- ಒಡಿಶಾ ರೈಲು ದುರಂತ ಅವಘಡದಲ್ಲಿ 288 ಮಂದಿ ಸಾವು
- ದುರಂತದ ತನಿಖೆ ನ್ಯಾಯಾಂಗದ ಮೇಲ್ವಿಚಾರಣೆ ಕೋರಿ ಅರ್ಜಿ
ಒಡಿಶಾ ರೈಲು ದುರಂತ ಘಟನೆಯಲ್ಲಿ ಮೃತರ ಸಂಖ್ಯೆ ಏರುತ್ತಿದೆ. ಇನ್ನೊಂದೆಡೆ ಬಾಲಾಸೋರ್ನಲ್ಲಿ ಸಂಭವಿಸಿದ ಅವಘಡದಿಂದ ರೈಲ್ವೆ ಹಳಿಗಳು ಕಿತ್ತು ಹೋಗಿವೆ. ಇದರಿಂದ ಇತರ ರೈಲುಗಳ ಸಂಚಾರ ರದ್ದುಗೊಂಡಿದೆ. ಈ ಹಳಿಗಳ ಜೋಡಣೆ ಕಾರ್ಯ ಈಗ ಭರದಿಂದ ಸಾಗಿದೆ.
ಎರಡು ಪ್ರಯಾಣಿಕ ರೈಲು ಮತ್ತು ಸರಕು ಸಾಗಣೆ ರೈಲಿನ ನಡುವೆ ಶುಕ್ರವಾರ (ಜೂನ್ 2) ರಾತ್ರಿ ಭೀಕರ ಅವಘಡ ಸಂಭವಿಸಿದೆ. ಇದರಿಂದ 288 ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದು ಸುಮಾರು 803 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭೀಕರ ರೈಲು ದುರಂತದಲ್ಲಿ ರೈಲ್ವೆ ಬೋಗಿಗಳು ಒಂದರ ಮೇಲೊಂದರಂತೆ ಆಟಿಕೆಗಳಂತೆ ಉರುಳಿ ಬಿದ್ದಿದ್ದು ಒಡಿಶಾ ರೈಲು ದುರಂತ ಬಗ್ಗೆ ದೇಶಾದ್ಯಂತ ಗಣ್ಯರು ಕಂಬಿನಿ ಮಿಡಿದಿದ್ದಾರೆ.
ಸರಕು ಸಾಗಣೆ ರೈಲಿನ ಎರಡು ಬೋಗಿಗಳೂ ಸೇರಿದಂತೆ ಪ್ರಯಾಣಿಕ ರೈಲುಗಳ ಮಗುಚಿ ಬಿದ್ದ ಬೋಗಿಗಳನ್ನು ಹೊರತೆಗೆಯಲಾಗಿದೆ. ಒಂದು ಕಡೆಯಿಂದ ರೈಲ್ವೆ ಹಳಿಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಶೀಘ್ರ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಆದಿತ್ಯ ಕುಮಾರ್ ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿದರು.
ಬಾಲಾಸೋರ್ನಲ್ಲಿ ರೈಲು ಹಳಿ ಮರು ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಘಟನಾ ಸ್ಥಳದಲ್ಲಿ ಮರು ನಿರ್ಮಾಣ ಕಾರ್ಯವನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.
ಒಡಿಶಾ ರೈಲು ದುರಂತ ಸಂಭವಿಸಿ ಉಂಟಾಗಿರುವ ಅವಘಡದಲ್ಲಿ ಗಾಯಗೊಂಡವರನ್ನು ತೆರವುಗೊಳಿಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಒಡಿಶಾ ವಿಪತ್ತು ನಿರ್ವಹಣಾ ಪಡೆ (ಒಡಿಆರ್ಎಫ್) ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಮೃತರ ಹಾಗೂ ಗಾಯಗೊಂಡವರ ತೆರವು ಕಾರ್ಯಾಚರಣೆಗೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ.
ಬಾಲಾಸೋರ್ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚು ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್, ಕೋರೊಮಂಡಲ್ ಎಕ್ಸ್ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದ ಸಾವು-ನೋವಿನ ಹಿನ್ನೆಲೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಾಜ್ಯದಲ್ಲಿ ಶನಿವಾರ ಶೋಕಾಚರಣೆ ಘೋಷಿಸಿದರು.
“ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಎನ್ಡಿಆರ್ಎಫ್, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ (ಒಡಿಆರ್ಎಫ್), ಅಗ್ನಿಶಾಮಕ ದಳ ಸಿಬ್ಬಂದಿ ತೊಡಗಿದ್ದಾರೆ. ರೈಲು ಬೋಗಿಗಳಡಿ ಸಿಲುಕಿರುವವರ ರಕ್ಷಿಸುವ ಹಾಗೂ ಮೃತದೇಹಗಳ ತೆರವು ಕಾರ್ಯ ಶನಿವಾರದವರೆಗೆ ನಡೆಯಿತು” ಎಂದು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ.ಜೇನಾ ತಿಳಿಸಿದರು.
ಒಡಿಶಾ ರೈಲು ದುರಂತ ಹಿನ್ನೆಲೆ ಇದುವರೆಗೆ 48 ರೈಲುಗಳನ್ನು ರದ್ದುಗೊಳಿಸಲಾಗಿದೆ.
ನಿಲ್ದಾಣದಲ್ಲಿಯೇ ಕಾಯುತ್ತಿರುವ ವಲಸೆ ಕಾರ್ಮಿಕರು
ಒಡಿಶಾದಲ್ಲಿ ಸಂಭವಿಸಿರುವ ರೈಲು ದುರಂತದಿಂದ ಹೌರಾ ಮತ್ತು ನೆರೆಯ ಪ್ರದೇಶಗಳ ರೈಲು ಸಂಚಾರ ರದ್ದುಗೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ದುಡಿಯುತ್ತಿರುವ ಅಲ್ಲಿಯ ನೂರಾರು ಕಾರ್ಮಿಕರು ತಮ್ಮ ಊರಿಗೆ ಹಿಂತಿರುಗಲಾಗದೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿಯೇ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ.
ಅಸಂಖ್ಯ ವಲಸೆ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಿಂದ ಹೌರಾ ಮತ್ತು ಇತರ ಸ್ಥಳಗಳಿಗೆ ತೆರಳುತ್ತಿದ್ದರು. ಈ ವೇಳೆ ಸಂಭವಿಸಿದ ಅವಘಢದಲ್ಲಿ ನೂರಾರು ಮಂದಿ ಅಸುನೀಗಿದ್ದಾರೆ. ಇನ್ನೂ ಅನೇಕ ಕಾರ್ಮಿಕರು ತಮ್ಮ ಊರಿಗೆ ಹಿಂತಿರುಗಲು ರೈಲ್ವೆ ನಿಲ್ದಾಣದಲ್ಲಿಯೇ ಕಾಯುವಂತಾಗಿದೆ.
“ನಾವು ಬೆಳಿಗ್ಗೆ 8 ಗಂಟೆಯಿಂದ ರೈಲಿಗಾಗಿ ಕಾಯುತ್ತಿದ್ದೇವೆ. ಆದರೆ ರೈಲು ರದ್ದಾಗಿರುವುದು ನಮಗೆ ತಿಳಿದಿಲ್ಲ. ಭಾನುವಾರದ ರೈಲ್ವೆ ಸಂಚಾರದ ಬಗ್ಗೆಯೂ ನಮಗೆ ಮಾಹಿತಿಯಿಲ್ಲ. ನಿಲ್ದಾಣದಲ್ಲಿಯ ಅಧಿಕಾರಿಗಳಿಗೂ ಯಾವ ಮಾಹಿತಿಯೂ ಇಲ್ಲ” ಎಂದು ಜಾರ್ಖಂಡ್ನಿಂದ ನಗರಕ್ಕೆ ಬಂದ ವಲಸೆ ಕಾರ್ಮಿಕರೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಈ ಸುದ್ದಿ ಓದಿದ್ದೀರಾ? ಕುಸ್ತಿಪಟುಗಳ ಪ್ರತಿಭಟನೆ | ಬ್ರಿಜ್ ಭೂಷಣ್ ಬಂಧನಕ್ಕೆ ಜೂನ್ 9ರ ಗಡುವು
ಒಡಿಶಾ ರೈಲು ದುರಂತ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಭಾನುವಾರ (ಮೇ 4) ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಬಾಲಾಸೋರ್ನಲ್ಲಿ ಸಂಭವಿಸಿರುವ ತ್ರಿವಳಿ ರೈಲು ದುರಂತದ ಬಗ್ಗೆ ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿ ದುರಂತದ ಹಿಂದಿರುವ ಕಾರಣ ಪತ್ತೆ ಹಚ್ಚಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.