“ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ಗೆ ನೀಡಿರುವ ಐಟಿ ನೋಟಿಸ್, ಎಲ್ಲ ವಿಪಕ್ಷಗಳಿಗೆ ಮತ್ತು ದೇಶದ ಜನರಿಗೆ ಎಚ್ಚರಿಕೆ ಸಂದೇಶವಾಗಿದೆ” ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಪಿ ಚಿದಂಬರಂ ಹೇಳಿದರು.
ತಮಿಳುನಾಡಿನ ಪುದುಕೊಟ್ಟೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ಗೆ ಆದಾಯ ತೆರಿಗೆ ಇಲಾಖೆಯು 135 ಕೋಟಿ ರೂಪಾಯಿಗಳ ಐಟಿ ನೋಟಿಸ್ ಅನ್ನು ನೀಡಲಾಗಿದ್ದು, ಬಿಜೆಪಿಯು ವಿಪಕ್ಷಗಳನ್ನು ನಾಶ ಮಾಡಲು ಉದ್ದೇಶ ಹೊಂದಿದೆ” ಎಂದು ದೂರಿದರು.
“ಬಿಜೆಪಿಯು ಚುನಾವಣಾ ಬಾಂಡ್ಗಳ ಮೂಲಕ ಸುಮಾರು 8,250 ಕೋಟಿ ರೂಪಾಯಿಯನ್ನು ಪಡೆದುಕೊಂಡಿದೆ. ಆದರೆ ಬಿಜೆಪಿ ಸರ್ಕಾರವು ಕಾಂಗ್ರೆಸ್ ಮೇಲೆ 135 ಕೋಟಿ ರೂಪಾಯಿಯ ದಂಡವನ್ನು ವಿಧಿಸಿದೆ. ಇದು ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನರಿಗೆ ಬಿಜೆಪಿಯು ಎಲ್ಲ ವಿಪಕ್ಷಗಳನ್ನು ನಾಶ ಮಾಡಲು ಬಯಸುತ್ತದೆ ಎಂಬ ಎಚ್ಚರಿಕೆಯಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಬ್ಯಾಂಕ್ ಖಾತೆ ನಿರ್ಬಂಧ ಉಲ್ಲೇಖ; ಕೇಜ್ರಿವಾಲ್ ಬಂಧನದ ಬಗ್ಗೆ ಮತ್ತೆ ಹೇಳಿಕೆ ನೀಡಿದ ಅಮೆರಿಕಾ
“ಈ ದೇಶದಲ್ಲಿ ಬಿಜೆಪಿ ಮಾತ್ರ ಇರಬೇಕು ಎಂಬುವುದು ಅದರ ನಾಯಕರ ಬಯಕೆ. ಇದುವೇ ‘ಒಂದು ದೇಶ, ಒಂದು ಚುನಾವಣೆ’ ಎಂಬ ಅಜೆಂಡಾದ ಭಾಗವಾಗಿದೆ. ಇತ್ತು ಮತ್ತೇನಲ್ಲ ‘ಒಂದು ದೇಶ, ಒಂದು ಪಕ್ಷ’ ಆಗಿದೆ. ಇದು ಎಲ್ಲರಿಗೂ ನೀಡಲಾಗಿರುವ ಎಚ್ಚರಿಕೆ. ಜನರಿಗೆ ಇದು ಅರ್ಥವಾಗಲಿದೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಅಭಿಪ್ರಾಯಿಸಿದರು.
ಈ ನಡುವೆ ಶುಕ್ರವಾರ ಕಾಂಗ್ರೆಸ್ಗೆ ಮತ್ತೊಂದು ಆದಾಯ ತೆರಿಗೆ ನೋಟಿಸ್ ಅನ್ನು ನೀಡಲಾಗಿದೆ. ಬರೋಬ್ಬರಿ 1,823.08 ಕೋಟಿ ರೂಪಾಯಿ ದಂಡವನ್ನು ಪಾವತಿಸುವಂತೆ ಕಾಂಗ್ರೆಸ್ಗೆ ಐಟಿ ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನ ಸೀಝ್ ಮಾಡಲಾಗಿದೆ. “ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳು ಆರ್ಥಿಕವಾಗಿ ಕುಗ್ಗಿಸಲು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಹುನ್ನಾರ ಇದಾಗಿದೆ” ಎಂದು ಕಾಂಗ್ರೆಸ್ ನಾಯಕರುಗಳು ಆರೋಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆ ಬಂದ್ ಮಾಡಿರುವುದನ್ನು ಯುಎಸ್ ವಕ್ತಾರರು ಕೂಡಾ ಪ್ರಸ್ತಾಪಿಸಿದ್ದು, “ಈ ಪ್ರಕರಣದ ಬೆಳವಣಿಗೆ ಬಗ್ಗೆ ಗಮನಹರಿಸುತ್ತೇವೆ” ಎಂದು ಹೇಳಿದ್ದಾರೆ.