- ಎಸ್ಸಿಒ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಎಸ್ ಜೈಶಂಕರ್ ಹೇಳಿಕೆ
- ಚೀನಾ, ಭಾರತದಲ್ಲಿ ಸೇನಾ ಹಿಂತೆಗೆತ ಮುಂದುವರಿಯಬೇಕು ಎಂದ ಜೈಶಂಕರ್
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಭಯೋತ್ಪಾದಕತೆ ಉದ್ಯಮದ ಉತ್ತೇಜಕ, ಸಮರ್ಥಕ ಹಾಗೂ ವಕ್ತಾರ ಎಂದು ವಿದೇಶಾಂಗ ಸಚಿವ ಜೈಶಂಕರ್ ಶುಕ್ರವಾರ (ಮೇ 5) ಟೀಕಿಸಿದರು.
ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ವಿದೇಶಾಂಗ ಸಚಿವರ ಸಮಾವೇಶದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಎಸ್ ಜೈಶಂಕರ್ ಪ್ರತಿಕ್ರಿಯಿಸಿದರು.
ಭಯೋತ್ಪಾದನೆ ವಿರುದ್ಧ ಹೋರಾಟ ಸಂಬಂಧ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆ ಸಾಧ್ಯತೆ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
“ಭಯೋತ್ಪಾದನೆ ಸಂತ್ರಸ್ತರು ಎಂದು ಹೇಳಿಕೊಳ್ಳುವವರು ಭಯೋತ್ಪಾದನೆಯಲ್ಲಿ ತೊಡಗಿರುವವರ ಜೊತೆ ಕುಳಿತು ಭಯೋತ್ಪಾದನೆ ಬಗ್ಗೆ ಚರ್ಚಿಸುವುದಿಲ್ಲ” ಎಂದು ಜೈಶಂಕರ್ ಬಿಲಾವಲ್ ಭುಟ್ಟೊ ವಿರುದ್ಧ ವಾಗ್ದಾಳಿ ನಡೆಸಿದರು.
“ಭಯೋತ್ಪಾದನೆ ಹೆಚ್ಚುತ್ತಿರುವ ಅಪಾಯದ ಕುರಿತು ಉತ್ತೇಜನೆ, ಸಮರ್ಥಿಸುವ ಅದರ ವಕ್ತಾರ ಬಿಲಾವಲ್ ಅವರ ನಿಲುವಿನ ಬಗ್ಗೆ ಎಸ್ಸಿಒ ಸಮಾವೇಶದಲ್ಲಿ ತಿಳಿಸಲಾಗಿದೆ” ಎಂದು ಎಸ್ ಜೈಶಂಕರ್ ಹೇಳಿದರು.
“ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರದ ವಿದೇಶಾಂಗ ಸಚಿವರಾಗಿ ಬಿಲಾವಲ್ ಭುಟ್ಟೊ ಅವರು ಭಾರತಕ್ಕೆ ಬಂದಿದ್ದಾರೆ. ಇದು ಅವರ ಬಹುಪಕ್ಷೀಯ ರಾಜತಾಂತ್ರಿಕತೆಯ ಭಾಗ. ಅವರ ಭೇಟಿ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ” ಎಂದು ಎಸ್ ಜೈಶಂಕರ್ ಸ್ಪಷ್ಟಪಡಿಸಿದರು.
ಭಾರತ- ಚೀನಾ ನಡುವಿನ ಗಡಿ ಸಮಸ್ಯೆ ಕುರಿತು ಮಾತನಾಡಿದ ಜೈಶಂಕರ್, “ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿದಾಗ ಮಾತ್ರ ಭಾರತ ಮತ್ತು ಚೀನಾ ನಡುವಿನ ಬಾಂಧವ್ಯ ಸಹಜಸ್ಥಿತಿಗೆ ಬರಲು ಸಾಧ್ಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿದ ಎನ್ಸಿಪಿ ಸಮಿತಿ
ಎಸ್ಸಿಒ ಸಮಾವೇಶಕ್ಕೂ ಮುನ್ನ ಚೀನಾ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಅವರೊಂದಿಗೆ ಎಸ್ ಜೈಶಂಕರ್ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. “ಭಾರತ ಹಾಗೂ ಚೀನಾ ಗಡಿಯಲ್ಲಿ ಸಹಜಸ್ಥಿತಿ ಇಲ್ಲ. ಈ ಬಗ್ಗೆ ನಾವು ಮುಕ್ತವಾಗಿ ಚರ್ಚಿಸಿದ್ದೇವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕಾದರೆ ಗಡಿಯಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರಿಯಬೇಕು” ಎಂದು ಜೈಶಂಕರ್ ಮಾಹಿತಿ ನೀಡಿದರು.