ʻಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ರಾತ್ರಿ ನನಗೆ ನಿದ್ದೆ ಬರಲಿಲ್ಲʼ ಎಂದು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್ ಹೇಳಿದ್ದಾರೆ.
ಕೇರಳದ ಫೋರ್ಟ್ ಕೊಚ್ಚಿಯಲ್ಲಿ ನಡೆದ ಯುವ ಸಾಹಿತ್ಯೋತ್ಸವ ಕಾರ್ಯಕ್ರಮ ‘ಯುವಧಾರ’ದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಲೇಖಕಿ, ಕೇರಳದಲ್ಲಿ ಬಿಜೆಪಿ ನಮಗೊಂದು ಅವಕಾಶ ಕೊಡಿ ಎಂದು ಕೇಳುತ್ತಿದೆ. ಇದು ಉರುವಲು ಬೆಂಕಿಯನ್ನು ಕೇಳಿದ ರೀತಿಯಲ್ಲಿದೆ. ನೀವೇನಾದರೂ ಬಿಜೆಪಿಗೆ ಅವಕಾಶ ನೀಡಿದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಖ್ಯಾತ ಲೇಖಕಿ ಅರುಂಧತಿ ರಾಯ್ ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಅಧಿಕಾರ ಹೊಂದಿದ್ದ ಏಕೈಕ ರಾಜ್ಯ ಕರ್ನಾಟಕವನ್ನು ಇದೀಗ ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯನ್ನು ದೂರವಿಡುವುದನ್ನು ಕೇರಳ ಮುಂದುವರಿಸಬೇಕು ಎಂದು ರಾಯ್ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಕೇರಳ ಭೇಟಿಯ ಸಂದರ್ಭದಲ್ಲಿ ಚರ್ಚ್ ಮುಖ್ಯಸ್ಥರು ಅವರನ್ನು ಸ್ವಾಗತಿಸಿ ಚರ್ಚೆ ನಡೆಸಿರುವುದಕ್ಕೆ ರಾಯ್ ಬೇಸರ ವ್ಯಕ್ತಪಡಿಸಿದ್ದಾರೆ.
ʻಚರ್ಚ್ನ ಮುಖ್ಯಸ್ಥರು ಪ್ರಧಾನಿಯವರನ್ನು ಭೇಟಿಯಾಗುವುದನ್ನು ನೋಡಿದಾಗ ದೇಶದಲ್ಲಿ ಏನಾಗುತ್ತಿದೆ ಎಂಬುದರ ಅರಿವು ಅವರಿಗೆ ಇಲ್ಲದಾಯಿತೆ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಮಣಿಪುರ ಛತ್ತೀಸ್ಗಢ ಹಾಗೂ ಜಾರ್ಖಂಡ್ನಲ್ಲಿ ಕ್ರಿಶ್ಚಿಯನ್ನರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ? ಕಳೆದ ಎರಡು ವರ್ಷಗಳಲ್ಲಿ ಕ್ರಿಶ್ಚಿಯನ್ ಚರ್ಚ್ಗಳ ಮೇಲೆ 300 ದಾಳಿಗಳು ನಡೆದಿವೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಅನುಯಾಯಿಗಳಿಗೆ ಏನು ಉತ್ತರ ಕೊಡುತ್ತೀರಿ?ʼ ಎಂದು ರಾಯ್ ಪ್ರಶ್ನಿಸಿದ್ದಾರೆ.