ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ಹೊಸ ಆರೋಪ ಪಟ್ಟಿ ಸಲ್ಲಿಸಿದೆ. ಆರೋಪ ಪಟ್ಟಿಯಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಆರ್ಜೆಡಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನು ಹೆಸರಿಸಿದ್ದು, ಇದನ್ನು ನ್ಯಾಯಾಲಯವು ಜುಲೈ 12 ರಂದು ಪರಿಗಣಿಸಲಿದೆ.
ಎಫ್ಐಆರ್ನಲ್ಲಿ ತೇಜಸ್ವಿ ಯಾದವ್ ಹೆಸರಿಲ್ಲ. ಆದರೆ ತನಿಖೆಯ ಸಂದರ್ಭದಲ್ಲಿ, ಅವರಿಗೆ ಲಾಭದಾಯಕ ಅಪರಾಧದ ಆದಾಯದ ಬಗ್ಗೆ ಪುರಾವೆಗಳು ದೊರಕಿವೆ ಎಂದು ಸಿಬಿಐ ಮೂಲಗಳು ಸುದ್ದಿ ಮಾಧ್ಯಮಗಳಿಗೆ ತಿಳಿಸಿವೆ. ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಮಧ್ಯವರ್ತಿ ಮತ್ತು ಫಲಾನುಭವಿಗಳನ್ನು ಹೆಸರಿಸಲಾಗಿದೆ ಹಾಗೂ ಉದ್ಯೋಗಾಕಾಂಕ್ಷಿಗಳು ಹಗರಣದ ಬಗ್ಗೆ ಸಾಕ್ಷ್ಯ ನೀಡಿರುವ ಹೇಳಿಕೆಗಳು ದಾಖಲಾಗಿವೆ.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಎನ್ಸಿಪಿಯಿಂದ ಮೂವರ ಉಚ್ಚಾಟನೆ; 9 ಶಾಸಕರು, ಇಬ್ಬರು ಸಂಸದರ ಅನರ್ಹತೆಗೆ ನಿರ್ಣಯ
ತನಿಖಾ ಸಂಸ್ಥೆಯ ಪ್ರಕಾರ, 2004 ರಿಂದ 2009ರವರೆಗೆ ಲಾಲು ಅವರು ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಪಾಟ್ನಾದ 12 ಅಭ್ಯರ್ಥಿಗಳನ್ನು ರೈಲ್ವೆಯಲ್ಲಿ ಗ್ರೂಪ್ ಡಿ ಹುದ್ದೆಗಳಿಗೆ ನೇಮಿಸಲಾಯಿತು. ಈ ನೇಮಕವು ಯಾವುದೇ ಜಾಹೀರಾತು ಅಥವಾ ಸಾರ್ವಜನಿಕ ಸೂಚನೆಯಿಲ್ಲದೆ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಮಾಡಲಾಗಿತ್ತು.
ಈ ನೇಮಕಾತಿಗಳ ಬದಲಾಗಿ, ಆರೋಪಿಗಳು ನಗರ ಮತ್ತು ಇತರೆಡೆಗಳಲ್ಲಿ ಏಳು ನಿವೇಶನಗಳನ್ನು ಹೆಚ್ಚಿನ ರಿಯಾಯಿತಿ ಬೆಲೆಯಲ್ಲಿ ಪಡೆದರು. ಈ ಜಮೀನು ಉದ್ಯೋಗ ಪಡೆದ 12 ಮಂದಿಗೆ ಸೇರಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಗ್ರೂಪ್ ಡಿ ಹುದ್ದೆ ಅಭ್ಯರ್ಥಿಗಳ 4 ಜಮೀನುಗಳನ್ನು ಕೇವಲ 7.5 ಲಕ್ಷ ರೂ.ಗೆ ಲಾಲು ಕುಟುಂಬ ಖರೀದಿಸಿತ್ತು. ಅದನ್ನು ಆರ್ಜೆಡಿ ನಾಯಕನೊಬ್ಬನಿಗೆ 3.5 ಕೋಟಿ ರೂ.ಗೆ ಲಾಲು ಪತ್ನಿ ರಾಬ್ಡಿ ದೇವಿ ಮಾರಿದ್ದರು. ಬಂದ ಹಣವನ್ನು ಹೆಚ್ಚಾಗಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರ ಖಾತೆಗೆ ವರ್ಗಾಯಿಸಲಾಗಿತ್ತು’ ಎಂದು ಇಡಿ ಆರೋಪಿಸಿದೆ.