- ಈ ಹಿಂದೆ ಮಾನಹಾನಿ ಪ್ರಕರಣದಲ್ಲಿ ಬಿಬಿಸಿ ವಾಹಿನಿಗೆ ಸಮನ್ಸ್ ನೀಡಿದ್ದ ವಿಚಾರಣಾ ನ್ಯಾಯಾಲಯ
- ಗುಜರಾತ್ ಮೂಲದ ಎನ್ಜಿಒ ದೆಹಲಿ ಹೈಕೋರ್ಟ್ನಲ್ಲಿ ವಾಹಿನಿ ವಿರುದ್ಧ ಮಾನಹಾನಿ ಮೊಕದ್ದಮೆ
ಪ್ರಧಾನಿ ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿ ಮಾನಹಾನಿ ಮೊಕದ್ದಮೆಯೊಂದರಲ್ಲಿ ದೆಹಲಿ ಹೈಕೋರ್ಟ್ ಬಿಬಿಸಿ (ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್) ವಾಹಿನಿಗೆ ಸೋಮವಾರ (ಮೇ 22) ಸಮನ್ಸ್ ಜಾರಿ ಮಾಡಿದೆ.
ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವು ನ್ಯಾಯಾಂಗ, ಪ್ರಧಾನಮಂತ್ರಿ ಸೇರಿ ಭಾರತದ ಘನತೆಗೆ ಚ್ಯುತಿಗೆ ಮಸಿ ಬಳಿಯುತ್ತದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಬಿಬಿಸಿ ವಿರುದ್ಧ ಗುಜರಾತ್ ಮೂಲದ ಸರ್ಕಾರೇತರ ಸಂಸ್ಥೆಯೊಂದು (ಎನ್ಜಿಒ) ಮಾನಹಾನಿ ಮೊಕದ್ದಮೆ ದಾಖಲಿಸಿದೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮುರ್ತಿ ಸಚಿನ್ ದತ್ತ ಅವರ ಪೀಠ, ವಾಹಿನಿಗೆ ಸಮನ್ಸ್ ಜಾರಿ ಮಾಡಿದ್ದು ಸೆಪ್ಟೆಂಬರ್ನಲ್ಲಿ ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
“ಸಾಕ್ಷ್ಯಚಿತ್ರವು ಮಾನಹಾನಿಕರ ಆರೋಪಗಳಿಂದ ಕೂಡಿದೆ. ಇದರಿಂದ ರಾಷ್ಟ್ರ, ನ್ಯಾಯಾಂಗ ಹಾಗೂ ಪ್ರಧಾನ ಮಂತ್ರಿ ಘನತೆಗೆ ಕುಂದು ಉಂಟು ಮಾಡುತ್ತದೆ ಎಂದು ಮೊಕದ್ದಮೆ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗಿದೆ” ಎಂದು ಪೀಠ ಹೇಳಿದೆ.
ಸಾಕ್ಷ್ಯಚಿತ್ರದ ಎರಡು ಭಾಗಗಳು ದೇಶ ಹಾಗೂ ನ್ಯಾಯಾಂಗದ ಘನತೆಗೆ ಧಕ್ಕೆ ತಂದಿವೆ ಎಂದು ಎನ್ಜಿಒ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಲ್ವೆ ವಾದಿಸಿದರು.
ಈ ಸುದ್ದಿ ಒದಿದ್ದೀರಾ? ಗುಜರಾತ್ | ಪೂರ್ಣೇಶ್ ಮೋದಿ ಆಯೋಜಿಸಿದ ಮೋದಿ ಸಮಾವೇಶದಲ್ಲಿ ಅಮಿತ್ ಶಾ ಭಾಷಣ
ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿ ಮಾನಹಾನಿ ಪ್ರಕರಣವೊಂದರಲ್ಲಿ ಇತ್ತೀಚೆಗೆ ವಿಚಾರಣಾ ನ್ಯಾಯಾಲಯವೊಂದು ಬಿಬಿಸಿ, ವಿಕಿಪೀಡಿಯಾ ಫೌಂಡೇಷನ್ ಮತ್ತು ಇಂಟರ್ನೆಟ್ ಆರ್ಕೈವ್ಗೆ ಸಮನ್ಸ್ ನೀಡಿತ್ತು.
ಮಾನಹಾನಿ ಮೊಕದ್ದಮೆ ದಾಖಲಿಸಿದ್ದ ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಅವರು ಆರ್ಎಸ್ಎಸ್ ಮತ್ತು ವಿಶ್ವ ಹಿಂದೂ ಪರಿಷತ್ಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನಿರ್ಬಂಧ ವಿಧಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಗುಜರಾತ್ನ ಗೋಧ್ರೋತ್ತರ ಹತ್ಯಾಕಾಂಡದಲ್ಲಿ ಪ್ರಧಾನಿ ಮೋದಿ ಅವರ ಪಾತ್ರದ ಕುರಿತು ಬಿಬಿಸಿಯ ಸಾಕ್ಷ್ಯಚಿತ್ರ ಹೇಳಿತ್ತು. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವು ಸಾಕ್ಷ್ಯಚಿತ್ರದ ಪ್ರಸಾರವನ್ನು ಯೂಟ್ಯೂಬ್, ಟ್ವಿಟರ್ನಲ್ಲಿ ತಡೆ ನೀಡಿತ್ತು. ಬಳಿಕ ನ್ಯಾಯಾಲಯದ ಆದೇಶದ ನಂತರ ನಿಷೇಧ ತೆರವುಗೊಳಿಸಲಾಯಿತು.