‘ಕರ್ನಾಟಕ ಅಥವಾ ನನ್ನ ಇಲಾಖೆಗಳ ಬಗ್ಗೆ ಚಿಂತಿಸಬೇಡಿ, ಅದು ಸುರಕ್ಷಿತರ ಕೈಯಲ್ಲಿದೆ. ನೀವು ಮೊದಲು ವಿಮಾನದಲ್ಲಿ ಸರಿಯಾಗಿ ಕೂರಲು ಕಲಿಯಿರಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯರಿಗೆ ಟಾಂಗ್ ನೀಡಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ ಮಾಡಿ ಟ್ವೀಟ್ ಮಾಡಿದ್ದ ಆರೋಪದ ಮೇರೆಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ದೂರು ನೀಡಿದ್ದರು. ಆ ಬಳಿಕ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದರು. ಹೀಗಾಗಿ, ಮಾಳವೀಯ ಪರವಾಗಿ, ವಕೀಲರೂ ಆಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಎಫ್ಐಆರ್ಗೆ ಮಧ್ಯಂತರ ತಡೆಯನ್ನು ನೀಡಿತ್ತು. ಆ ಬಳಿಕ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ‘ಕನಿಷ್ಠ ಈಗಲಾದರೂ ತಮ್ಮ ಸೇಡಿನ ರಾಜಕಾರಣವನ್ನು ನಿಲ್ಲಿಸಿ. ನಿಮ್ಮ ಸಚಿವ ಸ್ಥಾನದ ಮೇಲೆ ಗಮನ ಹರಿಸಿ’ ಎಂದು ಪ್ರಿಯಾಂಕ್ ಖರ್ಗೆಯವರಿಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಉತ್ತರ ನೀಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ ಕರ್ನಾಟಕ ಅಥವಾ ನನ್ನ ಇಲಾಖೆಗಳ ಬಗ್ಗೆ ಚಿಂತಿಸಬೇಡಿ. ಅದು ಸುರಕ್ಷಿತರ ಕೈಯಲ್ಲಿದೆ. ನೀವು ತಪ್ಪು ಮಾಹಿತಿ ಹರಡಿದರೆ ನಿಮ್ಮ ಸಹೋದ್ಯೋಗಿಗಳು ಮತ್ತು ನೀವು ದೇಶದ ಕಾನೂನನ್ನು ಎದುರಿಸಬೇಕಾಗುತ್ತದೆ’ ಎಂಬುದು ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
‘ರಾಜಕೀಯ ಸೇಡಿನ’ ವಿರುದ್ಧ ನೆರವು ಪಡೆಯಲು ನೀವು ಪ್ರಾರಂಭಿಸಿದ ಸಹಾಯವಾಣಿಗೆ ಎಷ್ಟು ಜನರು ಕರೆ ಮಾಡಿದ್ದಾರೆ ಎಂಬುದನ್ನು ದಯವಿಟ್ಟು ರಾಜ್ಯಕ್ಕೆ ತಿಳಿಸುವಿರಾ? ಎಂದು ಸಂಸದರನ್ನು ಕೇಳಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ನೀವು ರಾಜ್ಯಕ್ಕಾಗಿ ಮಾಡಬಹುದಾದ ಪ್ರಮುಖ ಕೆಲಸಗಳು ಯಾವುದೆಂದರೆ, ನಮಗೆ ಕೇಂದ್ರ ಸರ್ಕಾರ ನೀಡಬೇಕಾದ ಹಣವನ್ನು ಬಿಡುಗಡೆ ಮಾಡಲು ಕೇಳೋದು, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆರಿಸುವುದು ಮತ್ತು ನೀವು ಮೊದಲು ವಿಮಾನದಲ್ಲಿ ಕುಳಿತುಕೊಳ್ಳಲು ಕಲಿಯೋದು’ ಎಂದು ಖಡಕ್ ಉತ್ತರ ನೀಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ವಿಮಾನದಲ್ಲಿ ಪ್ರಯಾಣಿಸುವಾಗ ತುರ್ತು ನಿರ್ಗಮನದ ಬಾಗಿಲು ತೆಗೆಯಲು ಯತ್ನಿಸಿದ್ದ ಸುದ್ದಿ ಭಾರೀ ಇತ್ತೀಚೆಗೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.