ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್, ರಾಜಕೀಯ ವಿಜ್ಞಾನ ಪಠ್ಯಕ್ರಮದಿಂದ ಕವಿ ಮೊಹಮ್ಮದ್ ಇಕ್ಬಾಲ್ ಅವರ ಪಠ್ತಕ್ರಮ ತೆಗೆದುಹಾಕುವ ನಿರ್ಣಯವನ್ನು ಅಂಗೀಕರಿಸಿದೆ. ಮೊಹಮ್ಮದ್ ಇಕ್ಬಾಲ್ ಅವರು ಪ್ರಸಿದ್ಧ ದೇಶಭಕ್ತಿ ಗೀತೆ “ಸಾರೆ ಜಹಾನ್ ಸೆ ಅಚ್ಛಾ” ರಚಿಸಿದ್ದರು.
ದೆಹಲಿ ವಿಶ್ವವಿದ್ಯಾಲಯದ 1014ನೇ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಪದವಿಪೂರ್ವ ಕೋರ್ಸ್ ಕುರಿತ ಚರ್ಚೆಯ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿವಿಯ ಉಪಕುಲಪತಿ ಪ್ರೊಫೆಸರ್ ಯೋಗೇಶ್ ಸಿಂಗ್ ಹೇಳಿದ್ದಾರೆ.
ಉಪಕುಲಪತಿಗಳ ಪ್ರಸ್ತಾವನೆಯನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿತು. ಸಭೆಯಲ್ಲಿ, ಪದವಿಪೂರ್ವ ಪಠ್ಯಕ್ರಮ ರಚನೆ (ಯುಜಿಸಿಎಫ್) 2022 ರಡಿಯಲ್ಲಿ ವಿವಿಧ ಕೋರ್ಸ್ಗಳ ನಾಲ್ಕು, ಐದನೇ ಮತ್ತು ಆರನೇ ಸೆಮಿಸ್ಟರ್ಗಳ ಪಠ್ಯಕ್ರಮದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಉಪಕುಲಪತಿಗಳು ಡಾ. ಬಿ ಆರ್ ಅಂಬೇಡ್ಕರ್ ಮತ್ತು ಇತರರ ಬೋಧನೆಗೆ ಒತ್ತು ನೀಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
“ರಾಜಕೀಯ ವಿಜ್ಞಾನದ ಪಠ್ಯಕ್ರಮದಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಪ್ರಸ್ತಾಪವನ್ನು ತರಲಾಯಿತು. ಪ್ರಸ್ತಾಪದ ಪ್ರಕಾರ, ಪಠ್ಯಕ್ರಮದಿಂದ ಇಕ್ಬಾಲ್ ಅವರ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಇದು ಸ್ಥಾಯಿ ಸಮಿತಿಯ ಸಲಹೆಯಾಗಿದ್ದು, ಇದನ್ನು ದೆಹಲಿ ವಿವಿಯ ಉಪಕುಲಪತಿ ಅವರು ಅಕಾಡೆಮಿಕ್ ಕೌನ್ಸಿಲ್ ಕೈಗೊಂಡ ನಿರ್ಧಾರದಂತೆ ಅನುಮೋದಿಸಿದ್ದಾರೆ” ಎಂದು ಶೈಕ್ಷಣಿಕ ಪರಿಷತ್ತಿನ ಸದಸ್ಯರೊಬ್ಬರು ತಿಳಿಸಿದ್ದಾರೆ.
