- ಮಧ್ಯಪ್ರದೇಶ ಇಂದೋರ್ ನಗರ ಕನಾಡಿಯಾದಲ್ಲಿ ಘಟನೆ
- ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿರುವ ವಧು
ಬಹಳ ವರ್ಷಗಳ ಕಾಯುವಿಕೆ ನಂತರ ವಿವಾಹ ಆಗುತ್ತಿರುವುದಕ್ಕೆ ನವ ಜೋಡಿಯೊಂದು ತಾಳಿ ಕಟ್ಟುವ ಮುನ್ನವೇ ಹಸೆಮಣೆ ಮೇಲೆ ವಿಷ ಸೇವಿಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಗರದಲ್ಲಿ ನಡೆದಿರುವುದಾಗಿ ಗುರುವಾರ (ಮೇ 18) ವರದಿಯಾಗಿದೆ.
ವಿಷ ಸೇವನೆಯಿಂದ 21 ವರ್ಷದ ವರ ಮೃತಪಟ್ಟಿದ್ದಾರೆ. 20 ವರ್ಷದ ವಧು ಸ್ಥಿತಿ ಗಂಭೀರವಾಗಿದೆ. ಘಟನೆ ಮಂಗಳವಾರ (ಮೇ 16) ನಡೆದಿದೆ.
ಮಧ್ಯಪ್ರದೇಶ ಇಂದೋರ್ನ ಈ ಘಟನೆಯಲ್ಲಿ ವಿಷ ಸೇವಿಸಿದ ವಧು, ವರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ವರ ಮೃತಪಟ್ಟಿದ್ದಾರೆ. ವಧು ಇನ್ನೂ ಜೀವನ್ಮರಣ ಹೋರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
“ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಾಲಯದಲ್ಲಿ ವಿವಾಹ ಸಮಾರಂಭ ನಡೆಯುವ ವೇಳೆ ವಧು, ವರರ ನಡುವೆ ವಿವಾಹ ಸಂಬಂಧ ವಾಗ್ವಾದ ನಡೆದಿದೆ. ಬಳಿಕ ವರ ತಾನು ವಿಷ ಸೇವಿಸಿರುವುದಾಗಿ ವಧುವಿಗೆ ತಿಳಿಸಿದ್ದಾನೆ. ಆಗ ವಧು ಸಹ ವಿಷ ಸೇವಿಸಿದ್ದಾಳೆ” ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ರಂಜಾನ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.
“ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ವರ ಮೃತಪಟ್ಟಿರುವುದಾಗಿ ಘೋಷಿಸಿದರು. ವಧು ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ” ಎಂದು ಅವರು ಹೇಳಿದರು.
ಯುವತಿಯು ಯುವಕನನ್ನು ಮದುವೆಯಾಗುವಂತೆ ಹಲವು ದಿನಗಳಿಂದ ಪೀಡಿಸುತ್ತಿದ್ದಳು. ತನ್ನ ವೃತ್ತಿಯ ಏಳ್ಗೆಯ ಕಾರಣ ಎರಡು ವರ್ಷ ಕಾಲಾವಕಾಶ ಬೇಕು ಎಂದು ಯುವಕ ಹೇಳಿದ್ದ. ಈ ಸಂಬಂಧ ಯುವತಿ ಯುವಕನ ಮೇಲೆ ಪೊಲೀಸರಿಗೆ ದೂರು ನೀಡಿದ್ದಳು.
ಈ ಸುದ್ದಿ ಓದಿದ್ದೀರಾ? ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ಗೆ ಸುಪ್ರೀಂನಿಂದ ನಿರೀಕ್ಷಣಾ ಜಾಮೀನು ಮಂಜೂರು
ಈ ವಿಚಾರ ಮದುವೆ ವೇಳೆ ಮತ್ತೆ ಪ್ರಸ್ತಾಪವಾಗಿ ವಾಗ್ವಾದ ಉಂಟಾಯಿತು ಎಂದು ವರನ ಕುಟುಂಬ ಸದಸ್ಯರು ತಿಳಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.
ಮಧ್ಯಪ್ರದೇಶ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ವಧು ಮತ್ತು ವರನ ಕಡೆಯವರ ವಿಚಾರಣೆ ನಡೆಸಿದ್ದಾರೆ. ಶೀಘ್ರ ಇಬ್ಬರ ಆತ್ಮಹತ್ಯೆಗೆ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದರು.