- ಕೆ ಎಸ್ ಈಶ್ವರಪ್ಪ ಎದುರು ಬಂಡಾಯ ಸಾರಿದ ಆಯನೂರು ಮಂಜುನಾಥ್
- ಹಿರಿಯ ನಾಯಕರ ಕಾದಾಟಕ್ಕೆ ಸಾಕ್ಷಿಯಾಗತ್ತಾ ಶಿವಮೊಗ್ಗ ನಗರ ಕ್ಷೇತ್ರ?
ಶಿವಮೊಗ್ಗ ಬಿಜೆಪಿಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಂಡಾಯ ದ ಬಹು ದೊಡ್ಡ ಶಾಕ್ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಿರುವ ಅವರು ತಮ್ಮದೇ ಪಕ್ಷ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಎದುರು ಬಂಡಾಯ ಸಾರಿದ್ದು ಅವರಿಗೆ ಪ್ರತಿಸ್ಪರ್ಧಿಯಾಗುವ ಘೋಷಣೆ ಮಾಡಿದ್ದಾರೆ.
ಈ ಸಲುವಾಗಿ ಆಯನೂರು ಮಂಜುನಾಥ್ ತಮ್ಮ ವಿಧಾನಪರಿಷತ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ್, ನಾನು ರಾಜೀನಾಮೆ ಕೊಟ್ಟು ಕೆ.ಎಸ್ ಈಶ್ವರಪ್ಪ ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡುತ್ತೇನೆ.
ಮಾಜಿ ಸಚಿವ ಈಶ್ವರಪ್ಪ ಸವಾಲನ್ನ ಸ್ವೀಕಾರ ಮಾಡುತ್ತೇನೆ. ಕೆಎಸ್ ಈಶ್ವರಪ್ಪ ಸಮರ್ಥರಿದ್ದರೇ ನನ್ನನ್ನ ಎದುರಿಸಲಿ ಎಂದು ಸವಾಲು ಹಾಕಿದರು.
ಇದಕ್ಕೂ ಮುನ್ನ ತಮ್ಮ ಸ್ಪರ್ಧೆ ವಿಚಾರವಾಗಿನ ವಿಷಯ ಹಂಚಿಕೊಂಡ ಅವರು, ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಛೆಯಿಂದ ಸಾರ್ವತ್ರಿಕವಾಗಿ ಕಣಕ್ಕಿಳಿಯುವ ಬಗ್ಗೆ ಹೇಳಿಕೆ ಕೊಟ್ಟಿದೆ. ಜೊತೆಗೆ ಪಕ್ಷದ ವೇದಿಕೆಯಲ್ಲೂ ವಿನಂತಿ ಮಾಡಿಕೊಂಡಿದ್ದೆ. ಆದರೆ ನನ್ನ ಪ್ರಯತ್ನಕ್ಕೆ ಪಕ್ಷದೊಳಗಿನಿಂದ ಸಕಾರಾತ್ಮಕ ಸಂದೇಶ ಬರುತ್ತದೆನ್ನುವ ವಿಶ್ವಾಸ ಇಲ್ಲ. ಹೀಗಾಗಿ ಬಂಡಾಯದ ತೀರ್ಮಾನಕ್ಕೆ ಬಂದಿರುವೆ ಎಂದರು.
ಈಶ್ವರಪ್ಪ ಸುಮ್ಮನೆ ನನ್ನನ್ನು ಕೆಣಕಿದ್ದಾರೆ. ಅವರ ಏಕವಚನ ಪ್ರಯೋಗ ಅವರ ಶಿಕ್ಷಣದ ಮಟ್ಟವನ್ನು ತೋರಿಸುತ್ತಿದೆ. ಈಶ್ವರಪ್ಪನಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ‘ನನಗೆ ಅವನದ್ಯಾವ ಲೆಕ್ಕ’ ಎಂದು ಈಶ್ವರಪ್ಪ ಹೇಳಿದ್ದನ್ನು ಈಗ ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಆಯನೂರು ಹೇಳಿದರು.
ಈ ಸುದ್ದಿ ಓದಿದ್ದೀರಾ? :ಶಿಗ್ಗಾಂವಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ
ಈಶ್ವರಪ್ಪ ಅವರ ಬಳಿ ಅಪಾರ ದುಡ್ಡಿದೆ. ಚುನಾವಣೆಗಾಗಿ ವಾರ್ಡ್ ಗಳಲ್ಲಿ ಹಣ ಡಿಪಾಸಿಟ್ ಇಟ್ಟಿದ್ದೀರಿ ಎಂಬುದು ಗೊತ್ತಿದೆ. ಆದರೆ ಈ ಸಲ ನಿಮ್ಮ ಹಣ ಲೆಕ್ಕಕ್ಕೆ ಇಲ್ಲ ಎಂಬುದನ್ನು ತೋರಿಸುತ್ತೇನೆ” ಎಂದು ಆಯನೂರು ಕೆಎಸ್ಈಗೆ ತಿರುಗೇಟು ನೀಡಿದರು.
”32 ವರ್ಷಗಳ ರಾಜಕೀಯದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿ ಗಲಭೆ ಮಾಡಿಸಿ ಚುನಾವಣೆ ಮಾಡಿರುವುದು ಬಿಟ್ಟು ಈಶ್ವರಪ್ಪ ಬೇರೇನೂ ಮಾಡಿಲ್ಲ. ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದು ಮಂಜುನಾಥ್ ಹೇಳಿದರು.
ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ಆಯನೂರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.