ಮೋದಿ ಪ್ರಕಾರ ಸಾಮಾಜಿಕ ನ್ಯಾಯ ಎಂದರೆ, ಯಾವುದಿರಬುದು ಎಂಬುದನ್ನು ಒಮ್ಮೆ ಕೂಲಂಕುಷವಾಗಿ ಯೋಚಿಸಲೇಬೇಕಾಗುತ್ತದೆ. ಧರ್ಮದ ಆಧಾರದಲ್ಲಿ, ವರ್ಗಗಳ ಆಧಾರದಲ್ಲಿ ಹಾಗೂ ಜಾತಿಗಳ ಆಧಾರದಲ್ಲಿ ಮಾಡುವಂತಹ ರಾಜಕೀಯವನ್ನು ಅಥವಾ ಇವುಗಳ ಹೆಸರಿನಲ್ಲಿ ಬಜೆಟ್ ಮಂಡಿಸುವುದನ್ನೇ ಮೋದಿಯವರು ಬಹುಶಃ ಸಾಮಾಜಿಕ ನ್ಯಾಯ ಎಂದುಕೊಂಡಿರಬಹುದು.
ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸೋಲಾಪುರ, ಸತಾರಾ ಮತ್ತು ಪುಣೆಯಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದಾರೆ. “ಈ ಚುನಾವಣೆಯಲ್ಲಿ, ನೀವು ಮುಂದಿನ 5 ವರ್ಷಗಳು ಅಭಿವೃದ್ಧಿ ಗ್ಯಾರಂಟಿಯನ್ನು ನೀಡುವವರನ್ನು ಆಯ್ಕೆ ಮಾಡಿ. ಏಕೆಂದರೆ, 2014ಕ್ಕಿಂತ ಮೊದಲು ದೇಶವನ್ನು ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ದುರಾಡಳಿತದ ಪ್ರಪಾತಕ್ಕೆ ತಳ್ಳಿದವರೂ ಇದ್ದಾರೆ. ಕಳಂಕಿತ ಇತಿಹಾಸದ ಹೊರತಾಗಿಯೂ, ಕಾಂಗ್ರೆಸ್ ಮತ್ತೊಮ್ಮೆ ದೇಶದಲ್ಲಿ ಅಧಿಕಾರವನ್ನು ವಶಪಡಿಸಿಕೊಳ್ಳುವ ಕನಸು ಕಾಣುತ್ತಿದೆ” ಎಂದು ಹೇಳಿ ಅಧಿಕಾರ ದಾಹಕ್ಕಾಗಿ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಹಿಟ್ಲರ್ ಕಾಲದಲ್ಲಿ ʼಜೋಸೆಫ್ ಗೊಬೆಲ್ಸ್ʼ ಎಂಬಾತ ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ, ಸತ್ಯವಾಗುತ್ತದೆಂದು ಹೇಳಿದ್ದ. ಆಗ, ಜರ್ಮನಿಯಲ್ಲಿ ಒಂದೇ ಸುಳ್ಳನ್ನು ನೂರು ಬಾರಿ ಹೇಳುವ ಮೂಲಕ ಜನರನ್ನು ನಂಬಿಸಲಾಗುತ್ತಿತ್ತು. ಈಗ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ನಾಯಕರು ಅನುಸರಿಸುತ್ತಿರುವುದೂ ಕೂಡ ಇಂತಹ ಮಾದರಿಯೇ. ಇವರಿಗೆ ಬರೀ ಅಪಪ್ರಚಾರ ಮಾಡುವುದೇ ಕೆಲಸ. ಬೇರೆಯವರ ದಾರಿ ತಪ್ಪಿಸುವುದು ಬಿಟ್ಟರೆ ಬೇರೆ ಗೊತ್ತಿಲ್ಲ. ಎಲ್ಲೆಡೆ ಪ್ರಚಾರ ಮಾಡುವಾಗಲೂ ಕೂಡಾ ನಾನು ಹತ್ತು ವರ್ಷದಲ್ಲಿ ವಿಶ್ವ ತಿರುಗಿದ್ದೇನೆ. ಕಾಂಗ್ರೆಸ್ ಏನೂ ಮಾಡಿಲ್ಲವೆಂದೇ ಹೇಳುತ್ತಾರೆ. ಆದರೆ, ಇವರ ಸಾಧನೆಯ ಮಾತಿನಂತಿದ್ದರೆ, ಇವತ್ತು ಭಾರತ ಶ್ರೀಮಂತ ರಾಷ್ಟ್ರಗಳ ಸಾಲಿನಲ್ಲಿ ಮೊದಲಪಟ್ಟಿಯಲ್ಲಿರಬೇಕಿತ್ತಲ್ಲವೇ?
