ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯರಾದ ಎಲ್ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರು ಮುಂದಿನ ತಿಂಗಳು ನಡೆಯಲಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರದಂತೆ ಟ್ರಸ್ಟ್ ಸೂಚಿಸಿದೆ.
“2024ರ ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಮಮಂದಿರ ಹೋರಾಟದ ಮುಂದಾಳು ಎಲ್ಕೆ ಅಡ್ವಾಣಿ ಮತ್ತು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಅವರನ್ನು ಬರದಂತೆ ಕೇಳಿಕೊಳ್ಳಲಾಗಿದೆ” ಎಂದು ಅಯೋಧ್ಯೆ ರಾಮಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
#WATCH | Ayodhya: Champat Rai, the General Secretary of Shri Ram Janmabhoomi Teerth Kshetra says, “Murli Manohar Joshi and Lal Krishna Advani will not be able to attend the ceremony due to health and age-related reasons. Both (Advani and Joshi) are elders in the family and… pic.twitter.com/XZpWbXVJVS
— ANI (@ANI) December 19, 2023
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, “ಎಲ್ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರು ವೃದ್ಧಾಪ್ಯದಲ್ಲಿದ್ದಾರೆ. ಹೀಗಾಗಿ ಆರೋಗ್ಯದ ಹಿತದೃಷ್ಟಿಯಿಂದ ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಬರದಂತೆ ಮನವಿ ಮಾಡಲಾಗಿದೆ. ಎಲ್ಕೆ ಅಡ್ವಾಣಿ ಅವರಿಗೆ 96 ವರ್ಷ ವಯಸ್ಸಾಗಿದ್ದು, ಜನವರಿಯಲ್ಲಿ ಮುರಳಿ ಮನೋಹರ್ ಜೋಷಿ ಅವರಿಗೆ 90 ವರ್ಷ ತುಂಬಲಿದೆ” ಎಂದು ತಿಳಿಸಿದ್ದಾರೆ.
“ಎಲ್ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಕುಟುಂಬದ ಹಿರಿಯರ ಜೊತೆ ಮಾತನಾಡಿದ್ದು, ಅವರ ವಯಸ್ಸನ್ನು ಪರಿಗಣಿಸಿ ರಾಮಮಂದಿರ ಲೋಕಾರ್ಪಣೆಗೆ ಬರದಂತೆ ವಿನಂತಿ ಮಾಡಲಾಗಿದೆ. ನಮ್ಮ ಮನವಿಯನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ” ಎಂದು ಚಂಪತ್ ರಾಯ್ ಬಹಿರಂಗವಾಗಿಯೇ ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮಕ್ಕೆ ನಟರಾದ ಅಮಿತಾಬ್ ಬಚ್ಚನ್, ರಜನಿಕಾಂತ್ ಮತ್ತು ಮಾಧುರಿ ದೀಕ್ಷಿತ್, ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸೇರಿದಂತೆ ಇತರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದಿರುವ ರಾಮಮಂದಿರ ಟ್ರಸ್ಟ್, ಸಮಾರಂಭಕ್ಕೆ ಸುಮಾರು 4,000 ಧಾರ್ಮಿಕ ಮುಖಂಡರು ಮತ್ತು 2,200 ಇತರ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
90 ವರ್ಷದ ಎಚ್ಡಿ ದೇವೇಗೌಡರಿಗೆ ಆಹ್ವಾನ!
ಇನ್ನು ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಗೆ ಹಿರಿಯ ರಾಜಕಾರಣಿ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ.
“ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಲು ಟ್ರಸ್ಟ್ನ ಮೂವರು ಸದಸ್ಯರ ನಿಯೋಗವನ್ನು ಕಳುಹಿಸಲಾಗುತ್ತದೆ” ಎಂದು ಎಂದು ರಾಮಮಂದಿರ ಟ್ರಸ್ಟ್ ತಿಳಿಸಿದೆ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರಿಗೂ 90 ವರ್ಷ ವಯಸ್ಸಾಗಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು ಡಿಸೆಂಬರ್ 6, 1992ರಂದು ಕೆಡವಿ ಹಾಕಲಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ ತಿಂಗಳಲ್ಲಿ ಲಕ್ನೋದ ವಿಶೇಷ ಕೇಂದ್ರೀಯ ತನಿಖಾ ನ್ಯಾಯಾಲಯವು ಸುಮಾರು ಮೂರು ದಶಕಗಳ ನಂತರ ಎಲ್ಕೆ ಅಡ್ವಾಣಿ, ಜೋಷಿ ಸೇರಿದಂತೆ ಇತರ 30 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.
ಅಯೋಧ್ಯೆ ರಾಮಜನ್ಮ ಭೂಮಿ – ಬಾಬರಿ ಮಸೀದಿ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್, ನವೆಂಬರ್ 9, 2019ರಂದು ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ಸರ್ವಾನುಮತದ ತೀರ್ಪು ನೀಡಿತ್ತು. ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಜತೆಗೆ ಅಯೋಧ್ಯೆಯಲ್ಲಿಯೇ ಮಸೀದಿ ನಿರ್ಮಾಣಕ್ಕೆ ಬೇರೊಂದು ಜಾಗದಲ್ಲಿ 5 ಎಕರೆ ಪರ್ಯಾಯ ಭೂಮಿ ನೀಡುವಂತೆ ತೀರ್ಪು ನೀಡಿತ್ತು.