ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಯೋಗ ಗುರು ರಾಮ್ದೇವ್, ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
“ಕುಸ್ತಿ ಫಡರೇಷನ್ ಅಧ್ಯಕ್ಷರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ದೇಶದ ಕುಸ್ತಿಪಟುಗಳು ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ನ್ಯಾಯ ದೊರಕಿಸದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ವ್ಯಕ್ತಿಯನ್ನು ತಕ್ಷಣ ಬಂಧಿಸಿ ಜೈಲಿಗೆ ಕಳಿಸಿ. ಈತ ನಿತ್ಯ ಕುಸ್ತಿಪಟುಗಳ ಬಂಧುಗಳ ಬಗ್ಗೆ ಮನಬಂದಂತೆ ಅಸಂಬದ್ಧವಾಗಿ ಮಾತನಾಡುತ್ತಿರುತ್ತಾನೆ. ಇದು ಖಂಡಿತಾ ಮನ್ನಿಸಲಾಗದ ದುಷ್ಕೃತ್ಯ” ಎಂದು ತಿಳಿಸಿದ್ದಾರೆ.
ರಾಜಸ್ಥಾನದ ಭಿಲ್ವಾರಾದಲ್ಲಿ ಮೂರು ದಿನಗಳ ಯೋಗ ಶಿಬಿರದಲ್ಲಿದ್ದ ರಾಮ್ದೇವ್, ದೆಹಲಿ ಪೊಲೀಸರು ಬ್ರಿಜ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರವೂ ಅವರನ್ನು ಬಂಧಿಸದಿರುವ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದಾಗ, “ನಾನು ಒಂದು ಹೇಳಿಕೆಯನ್ನು ಮಾತ್ರ ನೀಡಬಲ್ಲೆ. ನನ್ನಿಂದ ಆತನನ್ನು ಜೈಲಿಗೆ ಕಳಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಈ ಕೆಲಸ ಮಾಡಬೇಕಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೊಬೈಲ್ಗಾಗಿ 1500 ಎಕರೆ ಭೂಮಿಗೆ ಬೇಕಿದ್ದ 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಅಧಿಕಾರಿ!
“ನಾನು ಎಲ್ಲಾ ಪ್ರಶ್ನೆಗಳಿಗೆ ರಾಜಕೀಯವಾಗಿ ಉತ್ತರಿಸುವ ಸಾಮರ್ಥ್ಯ ಹೊಂದಿದ್ದೇನೆ. ನಾನು ಬೌದ್ಧಿಕವಾಗಿ ದಿವಾಳಿಯಲ್ಲ. ನನಗೆ ದೇಶದ ಬಗ್ಗೆ ದೂರದೃಷ್ಟಿ ಇದೆ. ನಾನು ರಾಜಕೀಯ ದೃಷ್ಟಿಕೋನದಿಂದ ಹೇಳಿಕೆಗಳನ್ನು ನೀಡಿದಾಗ, ವಿಷಯವು ಗಂಭೀರ ಸ್ವರೂಪ ತೆಗೆದುಕೊಳ್ಳುತ್ತದೆ. ಪ್ರತಿಫಲ ದೊರೆಯುತ್ತದೆ” ಎಂದು ರಾಮದೇವ್ ಹೇಳಿದ್ದಾರೆ.
ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಬ್ರಿಜ್ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಏಪ್ರಿಲ್ 23 ರಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿದ್ದಾರೆ.
ದೆಹಲಿ ಪೊಲೀಸರು ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಮೊದಲ ಎಫ್ಐಆರ್ ಅಪ್ರಾಪ್ತ ಕುಸ್ತಿಪಟುವಿನ ಆರೋಪಗಳಿಗೆ ಸಂಬಂಧಿಸಿ ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದರೆ, ಎರಡನೆಯದು ಅಸಭ್ಯ ವರ್ತನೆಯಡಿ ದಾಖಲಿಸಲಾಗಿದೆ.
ಎರಡು ದಿನಗಳ ಹಿಂದಷ್ಟೆ ಬಾಬಾ ರಾಮ್ದೇವ್ ಈ ವಿಷಯದ ಬಗ್ಗೆ ಮಾತನಾಡಿ, ಕಾನೂನನ್ನು ದುರುಪಯೋಗಪಡಿಸಲಾಗುತ್ತಿದ್ದು, ದಾರ್ಶನಿಕರ ನೇತೃತ್ವದಲ್ಲಿ ನ್ಯಾಯ ಪಡೆಯಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಹೇಳಿದ್ದರು.