ಅಧಿವೃದ್ಧಿ ಮಾಡುತ್ತೇವೆಂದು ಬೊಗಳೆ ಬಿಡುವ ಪ್ರಧಾನಿ ಮೋದಿ – ಅಲ್ಲಲ್ಲಿ, ಕಾಮಗಾರಿಗಳಿಗೆ ಚಾಲನೆ ನೀಡಿ ಉದ್ಘಾಟನೆ ನಡೆಸುತ್ತಾರೆಯೇ ಹೊರತು, ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸುವುದಿಲ್ಲ. ಎಲ್ಲೆಡೆ ಟೋಲ್ ರಸ್ತೆಗಳನ್ನು ನಿರ್ಮಾಣ ಮಾಡಿ, ಸಾರ್ವಜನಿಕರಿಂದಲೇ ಹಣ ಪಾವತಿ ಮಾಡಿಸುವುದೇ ಮೋದಿ ಅವರ ಅಭಿವೃದ್ಧಿ. ದೇಶದ ಉದ್ಯಮಿಗಳನ್ನು ವಿಶ್ವದಲ್ಲಿ ನಂಬರ್ ಒನ್ ಮಾಡುವುದೇ ಮೋದಿ ಅಭಿವೃದ್ಧಿ. ಸರ್ಕಾರಿ ಶಾಲೆ ಕಾಲೇಜುಗಳನ್ನು ಮೇಲ್ದರ್ಜೆಗೇರಿಸದೆ, ಅವುಗಳನ್ನು ಮುಚ್ಚಿ ಶಿಕ್ಷಣವನ್ನು ಖಾಸಗೀಕರಣಗೊಳಿಸುವುದೇ ಇವರ ಅಭಿವೃದ್ಧಿ.
ಕೇವಲ ಹತ್ತು ವರ್ಷಗಳಲ್ಲಿ ಹಿಂದೆಂದಿಗಿಂತಲೂ ಅಧಿಕವಾಗಿ ಮಾಡಿದ ಸಾಲವೇ ಮೋದಿಯ ಅಭಿವೃದ್ಧಿ. ನಿಜವಾಗಿಯೂ ಇವರ ಅಭಿವೃದ್ಧಿ ಇರುವುದೇ ಆದಲ್ಲಿ, ಇವರ ಹೆಸರಿನಲ್ಲಿ ಮತ ಕೇಳುವ ಅಗತ್ಯವೇ ಇಲ್ಲ ಅಲ್ಲವೇ? ಇವರು ಮಾಡಿರುವ ಅಭಿವೃದ್ಧಿ, ಸಾಧಾನೆಗಳನ್ನು ಕಂಡು ಜನರೇ ಆಯ್ಕೆ ಮಾಡುತ್ತಾರೆ. ಮತ್ತೊಮ್ಮೆ ಇಂತಹ ನಾಯಕ ಬೇಕೆನ್ನುವ ಹಂಬಲ ಜನರಲ್ಲಿದ್ದರೆ, ಖಂಡಿತವಾಗಿಯೂ ಎದುರಾಳಿ ಪಕ್ಷವನ್ನು ದೂಷಿಸಿಕೊಂಡು ಮತ ಕೇಳುವ ಅಗತ್ಯವಿದೆಯೇ? ನಿಮ್ಮ ಪ್ರಣಾಳಿಕೆಗಳ ಸಾಧನೆಯ ಕುರಿತು ತಿಳಿಸಿ ಮತ ಕೇಳಬಹುದಲ್ಲವೇ?
ಸಾಮಾಜಿಕ ನ್ಯಾಯಕ್ಕೆ ಕೇಂದ್ರವು ಅಭೂತಪೂರ್ವ ಶಕ್ತಿಯನ್ನು ಹೇಗೆ ನೀಡಿದೆ ಎಂಬುದರ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್ ತನ್ನ 60 ವರ್ಷಗಳಲ್ಲಿ, ಎಸ್ಸಿ/ಎಸ್ಟಿ/ ಒಬಿಸಿ ವರ್ಗಗಳ ಪ್ರತಿಯೊಂದು ಹಕ್ಕನ್ನು ತಡೆಯಲು ನಿರಂತರವಾಗಿ ಪ್ರಯತ್ನಿಸಿದೆ. ಆದರೆ ನಿಮ್ಮೊಂದಿಗಿನ ಮೋದಿಯವರ ಸಂಪರ್ಕ ಹೃದಯದಿಂದ ಬಂದಿದೆ. ನಾವು ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದೇವೆ. ವೈದ್ಯಕೀಯ ಪರೀಕ್ಷೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಎಸ್ಸಿ/ಎಸ್ಟಿ ಮೀಸಲಾತಿಯನ್ನು 10 ವರ್ಷಗಳ ಕಾಲ ವಿಸ್ತರಿಸಿದ್ದು ಬಿಜೆಪಿ. ಯಾರ ಹಕ್ಕುಗಳನ್ನು ಕಸಿದುಕೊಳ್ಳದೆ, ನಾವು ಬಡವರಿಗೆ ಶೇ.10% ಮೀಸಲಾತಿಯನ್ನು ನೀಡಿದ್ದೇವೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಧ್ಯಯನದಲ್ಲಿ, ನಾವು ಮರಾಠಿಯಂತಹ ಭಾರತೀಯ ಭಾಷೆಗಳಿಗೆ ಆಯ್ಕೆಗಳನ್ನು ಒದಗಿಸಿದ್ದೇವೆ. ಇದರಿಂದ ಬಡವರು, ಎಸ್ಸಿ/ಎಸ್ಟಿ/ಒಬಿಸಿ ಯುವಜನರ ಕನಸುಗಳನ್ನು ಈಡೇರಿಸಬಹುದು” ಎಂದು ಅಪ್ಪಟ ಸುಳ್ಳುಗಳನ್ನು ಹೇಳುತ್ತಿದ್ದಾರೆ.
ಮೋದಿ ಪ್ರಕಾರ ಸಾಮಾಜಿಕ ನ್ಯಾಯ ಎಂದರೆ, ಯಾವುದಿರಬುದು ಎಂಬುದನ್ನು ಒಮ್ಮೆ ಕೂಲಂಕುಷವಾಗಿ ಯೋಚಿಸಲೇಬೇಕಾಗುತ್ತದೆ. ಧರ್ಮದ ಆಧಾರದಲ್ಲಿ, ವರ್ಗಗಳ ಆಧಾರದಲ್ಲಿ ಹಾಗೂ ಜಾತಿಗಳ ಆಧಾರದಲ್ಲಿ ಮಾಡುವಂತಹ ರಾಜಕೀಯವನ್ನು ಅಥವಾ ಇವುಗಳ ಹೆಸರಿನಲ್ಲಿ ಬಜೆಟ್ ಮಂಡಿಸುವುದನ್ನೇ ಮೋದಿಯವರು ಬಹುಶಃ ಸಾಮಾಜಿಕ ನ್ಯಾಯ ಎಂದುಕೊಂಡಿರಬಹುದು.
