ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಅಂದಾಜು 300 ಅಡಿ ಆಳ ಕಂದಕಕ್ಕೆ ಉರುಳಿಬಿದ್ದ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕರ್ಸೋಗ್ ಎಂಬಲ್ಲಿ ನಡೆದಿದೆ.
ಮಂಡಿಯಿಂದ ಕರ್ಸೋಗ್ಗೆ ತೆರಳುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ, ಅವಘಡ ನಡೆದ ವೇಳೆ 47 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕನಿಷ್ಠ 8 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, 25 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕರ್ಸೋಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ಸೋಗ್ನ ಮಾಮೇಲ್ ಮಂಡಿ ರಸ್ತೆಯ ದೇರಿಧಾರ್ ಬಳಿ ಗುರುವಾರ ಬೆಳಗ್ಗೆ ಘಟನೆ ನಡೆದಿದೆ. ಬಸ್ ಕಂದಕಕ್ಕೆ ಉರುಳಿದ ಸಮಯದಲ್ಲಿ ಎರಡು ಮರಗಳ ನಡುವೆ ಸಿಲುಕಿಕೊಂಡಿದೆ. ಹೀಗಾಗಿ ಭಾರಿ ಅನಾಹುತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಸ್ ಕಂದಕಕ್ಕೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.