- ಶಾಸಕನ ಪುತ್ರ ಪ್ರಶಾಂತ್ಗೆ ಜಾಮೀನು ನೀಡಲು ನಿರಾಕರಣೆ
- ಏ. 15ಕ್ಕೆ ಆದೇಶ ನೀಡಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ
ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿಯ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏ. 15ರ ವರೆಗೆ ಆದೇಶ ಕಾಯ್ದಿರಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ ಜಯಂತಕುಮಾರ್ ಅವರು ಲಂಚ ಪ್ರಕರಣದ 1ನೇ ಆರೋಪಿ ಶಾಸಕ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದರು.
ಆರೋಪಿ ವಿರೂಪಾಕ್ಷಪ್ಪ ಪರ ಹಿರಿಯ ವಕೀಲ ಸಿ ವಿ ನಾಗೇಶ್ “ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷರಾಗಿರುವ ಶಾಸಕ ಮಾಡಾಳ್ ಅವರಿಗೆ ಟೆಂಡರ್ ಕರೆಯುವ ಅಧಿಕಾರ ಇಲ್ಲ. ಹಣ ಸಿಕ್ಕಿರುವ ಸ್ಥಳ ಕೂಡ ಶಾಸಕರಿಗೆ ಸೇರಿಲ್ಲ. ಜೊತೆಗೆ ಇವರ ಬಂಧನವು ಕೂಡ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮಾಡಿಲ್ಲ. ಪ್ರಕರಣದ ವಿಚಾರಣೆ ಕೂಡ ಈಗಾಗಲೇ ಮುಗಿದಿರುವುದರಿಂದ ಮಾಡಾಳ್ ಅವರಿಗೆ ಜಾಮೀನು ನೀಡಬೇಕು” ಎಂದು ಮನವಿ ಮಾಡಿಕೊಂಡರು.
ಈ ಸುದ್ದಿ ಓದಿದ್ದೀರಾ? : ಚಿತ್ರದುರ್ಗ ಕ್ಷೇತ್ರ | ಸೌಭಾಗ್ಯ ಬಸವರಾಜನ್-ರಘು ಆಚಾರ್ ರಣತಂತ್ರವೇನು?
ಲೋಕಾಯುಕ್ತ ಪೊಲೀಸರ ಪರ ವಾದ ಮಂಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಸಂತೋಷ್ ನಾಗರಾಳೆ “ಶಾಸಕ ಮಾಡಾಳ್ ಪುತ್ರ ಪ್ರಶಾಂತ್ ಅವರು ಒಡೆತನದ ಮನೆಯಲ್ಲಿ 6.10 ಕೋಟಿ ರೂಪಾಯಿಗೂ ಅಧಿಕ ಹಣ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿದೆ. ಶಾಸಕರನ್ನು ಸುಪ್ರೀಂ ಕೋರ್ಟ್ ನಿಯಮಾವಳಿಗಳ ಪ್ರಕಾರವೇ ಬಂಧಿಸಲಾಗಿದೆ. ಜೊತೆಗೆ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಇಂತಹ ವೇಳೆ ಆರೋಪಿಗಳಿಗೆ ಜಾಮೀನು ನೀಡಿದರೆ, ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ” ಎಂದು ವಾದ ಮಂಡಿಸಿದರು.
ಇಬ್ಬರು ವಕೀಲರ ವಾದ ಪ್ರತಿವಾದಗಳನ್ನು ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏ. 15ರ ವರೆಗೆ ಆದೇಶ ಕಾಯ್ದಿರಿಸಿದೆ.
ಇನ್ನು ಶಾಸಕರ ಪುತ್ರನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಇದೇ ನ್ಯಾಯಲಯವು ಆರೋಪಿಯು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಜೊತೆಗೆ ತನಿಖೆಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಇರುವುದರಿಂದ ಎಂ ವಿ ಪ್ರಶಾಂತ್ ಕುಮಾರ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತು.