- ನಿಗಮ ಮಂಡಳಿ ಅಧ್ಯಕ್ಷ/ಸದಸ್ಯರ ನಾಮ ನಿರ್ದೇಶನ ರದ್ದುಗೊಳಿಸಲು ಸೂಚನೆ
- ಮೇ 22ರಿಂದ ಅನ್ವಯಿಸುವಂತೆ ಆದೇಶ ಹೊರಡಿಸಿದ ಮುಖ್ಯ ಕಾರ್ಯದರ್ಶಿ
ಸಚಿವ ಸಂಪುಟ ವಿಸ್ತರಣೆ ಬಳಿಕ ಎದುರಾಗಲಿರುವ ಅಸಮಾಧಾನ ಶಮನಕ್ಕೆ ರಾಜ್ಯ ಸರ್ಕಾರ ಉಪಾಯ ರೂಪಿಸಿದ್ದು ಅದಕ್ಕಾಗಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರು, ಸದಸ್ಯರುಗಳ ನೇಮಕಕ್ಕೆ ಮುಂದಾಗಿದೆ.
ಈ ಸಲುವಾಗಿ ಆದೇಶವೊಂದನ್ನು ಹೊರಡಿಸಿರುವ ಸರ್ಕಾರ ಮೇ 22ರಿಂದ ಅನ್ವಯವಾಗುವಂತೆ ನಿಗಮ ಮಂಡಳಿಗಳಿಗೆ ಆಗಿದ್ದ ನಾಮನಿರ್ದೇಶನವನ್ನು ರದ್ದು ಪಡಿಸುವಂತೆ ತಿಳಿಸಿದೆ.
ರಾಜ್ಯ ಸರ್ಕಾರ ಇದೇ ತಿಂಗಳ 28ರಿಂದ ಪೂರ್ಣ ಪ್ರಮಾಣದ ಸದಸ್ಯರೊಂದಿಗೆ ಕಾರ್ಯಾರಂಭ ಮಾಡಬೇಕಿದೆ. ಹೀಗಾಗಿ ಶೀಘ್ರದಲ್ಲೇ ಮಂತ್ರಿ ಮಂಡಲ ವಿಸ್ತರಣೆಗೂ ಸರ್ಕಾರ ಮುಂದಾಗಿದೆ.
ಈ ವೇಳೆ ಸಚಿವ ಸ್ಥಾನ ವಂಚಿತರು ಬಂಡಾಯ ಏಳುವ ಸಾಧ್ಯತೆ ಇರುವುದರಿಂದ, ಸಚಿವ ಸ್ಥಾನಕ್ಕೆ ಪರಿಗಣಿಸಲಾಗದಿರುವ ಶಾಸಕರಿಗೆ ನಿಗಮಮಂಡಳಿಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ ಅಸಮಾಧಾನ ಶಮನಕ್ಕೆ ರಾಜ್ಯ ಸರ್ಕಾರ ಈ ಮಾರ್ಗ ಕಂಡುಕೊಂಡಿದೆ.
ಈ ಸುದ್ದಿ ಓದಿದ್ದೀರಾ?: ಸಿಎಂ ಸಿದ್ದರಾಮಯ್ಯಗೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಆಪ್ತ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರ ನೇಮಕ
ಮೇ 22ರಿಂದ ಆರಂಭವಾಗಿರುವ 16ನೇ ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿ ಸರ್ಕಾರದ ಭಾಗವಾಗಲು ಕಾದು ನಿಂತಿದ್ದಾರೆ.
ಈ ಬೆಳವಣಿಗೆಗೆ ಪೂರಕವಾಗುವಂತೆ ಸರ್ಕಾರ ನಾಮನಿರ್ದೇಶನ ರದ್ದು ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಲು ಸಿದ್ದತೆ ಆರಂಭಿಸಿದೆ.