- ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ
- ಸೂರತ್ನಲ್ಲಿ ನಡೆಯುತ್ತಿರುವ ಮೋದಿ ಸಮಾಜದ 3ನೇ ಸಮಾವೇಶದಲ್ಲಿ ಅಮಿತ್ ಶಾ ಭಾಗಿ
ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ಅವರ ಸಂಸತ್ ಸ್ಥಾನ ಅನರ್ಹತೆ ಮತ್ತು ಸರ್ಕಾರದಿಂದ ಕೊಟ್ಟಿರುವ ಮನೆ ತೊರೆಯುವಂತೆ ಮಾಡಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿರುವಾತ ಪೂರ್ಣೇಶ್ ಮೋದಿ.
ಇದೀಗ ರಾಹುಲ್ ಗಾಂಧಿ ಜೊತೆಗಿನ ಕಾನೂನು ಸಮರದ ಜೊತೆಗೆ ಸಮುದಾಯವನ್ನು ಜೊತೆಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಜೊತೆಗೂಡಿದ್ದಾರೆ.
ಅಹಮದಾಬಾದ್ನಲ್ಲಿ ಪೂರ್ಣೇಶ್ ಮೋದಿ ಅಧ್ಯಕ್ಷರಾಗಿರುವ ‘ಮೋದಿ ಸಮುದಾಯ’ದ ಸಂಘಟನೆಯೊಂದು ಭಾನುವಾರದಂದು (ಮೇ 21) ಆಯೋಜಿಸಿರುವ ‘ಸಮಸ್ತ ಭಾರತೀಯ ಮೋದಿ ಸಮಾಜ’ ರಾಷ್ಟ್ರೀಯ ಸಮಾವೇಶದಲ್ಲಿ ಅಮಿತ್ ಶಾ ಅವರು ಮೊದಲ ಬಾರಿಗೆ ಭಾಗವಹಿಸಿ ಮಾತನಾಡಲಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2018ರ ಲೋಕಸಭೆ ಚುನಾವಣೆ ಸಂದರ್ಭ ಕರ್ನಾಟಕದಲ್ಲಿ ಪ್ರಚಾರ ನಡೆಸುವ ವೇಳೆ ನೀರವ್ ಮೋದಿ, ಲಲಿತ್ ಮೋದಿ ಹಾಗೂ ದೇಶದ ಬ್ಯಾಂಕ್ಗಳನ್ನು ಕೊಳ್ಳೆಹೊಡೆದು ವಿದೇಶಕ್ಕೆ ಪರಾರಿಯಾದವರನ್ನು ಉಲ್ಲೇಖಿಸಿ, “ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿರುತ್ತದೆ” ಎಂದು ಟೀಕಿಸಿದ್ದರು.
ಈ ಸಂಬಂಧ ರಾಹುಲ್ ಗಾಂಧಿ ಅವರ ವಿರುದ್ಧ ಪೂರ್ಣೇಶ್ ಮೋದಿ ಅವರು ನೀಡಿದ ದೂರನ್ನು ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರ ಲೋಕಸಭೆ ಸದಸ್ಯ ಸ್ಥಾನದಿಂದ ರಾಹುಲ್ ಅವರನ್ನು ಅನರ್ಹಗೊಳಿಸಲಾಗಿತ್ತು.
ಈ ಘಟನೆಯ ನಂತರ ಪೂರ್ಣೇಶ್ ಮೋದಿಯವರು ತಮ್ಮ ಸಂಘಟನೆಯ ಮೂಲಕ ಮೋದಿ ಸಮುದಾಯದ ಸಮಾವೇಶ ನಡೆಸುತ್ತಿರುವುದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಮೋದಿ ಸಮುದಾಯದ ಸಮಾವೇಶ ಈ ಮೊದಲು 2014 ಮತ್ತು 2019ರಲ್ಲಿ ಸೂರತ್ನಲ್ಲಿ ಆಯೋಜನೆಯಾಗಿತ್ತು. ಎರಡು ವರ್ಷವೂ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಈ ಸಮಾವೇಶಗಳು ನಡೆದಿದ್ದವು. ಆದರೆ ಮೊದಲ ಬಾರಿಗೆ ಕೇಂದ್ರದ ನಾಯಕರೊಬ್ಬರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ಪೂರ್ಣೇಶ್ ಮೋದಿ ಅವರು ಈ ಸಮಸ್ತ ಗುಜರಾತ್ ಮೋದಿ ಸಮಾಜದ ಕಾರ್ಯಕಾರಿ ಅಧ್ಯಕ್ಷ. ಅಲ್ಲದೆ ಇವರು ಅಹ್ಮದಾಬಾದ್ ಸಮಾವೇಶದ ಸಹ ಸಂಘಟಕರು. ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹೋದರ ಸಂಭಾಯಿ ಅವರು ಮೋದಿ ಸಮಾಜದ ಅಧ್ಯಕ್ಷರು. ಪೂರ್ಣೇಶ್ ಮೋದಿ ಮತ್ತು ಸಂಭಾಯಿ ಅವರು ಸಮಾವೇಶದಲ್ಲಿ ಮಾತನಾಡಲಿದ್ದಾರೆ.
ಸಮಸ್ತ ಗುಜರಾತ್ ಮೋದಿ ಸಮಾಜ, ಅಖಿಲ ಭಾರತೀಯ ತೇಲಿಕ್-ಸಾಹೂ ಸಮಾಜ, ಶ್ರೀ ಸುರತಿ ಮೋಧ್ ವನಿಕ್ ಸಮಸ್ತ ಪಂಚ, ಭಾರತೀಯ ತೇಲಿಕ್ ಸಾಹೂ ರಾಥೋಡ್ ಮಹಾ ಸಭಾ, ಅಖಿಲ ಭಾರತೀಯ ಸಾಹೂ ವೈಶ್ಯ ಮಹಾ ಸಭಾ, ರಾಷ್ಟ್ರೀಯ ತೇಲಿಕ್ ಸಾಹೂ ಮಹಾ ಸಂಘಟನೆ ಮತ್ತು ಅಖಿಲ ಭಾರತೀಯ ರಾಥೋಡ್ ಕ್ಷತ್ರಿಯ ಮಹಾ ಸಭಾ ಜೊತೆಗೂಡಿ ಈ ಸಮಾವೇಶ ಆಯೋಜಿಸಿವೆ.
“ಮೋದಿ ಸಮುದಾಯದ ಸಮಾವೇಶದಲ್ಲಿ ನಮ್ಮ ಸಮುದಾಯದ ಸಂಸದರು, ಶಾಸಕರು ಮತ್ತು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ದೆಹಲಿ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಇತರ ರಾಜ್ಯಗಳ ಜನರು ಸೇರಿ ಸುಮಾರು 6,500 ಮಂದಿ ಭಾಗವಹಿಸುವ ಸಾಧ್ಯತೆ ಇದೆ” ಎಂದು ಸಂಘಟನಾ ಸಮಿತಿಯ ಸದಸ್ಯ ಜಿಗ್ನೇಶ್ ಮೆಹ್ತಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಜಿ 20 ಶೃಂಗಸಭೆ | ಚೀನಾ ವಿರೋಧಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ
ಪೂರ್ಣೇಶ್ ಮೋದಿ ಅವರು ಸಮಾವೇಶದ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು.