ಇಬ್ಬರು ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ ಅವರ ಗುದದ್ವಾರದಲ್ಲಿ ಮೆಣಸಿನಕಾಯಿ ಇಟ್ಟು ಅಮಾನುಷವಾಗಿ ಚಿತ್ರ ಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಕೊಂಕಟಿ ಚೌರಾಹಾ ಪಟ್ಟಣದಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯದಲ್ಲಿರುವಂತೆ ಕಳ್ಳತನದ ಆರೋಪದ ಮೇಲೆ 15 ಮತ್ತು 10 ವರ್ಷದ ಇಬ್ಬರು ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ ಗುದದ್ವಾರದಲ್ಲಿ ಮೆಣಸಿನಕಾಯಿ ಉಜ್ಜಿ ಚಿತ್ರಹಿಂಸೆ ನಿಡಲಾಗಿದೆ. ಜೊತೆಗೆ ಕೆಲವು ಅಪರಿಚಿತ ಚುಚ್ಚುಮದ್ದನ್ನು ಸಹ ಅವರಿಗೆ ನೀಡಲಾಗಿದೆ.
ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿಗಳು ಇಬ್ಬರು ಅಪ್ರಾಪ್ತರನ್ನು ನಿಂದಿಸುತ್ತಿರುವುದನ್ನು ನೋಡಬಹುದು.
ಈ ಸುದ್ದಿ ಓದಿದ್ದೀರಾ? ಜೈಪುರ | ಪತಿಯಿಂದ ಲಂಚ ಸ್ವೀಕಾರ: ಜೈಪುರ ಮೇಯರ್ ವಜಾ
ಸ್ಥಳೀಯ ಗೂಂಡಾಗಳೆಂದು ಗುರುತಿಸಲಾದ ಆರೋಪಿಗಳು ಅಪ್ರಾಪ್ತರ ಖಾಸಗಿ ಭಾಗಗಳಿಗೆ ಹಸಿರು ಮೆಣಸಿನಕಾಯಿ ಇಟ್ಟು ಉಚ್ಚಿದ ನಂತರ ಬಲವಂತವಾಗಿ ಮಕ್ಕಳಿಗೆ ಮೂತ್ರ ಕುಡಿಸಿದ್ದಾರೆ.
ವಿಡಿಯೋದಲ್ಲಿರುವಂತೆ ಮಕ್ಕಳಿಬ್ಬರಿಗೆ ಚುಚ್ಚುಮದ್ದು ನೀಡುತ್ತಿರುವಾಗ ಅವರು ಬೇಡ ಎಂದು ಕೈಗಳನ್ನು ಅಡ್ಡ ಇಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಪತ್ರಾ ಠಾಣಾ ಪ್ರದೇಶದ ಕೊಂಕಟಿ ಚೌಕ್ ಪ್ರದೇಶದಲ್ಲಿ ಆಗಸ್ಟ್ 4ರಂದು ಅರ್ಶನ್ ಎಂಬ ಕೋಳಿ ಮಾಂಸದಂಗಡಿಯಿಂದ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.
ಮತ್ತೊಂದು ವಿಡಿಯೋದಲ್ಲಿ, ಹುಡುಗರು ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು, ಪ್ಯಾಂಟನ್ನು ಕೆಳಕ್ಕೆ ಎಳೆದುಕೊಂಡು ನೆಲದ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಒಬ್ಬ ವ್ಯಕ್ತಿ ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿದ್ದಾನೆ. ನೋವಿನಿಂದ ಬಾಲಕರು ಚೀರಾಡುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ವಿಡಿಯೋದ ಬಗ್ಗೆ ತಿಳಿದ ನಂತರ, ಸಿದ್ಧಾರ್ಥ ನಗರದ ಪೊಲೀಸರು ದಾಖಲಿಸಿರುವ ದೂರಿನ ಆಧಾರದ ಮೇಲೆ ಹಲ್ಲೆ ನಡೆಸಿದ 6 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕಾನೂನಿನ ಸಂಬಂಧಿತ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ತಿಳಿಸಿದ್ದಾರೆ.