ ನಿರ್ಮಾಣ ಆಗಬೇಕಾದರೆ ಇಂದಿನ ಯುವ ಸಮುದಾಯ ಪ್ರಾಮಾಣಿಕವಾದ ಸಮಾಜ ಸೇವೆಯ ದೀಕ್ಷೆ ತೊಡಬೇಕು” ಎಂದು ತಿಳಿಸಿದರು.
“ರಾಜಕೀಯ ಪಕ್ಷ, ಆಡಳಿತ, ಸರ್ಕಾರ, ಮಂತ್ರಿಮಂಡಳ, ಅಧಿಕಾರಶಾಹಿ ಬಗ್ಗೆ ಅರಿವು ಹೊಂದಬೇಕು. ಪ್ರತಿಯೊಬ್ಬರೂ ಮತದಾನ, ಚುನಾವಣೆ ಮುಂತಾದ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಜನಪ್ರತಿನಿಧಿ, ಉತ್ತಮ ಸರ್ಕಾರ ಹೊಂದಲು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಸಚಿವ ಸಂತೋಷ್ ಲಾಡ್ ಅವರು ವಿದ್ಯಾರ್ಥಿಗಳಿಗೆ ಹೇಳಿದರು.
“ನನ್ನ ಕ್ಷೇತ್ರದ ನೂರಾರು ಜನ ಅಧಿವೇಶನ ವೀಕ್ಷಣೆಗಾಗಿ ಬೆಳಗಾವಿ ಸುವರ್ಣಸೌಧಕ್ಕೆ ಆಗಮಿಸುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸಲು ನಮ್ಮ ಸಿಬ್ಬಂದಿಗಳ ಸಹಾಯ, ಮಕ್ಕಳಿಗೆ ಉಪಾಹಾರ, ವಿಧಾನ ಮಂಡಲ ಗ್ರಂಥಾಲಯ ವೀಕ್ಷಣೆಗೆ ಅವಕಾಶ ಮಾಡಿದ್ದೇನೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸೇವೆಯ ಆಸಕ್ತಿ, ಅಭಿರುಚಿ ಬೆಳೆಸುವ ನನ್ನ ಸಣ್ಣ ಪ್ರಯತ್ನವಿದು” ಎಂದು ಸಚಿವರು ಹೇಳಿದರು.
ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಸುವರ್ಣಸೌಧಕ್ಕೆ ಆಗಮಿಸಿದ ತಕ್ಷಣ, ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ವಿಶೇಷ ಕೊಠಡಿಯಲ್ಲಿ ಸಂವಿಧಾನದ ಮೌಲ್ಯಗಳು, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಪಡೆದುಕೊಂಡರು. ಬಳಿಕ ಈ ಕುರಿತು ಪ್ರಸ್ತುತಪಡಿಸಿದ ಸಾಕ್ಷ್ಯಚಿತ್ರ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಪಿ.ಕುಮಾರ, ಉಪ ಕಾರ್ಮಿಕ ಆಯುಕ್ತ ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತೆ ಎಂ.ಬಿ.ಅನ್ಸಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ, ಹಿರಿಯ ಕಾರ್ಮಿಕ ನಿರೀಕ್ಷಕ ಮಂಜುನಾಥ ಅಸ್ತಿಕಟ್ಟಿ, ಕಲಘಟಗಿ ಸರಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಾಲತಿ ಹಿರೇಮಠ, ಗ್ರಂಥಪಾಲಕಿ ಭಾರತಿ ದಂಡಿನ ಹಾಗೂ ಇತರರು ಇದ್ದರು.