ಪ್ರತಿ ಮಾತಿಗೂ, ʼಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಮಾನ ಆಸ್ತಿ ಹಂಚಿಕೆ ಮಾಡುತ್ತದೆ. ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸುತ್ತದೆ, ತಮ್ಮ ಆಸ್ತಿಗಳನ್ನು ಕಿತ್ತುಕೊಳ್ಳುತ್ತದೆʼ ಎಂದು ಬೊಬ್ಬೆಯೊಡೆಯುವ ಮೋದಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?. ಬಡವರು ತಿನ್ನುವ ಅನ್ನದಿಂದ ಜಿಎಸ್ಟಿ ತೆಗೆದುಕೊಂಡು ಉದ್ಯಮಿಗಳಿಗೆ ಜಿಎಸ್ಟಿಯಲ್ಲಿ ರಿಯಾಯಿತಿ ನೀಡುವ ಮೋದಿಗೆ ಸಾಮಾಜಿಕ ನ್ಯಾಯದ ಕುರಿತು ತಿಳಿದಿದೆಯಾ?.
ಎಸ್ಸಿ/ಎಸ್ಟಿಗಳಿಗೆ ಸವಲತ್ತುಗಳನ್ನು ನೀಡಿದೇವೆಂದು ಹೇಳುವ ಮೋದಿ ಅಂತಹ ವಿದ್ಯಾರ್ಥಿಗಳ ವಾಸ್ತವತೆಯನ್ನು ಕಂಡುಕೊಂಡಿದ್ದಾರಾ? ಉನ್ನತ ಶಿಕ್ಷಣ ಪ್ರವೇಶಕ್ಕೆ ಶುಲ್ಕ ಹೆಚ್ಚಳ ಮಾಡಿದ್ದಾರೆ, ವಿದ್ಯಾರ್ಥಿ ವೇತನ ಪಡೆಯಲು ಅವೈಜ್ಞಾನಿಕ ವೇದಿಕೆ(ಎಸ್ಎಸ್ಪಿ) ಸೃಷ್ಟಿಸಿದ್ದು, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದಲೂ ವಂಚಿತರಾಗುತ್ತಿದ್ದಾರೆ. ಇನ್ನೊಂದೆಡೆ ಪ್ರವೇಶಾತಿ ಶುಲ್ಕವೂ ಹೆಚ್ಚಳವಾಗಿದೆ. ಇದರಿಂದಾಗಿ ಎಸ್ಸಿ/ಎಸ್ಟಿ ಯುವಜನರ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದು ಸಾಮಾಜಿಕ ನ್ಯಾಯವೇ?
ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತಿರುವ ಪ್ರಧಾನಿ ಮೋದಿ, “ದಶಕಗಳಿಂದ, ಕಾಂಗ್ರೆಸ್ ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಗಳಿಗೆ ದ್ರೋಹ ಬಗೆದ ರೀತಿಯಲ್ಲಿ, ಅವರು ಕಾಂಗ್ರೆಸ್ ಮತ್ತು ಇಂಡಿ-ಅಗಡಿ ಎರಡರಿಂದಲೂ ಸಂಪೂರ್ಣವಾಗಿ ದೂರವಾಗಿದ್ದಾರೆ. ಅದಕ್ಕಾಗಿಯೇ ಈ ಜನರು ಸಂವಿಧಾನವನ್ನು ಬದಲಾಯಿಸುತ್ತೇವೆ, ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂದು ನಿರಂತರವಾಗಿ ಸುಳ್ಳುಗಳನ್ನು ಹರಡುತ್ತಿದ್ದಾರೆ” ಎಂದು ಮೋದಿ ಮತ್ತಷ್ಟು ಸುಳ್ಳುಗಳನ್ನು ಹೇಳುತ್ತಿದ್ದಾರೆ.
