ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಸ್ವಾಮಿ ಸಂದೀಪಾನಂದಗಿರಿ ಆಶ್ರಮಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕೌನ್ಸಿಲರ್ ಮತ್ತು ಆರ್ಎಸ್ಎಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರ ಪಿಟಿಪಿ ನಗರ ವಾರ್ಡ್ ಕೌನ್ಸಿಲರ್ ವಿಜಿ ಗಿರಿಕುಮಾರ್ ಮತ್ತು ಕರುಮಾಂಕುಳಂ ಮೂಲದ ಆರ್ಎಸ್ಎಸ್ ಕಾರ್ಯಕರ್ತ ಶಬರಿ ಎಂಬಾತನನ್ನು ಕ್ರೈಂ ಬ್ರಾಂಚ್ ಪೊಲೀಸರು ಕಳೆದೆರಡು ದಿನಗಳ ಅಂತರದಲ್ಲಿ ಬಂಧಿಸಿದ್ದಾರೆ.
ತಿರುವಂನಂತಪುರಂನ ಕುಂದಮಂಕಡವು ಎಂಬಲ್ಲಿರುವ ಕರಮನಾ ನದಿಯ ದಡದಲ್ಲಿರುವ ಸ್ವಾಮಿ ಸಂದೀಪಾನಂದಗಿರಿ ಆಶ್ರಮಕ್ಕೆ ಅಕ್ಟೋಬರ್ 27, 2018ರ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಘಟನೆಯಲ್ಲಿ ಆಶ್ರಮದ ವಾಹನದ ಮುಂಭಾಗ ನಿಲ್ಲಿಸಿದ್ದ ವಾಹನಗಳು ಸುಟ್ಟು ಕರಕಲಾಗಿದ್ದವು.
ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ನಾಲ್ವರು ಆರೋಪಿಗಳು ನೀಡಿದ ಹೇಳಿಕೆಗಳ ಆಧಾರದ ಮೇಲೆ ಗಿರಿಕುಮಾರ್ನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಬಿಜೆಪಿ ಕೌನ್ಸಿಲರ್ ಗಿರಿಕುಮಾರ್ ಸಂಚಿನಲ್ಲಿ ಭಾಗಿಯಾಗಿದ್ದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಕ್ರೈಂ ಬ್ರಾಂಚ್ ಪೊಲೀಸರು ಹೇಳಿದ್ದಾರೆ. ವಿಚಾರಣೆಗಾಗಿ ಕರೆಸಿದ ನಂತರ ಮಂಗಳವಾರ ಬಂಧನವನ್ನು ದಾಖಲಿಸಲಾಗಿದೆ.
ಕರುಮಾಂಕುಳಂ ಮೂಲದ ಆರ್ಎಸ್ಎಸ್ ಕಾರ್ಯಕರ್ತ ಶಬರಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಸೋಮವಾರ ರಾತ್ರಿ ಆತನ ಮನೆಯಿಂದ ಬಂಧಿಸಿದ್ದಾರೆ. ಘಟನೆ ನಡೆದ ದಿನ ಶಬರಿ ಆಶ್ರಮಕ್ಕೆ ಭೇಟಿ ನೀಡಿರುವುದು ತನಿಖೆಯ ವೇಳೆ ಧೃಡಪಟ್ಟಿತ್ತು.