ನೆರೆಯ ಕೇರಳದಲ್ಲಿ ಕೊರೋನಾದಿಂದ ಓರ್ವ ರೋಗಿ ಸಾವನ್ನಪ್ಪಿದ್ದ ಪ್ರಕರಣ ಸುದ್ದಿಯಾಗುತ್ತಿದ್ದಂತೆಯೇ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಕಳೆದ ಐದು ದಿನಗಳ ಹಿಂದೆ ಬೆಂಗಳೂರಿನಲ್ಲೂ ಕೂಡ ಓರ್ವ ರೋಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಡಿ.15ರಂದು ಅಂದರೆ ಐದು ದಿನಗಳ ಹಿಂದೆಯಷ್ಟೇ ಕೊರೋನಾ ವೈರಸ್ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 64 ವರ್ಷದ ರೋಗಿಯೋರ್ವರಿಗೆ ಕೊರೋನಾ ಜೊತೆ ನಾನಾ ಕಾಯಿಲೆಗಳು ಕೂಡ ಇದ್ದವು” ಎಂದು ತಿಳಿಸಿದ್ದಾರೆ.
ಕೇಂದ್ರದ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಅದರಲ್ಲಿ ಗುಂಡೂರಾವ್ ಕೂಡ ಭಾಗವಹಿಸಿದ್ದರು. ಸಭೆಯ ನಂತರ ವಿಕಾಸ ಸೌಧದಲ್ಲಿ ಮಾಧ್ಯಮಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ.
#WATCH Bengaluru: On Covid-19, Karnataka Health Minister Dinesh Gundu Rao says, “We held a discussion with Union Health Minister Mansukh Mandaviya and they have asked us to continue preparations, increasing of testing & monitoring…He said there is no need to panic…There are… pic.twitter.com/fD7YienJks
— ANI (@ANI) December 20, 2023
“ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ನಿವಾಸಿಯೋರ್ವರಿಗೆ ಕೊರೋನಾ ಜೊತೆ ಬೇರೆ ಬೇರೆ ಕಾಯಿಲೆಗಳು ಕೂಡ ಇದ್ದವು. ಟಿಬಿ, ಬಿಪಿ ಸೇರಿದಂತೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನಡುವೆ ಕೊರೋನಾ ಪಾಸಿಟಿವ್ ಕೂಡ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಐದು ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ” ಎಂದು ತಿಳಿಸಿದರು.
“ಮೃತ ವ್ಯಕ್ತಿಯ ಕುಟುಂಬದಲ್ಲಿ ಒಟ್ಟು 5 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ವೇಳೆ ಐವರಿಗೂ ನೆಗೆಟಿವ್ ಬಂದಿದೆ. ಸದ್ಯ ಐದು ಜನರು ಕೂಡ ಕ್ವಾರಂಟೈನ್ನಲ್ಲಿದ್ದಾರೆ. ಮೃತಪಟ್ಟ ವ್ಯಕ್ತಿಯ ಜೆನೆಮಿಕ್ ಸೀಕ್ವೆನ್ಸ್ ವರದಿಗಾಗಿ ಬಿಬಿಎಂಪಿ ಕಾಯುತ್ತಿದೆ” ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
“ಮೂರು ತಿಂಗಳಿಂದ ಕೊರೋನಾ ಹೆಚ್ಚಾಗಿದೆ. ಆಗಸ್ಟ್ನಲ್ಲಿ ಕೊರೋನಾ ಉಪತಳಿ ಜೆಎನ್1 ಕಾಣಿಸಿಕೊಂಡಿದೆ. ವೇಗವಾಗಿ ಹಬ್ಬುವ ವೈರಾಣು ಇದಾಗಿದ್ದು, ಒಮಿಕ್ರಾನ್ ರೀತಿಯಲ್ಲಿ ವರ್ತನೆ ಇದೆ. ತೀರಾ ಹಾನಿಕಾರಿ ವೈರಾಣು ಅಲ್ಲ. ದೇಶದಲ್ಲಿ ಇಂಥದ್ದು 20 ಪ್ರಕರಣಗಳಿವೆ. ಕರ್ನಾಟಕ ಅತಿ ಹೆಚ್ಚು ಟೆಸ್ಟಿಂಗ್ ಮಾಡುತ್ತಿದ್ದೇವೆ. ದೇಶದಲ್ಲಿ ಹೆಚ್ಚು ಟೆಸ್ಟಿಂಗ್ ನಮ್ಮಲ್ಲೇ ಸದ್ಯ ನಡೆಯುತ್ತಿದೆ. 772 ಮಂಗಳವಾರ ಒಂದೇ ದಿನ ಟೆಸ್ಟಿಂಗ್ ಮಾಡಿದ್ದೇವೆ” ಎಂದು ಹೇಳಿದರು.
“ಕೇಂದ್ರದ ಪ್ರಕಾರ 36 ರಾಷ್ಟ್ರಗಳಲ್ಲಿ ಈ ಉಪತಳಿ ಬಂದಾಗಿದೆ. ಆಕ್ಸಿಜನ್ ಸರಬರಾಜು, ಐಸೋಲೇಷನ್ ಬಗ್ಗೆ ನಿಗಾ ವಹಿಸಲು ಇಂದಿನ ಸಭೆಯಲ್ಲಿ ಎಲ್ಲ ರಾಜ್ಯಗಳಿಗೆ ಸೂಚನೆ ಕೊಟ್ಟಿದ್ದಾರೆ. ವೆಂಟಿಲೇಟರ್ ನಿರ್ವಹಣೆ ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರದ ನೆರವು ಕೋರಿದ್ದೇವೆ. ಕೇರಳ ಸಚಿವರು ಕೂಡ ಮಾತನಾಡಿದ್ದಾರೆ. ಕೇರಳದಲ್ಲಿ ಈವರೆಗೆ ಐದು ಜನ ಸಾವನ್ನಪ್ಪಿದ್ದಾರೆ” ಎಂದು ಗುಂಡೂರಾವ್ ತಿಳಿಸಿದ್ದಾರೆ.
“ನಾಳೆ ಸಿಎಂ ಜೊತೆ ಸಭೆ ಇದೆ. ಹೆಚ್ಚು ಜನಜಂಗುಳಿ ಇರುವ ಭಾಗದಲ್ಲಿ ಮಾಸ್ಕ್ ಧರಿಸಿ, ಕುಟುಂಬಸ್ಥರ ಹೋಂ ಐಸೋಲೇಷನ್ ಬಿಬಿಎಂಪಿ ಮಾಡಲಿದೆ. ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳಿಗೂ ಮಾಹಿತಿ ಕೊಟ್ಟಿದ್ದೇವೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.