ವಾಸ್ತವವಾಗಿ ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿರುವವರೇ ಮೋದಿ ಎಂಬುದು ಸ್ಪಷ್ಟ. ಬೇರೆ ಯಾವುದೇ ಸಂಕಷ್ಟಗಳ ಸಮಯದಲ್ಲಿ ರಾಜ್ಯಗಳಿಗೆ ಭೇಟಿ ನೀಡದ ಮೋದಿ ಚುನಾವಣೆ ಸಂದರ್ಭಗಳಲ್ಲಿ ಎಲ್ಲ ರಾಜ್ಯಗಳಿಗೂ ನುಸುಳಿ ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿದು ಹೋಗುತ್ತಾರೆಯೇ ಹೊರತು ಜನರ ಸಂಕಷ್ಟಗಳಿಗೆ ಸ್ಪಂದಿಸುವುದಿಲ್ಲ. ಆದರೆ, ಮತ ಕೇಳುವುದನ್ನು ಮರೆತು ಹೋಗುವುದಿಲ್ಲ. ಇದಲ್ಲವೇ ವೋಟ್ ಬ್ಯಾಂಕ್ ರಾಜಕೀಯ?
“ಬಾಬಾ ಸಾಹೇಬರೇ ಬಂದು ಮೀಸಲಾತಿಯನ್ನು ಕೊನೆಗೊಳಿಸಿ, ಸಂವಿಧಾನವನ್ನು ಬದಲಿಸಿ ಎಂದು ಹೇಳಿದರೂ ಅದು ಆಗುವುದಿಲ್ಲವೆಂದು ನಾನು ಈಗಾಗಲೇ ಹೇಳಿದ್ದೇನೆ. ಮೀಸಲಾತಿಯನ್ನು ಕೊನೆಗೊಳಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದ್ದರೆ, ನಮ್ಮಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಗಳಿವೆ. ಇಂದು, ನಾನು ದೇಶದಿಂದ ಹೆಚ್ಚಿನ ಸ್ಥಾನಗಳನ್ನು ಕೇಳುತ್ತಿದ್ದೇನೆ. ಇದರಿಂದ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪಿತೂರಿಗಳನ್ನು ನಾಶಪಡಿಸಲು ನನಗೆ ಹೆಚ್ಚಿನ ಅಧಿಕಾರವಿದೆ” ಎಂದು ಎಂದು ಮತ್ತೊಂದು ಅಪ್ಪಟ ಸುಳ್ಳು ಹೇಳಿದ್ದಾರೆ.
ʼಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಸಂವಿಧಾನವನ್ನು ಬದಲಿಸಲು 400 ಸೀಟುಗಳ ಅವಶ್ಯಕತೆ ಇದೆ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲುʼ ಎಂದು ಅವರದೇ ಪಕ್ಷದ ನಾಯಕರು, ಸಂಸದರು ಅವರ ಸರ್ಕಾರ ಇರುವ ರಾಜ್ಯಗಳಲೆಲ್ಲ ನಾಲಿಗೆಗೆ ತಡೆ ಇಲ್ಲದಂತೆ ಹರಿಬಿಟ್ಟಿದ್ದಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಮತದಾರರೇ ಮಹಾಪ್ರಭುಗಳು. ಸಂವಿಧಾನ ಬದಲಿಸುತ್ತೇವೆ ಎನ್ನುವವರನ್ನೇ ಜನರು ಮತದಾರರು ಬದಲಿಸುತ್ತಾರೆ, ಇಲ್ಲಿ ಯಾರ ಸರ್ವಾಧಿಕಾರಕ್ಕೂ ಅವಕಾಶವಿಲ್ಲ ಎಂಬುದನ್ನು ಬಹುಶಃ ಮೋದಿ ಮರೆತಿರಬಹುದು.