ಮೊಹಮ್ಮದ್ ಇಕ್ಬಾಲ್ ಅವರು 1877 ರಲ್ಲಿ ಅವಿಭಜಿತ ಭಾರತದಲ್ಲಿ ಜನಿಸಿದರು. ಅವರಿಗೆ ಸಂಬಂಧಿಸಿದ ‘ಮಾಡರ್ನ್ ಇಂಡಿಯನ್ ಪೊಲಿಟಿಕಲ್ ಥಾಟ್’ ಶೀರ್ಷಿಕೆಯ ಅಧ್ಯಾಯಯು ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ)ನ ಆರನೇ ಸೆಮಿಸ್ಟರ್ ಪತ್ರಿಕೆಯ ಭಾಗವಾಗಿತ್ತು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಸಂಸದ ಬ್ರಿಜ್ಭೂಷಣ್ನನ್ನು ತಕ್ಷಣ ಬಂಧಿಸಿ: ರಾಮ್ದೇವ್
ಮೊಘಲರು, ಡಾರ್ವಿನ್ ಸಿದ್ಧಾಂತ ಕೈಬಿಟ್ಟಿರುವ ಎನ್ಸಿಇಆರ್ಟಿ
ಶಿಕ್ಷಣ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಪರಿಷತ್ತು(ಎನ್ಸಿಇಆರ್ಟಿ) ಮೊಘಲರ ಕಾಲದ ಪಠ್ಯ ಮತ್ತು ಭಾರತದ ಮುಸ್ಲಿಂ ಆಡಳಿತಗಾರರ ಕುರಿತ ಹಲವು ಪಠ್ಯಗಳನ್ನು ಕಡಿತಗೊಳಿಸಿದೆ. ತುಘಲಕ್, ಖಲ್ಜಿ ಮತ್ತು ಲೋದಿ ಮತ್ತು ಮೊಘಲ್ ಸಾಮ್ರಾಜ್ಯ ಸೇರಿದಂತೆ ಹಲವು ರಾಜವಂಶಗಳಿಂದ ಆಳಲ್ಪಟ್ಟ ದೆಹಲಿ ಸುಲ್ತಾನರ ಹಲವಾರು ಪುಟಗಳನ್ನು 7 ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಿಂದ ತೆಗೆದುಹಾಕಲಾಗಿದೆ.
7ನೇ ತರಗತಿಯ ಪಠ್ಯಪುಸ್ತಕದಲ್ಲಿನ ಮೊಘಲ್ ಸಾಮ್ರಾಜ್ಯದ ಅಧ್ಯಾಯ, ಹುಮಾಯೂನ್, ಷಹಜಹಾನ್, ಬಾಬರ್, ಅಕ್ಬರ್, ಜಹಾಂಗೀರ್ ಮತ್ತು ಔರಂಗಜೇಬ್ರಂತಹ ಮೊಘಲ್ ಚಕ್ರವರ್ತಿಗಳ ಸಾಧನೆ ವಿವರಿಸುವ ಎರಡು ಪುಟಗಳ ಮಾಹಿತಿಯನ್ನು ಕಡಿತಗೊಳಿಸಲಾಗಿದೆ.
ಅದೇ ರೀತಿ 9 ಮತ್ತು 10ನೇ ತರಗತಿಗಳ ವಿಜ್ಞಾನ ಪಠ್ಯಪುಸ್ತಕಗಳ ಚಾರ್ಲ್ಸ್ ಡಾರ್ವಿನ್ ಅವರಿಗೆ ಸಂಬಂಧಿಸಿದ ಭೂಮಿಯ ಮೇಲಿನ ಜೀವಿಗಳ ಮೂಲ, ಜೀವವಿಕಾಸ, ವಿಕಸನೀಯ ಸಂಬಂಧಗಳ ಪತ್ತೆಹಚ್ಚುವಿಕೆ, ಮಾನವ ವಿಕಸನ ಇತ್ಯಾದಿ ಪಠ್ಯಗಳನ್ನು ಕೈಬಿಡಲಾಗಿದೆ.
ಚಾರ್ಲ್ಸ್ ಡಾರ್ವಿನ್ ಅವರ ವಿಕನಸ ಸಿದ್ಧಾಂತವನ್ನು ಕೈಬಿಟ್ಟಿರುವುದನ್ನು ಖಂಡಿಸಿ ಭಾರತದಾದ್ಯಂತ ಸುಮಾರು 1,800 ಕ್ಕೂ ಹೆಚ್ಚು ವಿಜ್ಞಾನಿಗಳು, ಶಿಕ್ಷಕರು ಮತ್ತು ವಿಜ್ಞಾನ ಲೇಖಕರು ಎನ್ಸಿಇಆರ್ಟಿಗೆ ಪತ್ರ ಬರೆದಿದ್ದರು.