ಮಣಿಪುರ ರಾಜ್ಯದ ಕಾಂಗ್ಪೋಕ್ಪಿ ಜಿಲ್ಲೆಯ ಗ್ರಾಮದ ಬಳಿ ಎರಡು ದಿನಗಳ ಹಿಂದೆ ಇಬ್ಬರು ಮಹಿಳೆಯರನ್ನು ಗುಂಪೊಂದು ಬೆತ್ತಲೆ ಮೆರವಣಿಗೆ ನಡೆಸಿದ ದೃಶ್ಯ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈ ಇಬ್ಬರು ಮಹಿಳೆಯರಲ್ಲಿ ಒಬ್ಬರ ಪತಿ ಭಾರತೀಯ ಸೇನೆಯ ಯೋಧನಾಗಿದ್ದು, ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದಾರೆ. ದೇಶವನ್ನು ರಕ್ಷಿಸಿದರೂ ತನ್ನ ಹೆಂಡತಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಮಣಿಪುರ ಸೈನಿಕನಿಗೆ ಕಾಡುತ್ತಿದೆ.
“ನಾನು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದೆ ಮತ್ತು ಭಾರತೀಯ ಶಾಂತಿ ಪಾಲನಾ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿಯೂ ಇದ್ದೆ. ನಾನು ದೇಶವನ್ನು ರಕ್ಷಿಸಿದ್ದೇನೆ ಆದರೆ ನನ್ನ ಹೆಂಡತಿ ಮತ್ತು ನನ್ನ ಗ್ರಾಮಸ್ಥರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಬೇಸರವಾಗುತ್ತಿದೆ” ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಮೇ 4 ರಂದು ಮುಂಜಾನೆ ಜನಸಮೂಹವು ಹಲವಾರು ಮನೆಗಳನ್ನು ಸುಟ್ಟುಹಾಕಿತು, ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಜನರ ಮುಂದೆ ಹಳ್ಳಿಯ ಹಾದಿಯಲ್ಲಿ ಮೆರವಣಿಗೆ ಮಾಡುವಂತೆ ಹೇಳಿತು. ಪೊಲೀಸರು ಸ್ಥಳದಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಗಳನ್ನು ಸುಟ್ಟುಹಾಕಿದ ಮತ್ತು ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಂಡ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ” ಎಂದು ಯೋಧ ತಿಳಿಸಿದ್ದಾರೆ.
ಬೆತ್ತಲೆ ಮೆರವಣಿಗೆಗೂ ಮುನ್ನ ಹಲವರನ್ನು ಕೊಂದು, ಮನೆಗಳಿಗೆ ಬೆಂಕಿ ಹಚ್ಚಿದ್ದ ಗುಂಪು
ಮೇ 4 ರಂದು ನಡೆದ ಈ ಹಿಂಸಾಚಾರ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ವರದಿಯ ಪ್ರಕಾರ ಮಹಿಳೆಯರನ್ನು ಬೆತ್ತಲೆ ನಡೆಸುವುದಕ್ಕೂ ಮುನ್ನ ಶಸ್ತ್ರಸಜ್ಜಿತ ಯುವಕರ ಗುಂಪು ಕಾಂಗ್ಪೋಕ್ಪಿ ಜಿಲ್ಲೆಯ ಗ್ರಾಮವೊಂದಕ್ಕೆ ಬಂದು ಹತ್ತಾರು ಮನೆಗಳಿಗೆ ಬೆಂಕಿ ಹಚ್ಚಿ ಲೂಟಿ ಮಾಡಿತ್ತು. ಮನೆಯಲ್ಲಿದ್ದವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ಹಲವರನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಧ್ಯಮವೊಂದರಲ್ಲಿ ಲಭ್ಯವಿರುವ ಎಫ್ಐಆರ್ ವರದಿಯ ಪ್ರಕಾರ, ಸೈಕುಲ್ ಪೊಲೀಸ್ ಠಾಣೆಯಿಂದ ದಕ್ಷಿಣಕ್ಕೆ 68 ಕಿಮೀ ದೂರದಲ್ಲಿರುವ ಕಾಂಗ್ಪೋಕ್ಪಿ ಜಿಲ್ಲೆಯ ದ್ವೀಪ ಉಪವಿಭಾಗದ ಬಳಿಯಿರುವ ಗ್ರಾಮಕ್ಕೆ ಎಕೆ ರೈಫಲ್ಸ್, ಎಸ್ಎಲ್ಆರ್, 303 ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸುಮಾರು 900 -1000 ಜನರು ನಮ್ಮ ಗ್ರಾಮವನ್ನು ಬಲವಂತವಾಗಿ ಪ್ರವೇಶಿಸಿದರು. ಜನಸಮೂಹವು ನಮ್ಮ ಚರಾಸ್ಥಿಗಳನ್ನು ಲೂಟಿ ಮಾಡಿ, ನಮ್ಮ ಎಲ್ಲ ಮನೆಗಳನ್ನು ಧ್ವಂಸಗೊಳಿಸಿತು ಎಂದು ತಿಳಿಸಲಾಗಿದೆ.
ಜನರ ಗುಂಪು ನಗದು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರಧಾನ್ಯಗಳು, ಜಾನುವಾರುಗಳನ್ನು ಲೂಟಿ ಮಾಡಿದ್ದಾರೆ. ಹತ್ತಿರದ ಅರಣ್ಯದಿಂದ ಪೊಲೀಸ್ ಸಿಬ್ಬಂದಿ ರಕ್ಷಿಸಿದ ಐವರನ್ನು ಜನಸಮೂಹ ಬಲವಂತವಾಗಿ ಕರೆದುಕೊಂಡು ಹೋಗಿದೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
ಜುಲೈ 19 ರಂದು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡಿದ ಒಂದು ದಿನದ ನಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಜುಲೈ 19 ರಂದು ವಿಡಿಯೋ ಕಾಣಿಸಿಕೊಂಡ ಒಂದು ದಿನದ ನಂತರ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಒಂದು ತಿಂಗಳ ಹಿಂದೆ ಜೂನ್ 21 ರಂದು ಸೈಕುಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ; ಪ್ರತಿಕ್ರಿಯೆ ಕೇಳಿ ಇಡಿಗೆ ಸುಪ್ರೀಂ ನೋಟಿಸ್
ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ,,, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ಏನಾಗಬೇಡ,,, ತಮ್ಮ ಪಕ್ಷದ ಚುನಾವಣಾ ಲಾಭಕ್ಕಾಗಿ ಉದ್ದುದ್ದ ಭಾಷಣ ಮಾಡುವ ಬಿಳಿ ಬಟ್ಟೆಯ ರಾಜಕೀಯ ದಂಧೆಕೋರರಿಗೆ ಹೆಂಡತಿ ಮಕ್ಕಳು ಗಂಡ ತಾಯಿ ತಂದೆ ಅನುಭವಿಸುವ ರೋದನೆ ಹೇಗೆ ಅರ್ಥವಾಗಬೇಕು,,,