ಬಡವರ ಕಲ್ಯಾಣಕ್ಕಾಗಿ ತಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂಬ ಸುಳ್ಳುಗಳನ್ನು ಕುರಿತು ಪಿಎಂ ಮೋದಿ ಮಾತನಾಡಿದರು. “ಕಳೆದ 10 ವರ್ಷಗಳಲ್ಲಿ, ಬಡವರ ಕಲ್ಯಾಣಕ್ಕಾಗಿ ನಾವು ಜಾರಿಗೆ ತಂದ ಎಲ್ಲ ಯೋಜನೆಗಳು ದಲಿತರು, ಆದಿವಾಸಿಗಳು ಮತ್ತು ಅಂಚಿನಲ್ಲಿರುವವರಿಗೆ ಹೆಚ್ಚು ಪ್ರಯೋಜನವನ್ನು ನೀಡಿವೆ. ಉಚಿತ ಪಡಿತರ, ಉಚಿತ ಆರೋಗ್ಯ ರಕ್ಷಣೆ, ಪಕ್ಕಾ ಮನೆಗಳು, ಶೌಚಾಲಯಗಳು, ವಿದ್ಯುತ್, ಅನಿಲ, ನೀರು-ಇವೆಲ್ಲವೂ ಮುಖ್ಯವಾಗಿ ಸಮಾಜದ ಅತ್ಯಂತ ವಂಚಿತ ವರ್ಗಗಳನ್ನು ತಲುಪಿವೆ. ಎಸ್ಸಿ/ಎಸ್ಟಿ/ಒಬಿಸಿ ಕುಟುಂಬಗಳನ್ನು ಈ ಯೋಜನೆಗಳೊಂದಿಗೆ ಸಂಪರ್ಕಿಸಲು ನಮ್ಮ ಸರ್ಕಾರ ಪ್ರತಿ ಮನೆ, ಪ್ರತಿ ಹಳ್ಳಿಯನ್ನು ತಲುಪಿದೆ” ಎಂದು ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ.
ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು: ಭಾಗ-3 | ಅಭಿವೃದ್ಧಿ ಹೆಸರಿನಲ್ಲಿ ಅನುದಾನ; ವಸೂಲಿ ಮಾಡಿತೇ ಮೋದಿ ಸರ್ಕಾರ?
ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂದು ಬಡಾಯಿ ಕೊಚ್ಚಿಕೊಳ್ಳುವ ಮೋದೀಜಿಗೆ ರಾಜ್ಯದಲ್ಲಿಯೇ 13,000 ಕುಟುಂಬಗಳಿಗೆ ಮನೆಗಳಿಲ್ಲದೆ, ಬೀದಿಯಲ್ಲಿರುವುದು ಗಮನಕ್ಕೆ ಬಂದಿಲ್ಲವಾ? ಅವರ ಯೋಜನೆಗಳೆಲ್ಲ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿವೆ ಎನ್ನುವ ಅಂದಾಜಾದರೂ ಇದಿಯಾ, ಹಾಗಿದ್ದಲ್ಲಿ ಬಹುತೇಕ ಕುಟುಂಬಗಳು ಇವತ್ತಿಗೂ ಕೂಡಾ ವಸತಿಯ ಹಕ್ಕುಪತ್ರಕ್ಕಾಗಿ ಅಲೆಯುತ್ತಿರುದಾದರೂ ಏಕೆ? ಉಚಿತ ಪಡಿತರ ಕೊಡುತ್ತೇವೆಂದು ಹೇಳುವ ಮೋದಿಯವರು ಕರ್ನಾಟಕ ಸರ್ಕಾರ ದುಡ್ಡು ಕೊಡುತ್ತೇವೆಂದು ಗೋಗರೆದರೂ ಕೂಡ ಅಕ್ಕಿ ನೀಡದ ಕೇಂದ್ರ ಇವತ್ತು ಮತ ಬ್ಯಾಂಕ್ಗಾಗಿ ಉಚಿತವಾಗಿ ಎಲ್ಲ ನೀಡುತ್ತೇವೆಂದು ಹಸಿಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲುಬಿಲ್ಲದ ನಾಲಿಗೆಯನ್ನು ಸರಾಗವಾಗಿ ಹರಿಬಿಡುತ್ತಿದ್ದಾರೆ.