ಉತ್ತರ ಪ್ರದೇಶದಲ್ಲಿ ಪುನಃ ಗುಂಡಿನ ಶಬ್ದ ಅಬ್ಬರಿಸಿದೆ. ಲಖನೌ ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ಕುಖ್ಯಾತ ದರೋಡೆಕೋರ, ಹಲವು ಕೊಲೆಗಳ ಆರೋಪಿ ಸಂಜೀವ್ ಮಹೇಶ್ವರಿ ಅಲಿಯಾಸ್ ‘ಜೀವಾ’ ಎಂಬಾತನನ್ನು ಬುಧವಾರ(ಜೂನ್ 7) ವಕೀಲರ ವೇಷದಲ್ಲಿ ಬಂದಿದ್ದ ಹಂತಕ ಹಾಡ ಹಗಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಮುಜಾಫರ್ ನಗರ ಮೂಲದ ಜೀವಾನನ್ನು 2006 ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಮತ್ತು ಮಾಜಿ ಸಚಿವ ಬ್ರಹ್ಮದತ್ ದ್ವಿವೇದಿ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ದ್ವಿವೇದಿ ಹತ್ಯೆ ಪ್ರಕರಣದಲ್ಲಿ ಇವರಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸಿದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು.
ಜೀವಾ ಇತರ ನಾಲ್ಕು ಕೊಲೆಗಳಲ್ಲಿಯೂ ನಂಟು ಹೊಂದಿದ್ದ. ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅದಾನಿ ಪವರ್ನಿಂದ ವಿದ್ಯುತ್ ಖರೀದಿಸಿದ ನಂತರ ಗುಜರಾತ್ನಲ್ಲಿ ಶೇ.102ರಷ್ಟು ವಿದ್ಯುತ್ ದರ ಏರಿಕೆ
ಕೃಷ್ಣಾನಂದ ರಾಯ್ ಪ್ರಕರಣದಲ್ಲಿ ಜೀವಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯಲಾಗಿತ್ತು. ವಕೀಲರ ವೇಷದಲ್ಲಿದ್ದ ಹಂತಕ ಆರು ಸುತ್ತು ಗುಂಡು ಹಾರಿಸಿದ್ದಾನೆ. ‘ಜೀವಾ’ ವಿರುದ್ಧ 22ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈತ ಮುಖ್ತಾರ್ ಅನ್ಸಾರಿಗೆ ಆಪ್ತನಾಗಿದ್ದ ಎನ್ನಲಾಗಿದೆ.
ಘಟನೆಯ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಕ್ರೋಶ ಹೊರ ಹಾಕಿದ್ದು, ಲಖನೌ ಅತ್ಯಂತ “ಅಸುರಕ್ಷಿತ ನಗರ”ಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ನಗರವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತವಾಗಿದೆ. ಲಖನೌದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇಬ್ಬರು ಹೊಣೆಗಾರರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಆತನ ಸೋದರನನ್ನು ಪತ್ರಕರ್ತರ ವೇಷದಲ್ಲಿ ಆಗಮಿಸಿದ್ದ ಹಂತಕರು ಹತ್ಯೆ ಮಾಡಿದ್ದರು.