- ಮಾರ್ಚ್ 18ರಿಂದ ತಲೆ ಮರೆಸಿಕೊಂಡಿರುವ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್
- ಪಂಜಾಬ್ಗೆ ಮರಳಿದ್ದಾನೆ ಎಂದು ಪೊಲೀಸರ ಹೇಳಿಕೆ ಬೆನ್ನಲ್ಲೇ ವಿಡಿಯೋ ಬಿಡುಗಡೆ
ಹನ್ನೆರೆಡು ದಿನಗಳಿಂದ ಪಂಜಾಬ್ ಪೊಲೀಸರಿಂದ ತಲೆತಪ್ಪಿಸಿಕೊಂಡಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್, ಬುಧವಾರ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ತಾನು ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾನೆ.
ಅಮೃತಪಾಲ್ ಸಿಂಗ್ ಪಂಜಾಬ್ಗೆ ಮರಳಿದ್ದಾನೆ ಮತ್ತು ಆತ ಶರಣಾಗಲು ಯೋಜಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳುತ್ತಿದ್ದಂತೆ ವಿಡಿಯೋ ಬಿಡುಗಡೆಯಾಗಿದೆ.
“ಪಂಜಾಬ್ ಸರ್ಕಾರಕ್ಕೆ ನನ್ನನ್ನು ಬಂಧಿಸುವ ಉದ್ದೇಶವಿದ್ದರೆ, ಪೊಲೀಸರು ನನ್ನ ಮನೆಗೆ ಆಗಮಿಸಿದ್ದರೆ ನಾನೇ ಶರಣಾಗುತ್ತಿದ್ದೆ. ಆದರೆ ಅವರ ಉದ್ದೇಶ ಬೇರೆ ಇದ್ದಂತಿದೆ. ನನ್ನನ್ನು ಬಂಧಿಸಲು ಕಳುಹಿಸಲಾದ ಲಕ್ಷಗಟ್ಟಲೆ ಪೊಲೀಸರ ಪ್ರಯತ್ನದಿಂದ ದೇವರು ನನ್ನನ್ನು ರಕ್ಷಿಸಿದ್ದಾನೆ” ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ವಿವಾದಾತ್ಮಕ ಪೂತನಿ ಹೇಳಿಕೆ; ರಾಜಕೀಯ ಕೆಸರೆರಚಾಟಕ್ಕೆ ಮಹಿಳೆಯರು ಗುರಿ
“ಅಂದಿನ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಆಳ್ವಿಕೆಯಲ್ಲಿ ಸಿಖ್ಖರಿಗೆ ಏನು ಮಾಡಲಾಯಿತು, ಈಗ ಅದನ್ನೇ ಮಾಡಲಾಗುತ್ತಿದೆ. ನನ್ನ ಪರವಾಗಿ ಪ್ರತಿಭಟನೆ ನಡೆಸಿದ ಎಲ್ಲ ಸಂಘ ಸಂಸ್ಥೆಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಸ್ಥಿತಿ ಅರ್ಥ ಮಾಡಿಕೊಳ್ಳಬೇಕಾದರೆ ಇದು ಕೇವಲ ನನ್ನ ಬಂಧನದ ವಿಚಾರವಲ್ಲ, ಇಡೀ ಸಿಖ್ ಸಮುದಾಯದ ಮೇಲಿನ ದಾಳಿ ಎಂದು ಸಮುದಾಯದವರು ಅರ್ಥಮಾಡಿಕೊಳ್ಳಬೇಕು. ನನಗೆ ಬಂಧನದ ಭಯವಿರಲಿಲ್ಲ. ಆದರೆ ಪಂಜಾಬ್ ಪೊಲೀಸರ ಉದ್ದೇಶ ಬೇರೆಯೇ ಇದ್ದಂತಿದೆ” ಎಂದು ಅಮೃತ್ ಪಾಲ್ ಸಿಂಗ್ ವಿಡಿಯೋದಲ್ಲಿ ತಿಳಿಸಿದ್ದಾನೆ.
ಸಿಖ್ಖರಿಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಬೆಂಬಲಿಸುವ ಮತ್ತು ಕಳೆದ ತಿಂಗಳು ಪೊಲೀಸ್ ಠಾಣೆಯ ಮೇಲೆ ಸಶಸ್ತ್ರ ದಾಳಿ ನಡೆಸಿದ ಆರೋಪದ ಮೇಲೆ ಅಮೃತಪಾಲ್ ಸಿಂಗ್ನನ್ನು ಪೊಲೀಸರು ಕಳೆದ ಹನ್ನೆರಡು ದಿನಗಳಿಂದ ಹುಡುಕುತ್ತಿದ್ದಾರೆ.
ಕಪುರ್ತಲಾದ ಗುರುದ್ವಾರವೊಂದರ ಬಳಿ ಅಮೃತಪಾಲ್ ಸಿಂಗ್ ಬಿಟ್ಟು ಹೋಗಿದ್ದಎನ್ನಲಾದ ಕಾರನ್ನು ಪೊಲೀಸರು ಇಂದು (ಮಾರ್ಚ್ 29) ವಶಪಡಿಸಿಕೊಂಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಅಮೃತ್ ಪಾಲ್ ಹೋಶಿಯಾರ್ಪುರದ ಹಳ್ಳಿಗಳ ಮೂಲಕ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ. ಈತ ಪಾಟಿಯಾಲ ಹಾಗೂ ದೆಹಲಿಯಲ್ಲಿ ಇರುವ ಬಗ್ಗೆ ಪಂಜಾಬ್ ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದರು.
ಮಾರ್ಚ್ 18ರಿಂದ ಅಮೃತಪಾಲ್ ವಿರುದ್ಧ ಬಂಧನದ ಆದೇಶ ಜಾರಿಯಾದಾಗಿನಿಂದ ಪಂಜಾಬ್ ಪೊಲೀಸರು ಆತನ ಹಲವಾರು ಸಹಚರರನ್ನು ಬಂಧಿಸಿದ್ದಾರೆ. ಈತನ ವಿರುದ್ಧ ರಾಷ್ಟ್ರವಿರೋಧಿ ಚಟುವಟಿಕೆ ಸೇರಿದಂತೆ ಕನಿಷ್ಠ ಎಂಟು ಪ್ರಕರಣಗಳನ್ನು ದಾಖಲಿಸಲಾಗಿದೆ.